ತುರುವೇಕೆರೆ ತಾಲೂಕಿನ ನೀರಗುಂದ ಗ್ರಾಮದಲ್ಲಿ ನಾಲ್ಕೈದು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಹಲವಾರು ಕಾಮಗಾರಿಗಳನ್ನು ಕೂಡಲೇ ಪರಿಹರಿಸಿ ಎಂದು ಲೋಕಮ್ಮನಹಳ್ಳಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರೂ, ಹಾಲಿ ನೀರಗುಂದ ಹಾಗೂ ಅಜ್ಜೇನಹಳ್ಳಿಯ ಸದಸ್ಯ, ನಿವೃತ್ತ ಅಪರ ಜಿಲ್ಲಾಧಿಕಾರಿ ಅಲ್ಲಪ್ಪ ತಾಲೂಕು ಆಡಳಿತವನ್ನು ಒತ್ತಾಯಿಸಿದ್ದಾರೆ.
ನೀರಗುಂದ ಗ್ರಾಮದಲ್ಲಿ ಕಳೆದ ಒಂದೆರೆಡು ವರ್ಷಗಳ ಹಿಂದೆ ಪ್ರಾರಂಭಗೊಂಡಿರುವ ಜಲಜೀವನ್ ಯೋಜನೆಯ ಮನೆ ಮನೆಗೆ ನೀರು ಹರಿಸುವ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ. ಗ್ರಾಮದ ಬಹುತೇಕ ಕಡೆ ಕಾಮಗಾರಿ ಅರ್ಧಂಬರ್ಧ ಆಗಿದೆ. ಆದರೆ ದಲಿತ ಕಾಲೋನಿಯಲ್ಲಿ ಕಳೆದ ಆರೇಳು ತಿಂಗಳ ಹಿಂದೆಯೇ ಕಾಮಗಾರಿಗಾಗಿ ರಸ್ತೆಯ ಮಧ್ಯ ಭಾಗದಲ್ಲೇ ಪೈಪುಗಳನ್ನು ಅಳವಡಿಸುವ ಸಲುವಾಗಿ ದೊಡ್ಡದಾಗಿ ಸಿಮೆಂಟ್ ರಸ್ತೆಯನ್ನೇ ಕತ್ತರಿಸಲಾಗಿದೆ. ಇದುವರೆಗೂ ಕಾಮಗಾರಿ ಮಾಡದೇ ಉದಾಸೀನ ಮಾಡಲಾಗಿದೆ. ಜನರು ಓಡಾಡುವುದೇ ದುಸ್ತರವಾಗಿದೆ. ಹಲವಾರು ಮಂದಿಗೆ ಅಪಘಾತವಾಗಿ ಗಾಯಗೊಂಡಿದ್ದಾರೆ. ಹಲವಾರು ವಾಹನಗಳು ಜಖಂಗೊಂಡಿವೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳನ್ನು ವಿಚಾರಿಸಿದರೆ ಉದಾಸೀನದ ಉತ್ತರ ದೊರೆಯುತ್ತಿದೆ ಎಂದು ಅಲ್ಲಪ್ಪ ದೂರಿದ್ದಾರೆ.

ಗ್ರಾಮದ ಮಧ್ಯಭಾಗದಲ್ಲಿ ತಾಲೂಕು ಪಂಚಾಯಿತಿಯಿಂದ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಿರ್ಮಿಸಿರುವ ಕಟ್ಟಡವೊಂದು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. ಯಾವುದೇ ಕ್ಷಣದಲ್ಲಿ ಬಿದ್ದುಹೋಗುವ ಹಂತದಲ್ಲಿದೆ. ಅದನ್ನು ಕೂಡಲೇ ತೆರವುಗೊಳಿಸಿ ಗ್ರಾಮದ ಜನರು ಶವದ ಸಂಸ್ಕಾರದ ವಿಧಿ ವಿಧಾನಗಳನ್ನು ಮಾಡುವ ಸಲುವಾಗಿ ಸೂಕ್ತ ಕಟ್ಟಡವನ್ನು ನಿರ್ಮಿಸಿಕೊಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಸುಮಾರು ನೂರು ವರ್ಷದ ಹಿಂದೆ ನಿರ್ಮಾಣ ಮಾಡಿರುವ ಹಳೆಯ ಪೋಸ್ಟ್ ಆಫೀಸ್ ಸಹ ಸಂಪೂರ್ಣ ಹಾಳಾಗಿದೆ. ಈ ಕಟ್ಟಡವನ್ನೂ ಸಹ ತೆರವುಗೊಳಿಸಿ ಸಾರ್ವಜನಿಕರ ಅನುಕೂಲಕ್ಕೆ ಅಗತ್ಯವಿರುವ ಕಟ್ಟಡವೊಂದನ್ನು ನಿರ್ಮಿಸುವಂತೆ ಅಲ್ಲಪ್ಪ ಒತ್ತಾಯಿಸಿದ್ದಾರೆ. ನೀರಗುಂದಕ್ಕೆ ಜಲಜೀವನ್ ಯೋಜನೆಯಡಿ ಮನೆ ಮನೆಗೆ ನೀರು ಕೊಡುವ ಸಲುವಾಗಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸಿದ್ದಾರೆ. ಇದನ್ನೂ ಸಹ ಸರಿಯಾದ ರೀತಿ ನಿರ್ಮಿಸಿಲ್ಲ. ಕಾಮಾಗಾರಿ ಅರ್ಧಂಬರ್ಧ ಆಗಿದೆ. ಸರಿಯಾಗಿ ಕ್ಯೂರಿಂಗ್ ಸಹ ಮಾಡಿಲ್ಲ ಎಂದು ಅಲ್ಲಪ್ಪ ದೂರಿದರು.

