ಚಿರತೆ ದಾಳಿಯಿಂದ ಮೃತಪಟ್ಟ ಅರೇಮಲ್ಲೇನಹಳ್ಳಿಯ ಸುಜಾಳ ರವರ ಕುಟುಂಬಕ್ಕೆ ರಾಜ್ಯ ಯುವ ಜೆಡಿಎಸ್ ನ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ಒಂದು ಲಕ್ಷ ರೂಗಳ ನೆರವು ನೀಡಿದ್ದಾರೆ.
ಮೃತಪಟ್ಟ ಸುಜಾತಾರ ಮನೆಗೆ ಧಾವಿಸಿ ಸಾಂತ್ವನ ಹೇಳಿದ ಅವರು ತಾಲೂಕಿನಲ್ಲಿ ಚಿರತೆ ಕಾಟ ಹೆಚ್ಚಾಗಿದೆ. ಅರೇಮಲ್ಲೆನಹಳ್ಳಿಯಲ್ಲಿ ಆಗಿರುವ ಪ್ರಾಣ ಹಾನಿ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಮೂರ್ನಾಲ್ಕು ಬಾರಿ ಚಿರತೆ ಕಾಟದ ಕುರಿತು ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳದಿರುವ ಕಾರಣ ಈ ಅನಾಹುತ ಸಂಭವಿಸಿದೆ. ಇದಕ್ಕೆ ಅರಣ್ಯ ಇಲಾಖೆಯೇ ಜವಾಬ್ದಾರಿ ಹೊರಬೇಕು ಎಂದು ದೂರಿದರು.
ಸುಜಾತಾ ರವರು ಬಲಿಯಾದ ನಂತರ ಎಚ್ಚೆತ್ತು ಕೊಂಡಿರುವ ಅರಣ್ಯ ಇಲಾಖೆ ಮೊದಲೇ ಜಾಗೃತರಾಗಿದ್ದರೆ ಇಂತಹ ಅನಾಹುತ ಸಂಭವಿಸುತ್ತಿರಲಿಲ್ಲ. ಈಗ ಅರಣ್ಯ ಇಲಾಖೆಯ ಕಾರ್ಯಾಚರಣೆಯಿಂದ ಒಂದು ಚಿರತೆಯನ್ನು ಸೆರೆ ಹಿಡಿಯಲಾಗಿದೆ. ಇದು ಸ್ವಾಗತಾರ್ಹವೇ . ಆದರೂ ಸಹ ಇನ್ನೂ ಮೂರ್ನಾಲ್ಕು ಚಿರತೆಗಳು ಇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕೂಡಲೇ ಅರಣ್ಯ ಇಲಾಖೆಯವರು ಹೆಚ್ಚು ಬೋನುಗಳನ್ನು ಇಟ್ಟು ಚಿರತೆಗಳನ್ನು ಸೆರೆಹಿಡಿಯಬೇಕೆಂದು ದೊಡ್ಡಾಘಟ್ಟ ಚಂದ್ರೇಶ್ ಆಗ್ರಹಿಸಿದ್ದಾರೆ.
ಸದ್ಯ ಸರ್ಕಾರದಿಂದ 20 ಲಕ್ಷ ಪರಿಹಾರ ಘೋಷಣೆಯಾಗಿದೆ. ಇದರಲ್ಲಿ 5 ಲಕ್ಷದ ಚೆಕ್ ನೀಡಲಾಗಿದೆ. ಉಳಿದ 15 ಲಕ್ಷದ ಪರಿಹಾರವನ್ನು ತಡಮಾಡದೇ ವಿತರಿಸಬೇಕು. ಸುಜಾತಾರ ಕುಟುಂಬ ಅತ್ಯಂತ ಕಡುಬಡತನದಲ್ಲಿದೆ. ಅಲ್ಲದೇ ಇಬ್ಬರು ಮಕ್ಕಳು ಇದ್ದಾರೆ. ಹಾಗಾಗಿ ಮುಖ್ಯಮಂತ್ರಿಗಳು ಇನ್ನೂ ಹೆಚ್ಚಿನ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎ.ಬಿ.ಜಗದೀಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸ್ವಾಮಿ, ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕ ಜಗದೀಶ್, ಮಾಜಿ ಅಧ್ಯಕ್ಷ ಹೇಮಚಂದ್ರು, ಗ್ರಾಮದ ಮುಖಂಡರಾದ ಕೃಷ್ಣೇಗೌಡ, ಲಕ್ಷ್ಮಣ ಗೌಡ, ರವಿಗೌಡ ಸೇರಿದಂತೆ ಹಲವರು ಇದ್ದರು.
ವರದಿ – ಎಸ್ ನಾಗಭೂಷಣ್