ನೀರಗುಂದದಲ್ಲಿ ಇತ್ತೀಚೆಗೆ ನಿರ್ಮಿಸಿರುವ ಕೋಡಿಯ ಮೇಲಿನ ಸೇತುವೆ ಕಾಮಗಾರಿಯಲ್ಲಿ ಇನ್ನೂ ಕೆಲವು ಕೆಲಸ ಬಾಕಿ ಇದೆ. ನೀರಗುಂದದಿಂದ ವೈಟಿ ರಸ್ತೆಯವರೆಗಿನ ರಸ್ತೆ ಸಂಪೂರ್ಣ ಹಾಳಾಗಿದೆ. ಅಂಬೇಡ್ಕರ್ ಭವನ ಕಾಮಗಾರಿ ಸ್ಥಗಿತಗೊಂಡಿದೆ. ಸಾಕಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮದಲ್ಲಿ ಅಳವಡಿಸಲಾಗಿದ್ದ ಹೈಮಾಸ್ ಲೈಟ್ ಗಳು ಕೆಟ್ಟು ಹೋಗಿ ಹಲವಾರು ತಿಂಗಳುಗಳೇ ಕಳೆದಿವೆ. ಆದರೂ ಸಹ ಅದನ್ನು ರಿಪೇರಿ ಮಾಡಿಸುವ ಮನಸ್ಸನ್ನು ಲೋಕಮ್ಮನಹಳ್ಳಿ ಗ್ರಾಮ ಪಂಚಾಯಿತಿಯ ಪಿಡಿಓ ಮಾಡಿಲ್ಲ ಎಂದು ಅಲ್ಲಪ್ಪ ಆಕ್ಷೇಪಿಸಿದರು.
ಅಜ್ಜೇನಹಳ್ಳಿಯಲ್ಲಿರುವ ಮಂಟಪಕ್ಕೂ ಹೈಮಾಸ್ ಲೈಟ್ ನ್ನು ಅಳವಡಿಸಬೇಕು, ಅಜ್ಜೇನಹಳ್ಳಿಯಿಂದ ನೀರಗುಂದ ರಸ್ತೆಯವರೆಗೆ ಸುಸಜ್ಜಿತವಾದ ಸಿಮೆಂಟ್ ರಸ್ತೆ ಮತ್ತು, ಚರಂಡಿಯನ್ನು ನಿರ್ಮಿಸಬೇಕು. ನೀರಗುಂದ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕವನ್ನು ನೀಡಬೇಕು. ಈ ಎಲ್ಲಾ ಸಮಸ್ಯೆಗಳನ್ನು ಕೂಡಲೇ ಬಗೆಹರಿಸದಿದ್ದಲ್ಲಿ ಗ್ರಾಮಸ್ಥರೊಡನೆ ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಅಲ್ಲಪ್ಪ ಎಚ್ಚರಿಕೆ ನೀಡಿದ್ದಾರೆ.
ನೀರುಗುಂದದಲ್ಲಿರುವ ಕೆರೆ ತುಂಬಿದೆ. ಕೆರೆಯ ದಡದಲ್ಲಿ ಸೂಕ್ತ ರಕ್ಷಣಾ ವ್ಯವಸ್ಥೆ ಇಲ್ಲದಿರುವ ಕಾರಣ ಸಾವು ನೋವು ಸಂಭವಿಸುತ್ತಿದೆ. ಆದ್ದರಿಂದ ಕೆರೆಯ ದಡದುದ್ದಕ್ಕೂ ಬೇಲಿ ನಿರ್ಮಾಣ ಮಾಡಬೇಕು. ಕೆರೆಯ ಏರಿಯ ಮೇಲೆ ದೊಡ್ಡ ಗಾತ್ರದಲ್ಲಿ ಗಿಡಮರಗಳು ಬೆಳೆದಿದೆ. ಇದರಿಂದ ಕೆರೆಯ ಏರಿಗೆ ತೊಂದರೆಯಾಗುವ ಎಲ್ಲಾ ಸಾಧ್ಯತೆಗಳು ಇವೆ ಅಲ್ಲದೇ ಕಾಡು ಪ್ರಾಣಿಗಳ ವಾಸಸ್ಥಾನವಾಗಿದೆ. ಆದುದರಿಂದ ಕೂಡಲೇ ಕೆರೆಯ ಮೇಲಿರುವ ಗಿಡಗಂಟೆಗಳನ್ನು ತೆರವುಗೊಳಿಸಬೇಕೆಂದು ಅಲ್ಲಪ್ಪ ಆಗ್ರಹಿಸಿದರು.
ವರದಿ – ಎಸ್ ನಾಗಭೂಷಣ್





