ರೈತರು ಸಹಜ ಕೃಷಿಯತ್ತ ಮುಖ ಮಾಡಿ ವಿಷಮುಕ್ತ ತರಕಾರಿ, ಹಣ್ಣು, ಆಹಾರಗಳನ್ನು ಬೆಳೆದು ಸೇವಿಸಬೇಕು ಎಂದು ತುಮಕೂರು ಸಹಜ ಕೃಷಿ ಬಳಗದ ಮುಖ್ಯಸ್ಥ ರವಿವರ್ಮ ಕುಮಾರ್ ತಿಳಿಸಿದರು.
ತುರುವೇಕೆರೆ ತಾಲ್ಲೂಕಿನ ಕಸಬಾ ಹೋಬಳಿಯ ಮುದ್ಲಾಪುರ ಗ್ರಾಮದ ಶಶಿಕುಮಾರ್ ಅವರ ತೋಟದಲ್ಲಿ ನಡೆದ ಚೌಕಾಬಾರ ಏರುಮಡಿ ಪದ್ದತಿಯ ಅಚ್ಚರಿ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರು ಚೌಕಾಬಾರ ಏರುಮಡಿ ಪದ್ದತಿಯಲ್ಲಿ ಯಾವುದೇ ರಾಸಾಯನಿಕಗಳನ್ನು ಬಳಸದೆ ತರಕಾರಿಗಳನ್ನು ಸಹಜವಾಗಿ ಬೆಳೆದು ತಮ್ಮ ಆಹಾರವಾಗಿ ಸೇವಿಸಬೇಕು. ಆಗ ಮಾತ್ರ ಆರೋಗ್ಯವಂತ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬ ರೈತರು ಜಪಾನಿನ ಕೃಷಿ ವಿಜ್ಞಾನಿ ಮಸನೊಬು ಫುಕುವೊಕ ಹಾಗೂ ದಾವಣಗೆರೆ ಐಕಾಂತಿಕ ರಾಘವ ಅವರ ಸಹಜ ಕೃಷಿ ಪದ್ದತಿಯನ್ನು ಅನುಸರಿಸಿದರೆ ಪರಿಪೂರ್ಣ ವಿಷಮುಕ್ತ ಆಹಾರ ಸೇವಿಸಬಹುದು. ತಮ್ಮ ಜಮೀನುಗಳಲ್ಲಿ ಸಹಜವಾಗಿ ಬಹು ಬೆಳೆಗಳನ್ನು ಬೆಳೆಯುವ ಮೂಲಕ ಸಸ್ಯ ವೈವಿಧ್ಯತೆ ಹಾಗೂ ಜೀವ ವೈವಿಧ್ಯತೆ ಕಾಪಾಡಬೇಕು. ಇದರಿಂದ ರೈತರ ಭೂಮಿಯಲ್ಲಿ ಫಲವತ್ತತೆ ಹೆಚ್ಚುತ್ತದೆ ಎಂದು ತಿಳಿಸಿದರು.
ಸಹಜ ಕೃಷಿಕ ತಿಪಟೂರು ಯೋಗಾನಂದಸ್ವಾಮಿ ಮಾತನಾಡಿ ರೈತರು ಸಹಜ ಕೃಷಿಯ ಜೊತೆಗೆ ಸಹಜ ಜೀವನವನ್ನು ಮಾಡುತ್ತಾ ಪ್ರಕೃತಿಯೊಂದಿಗೆ ಬದುಕುವುದನ್ನು ಕಲಿಯಬೇಕು. ಚೌಕಾಬಾರ ಏರುಮಡಿ ಪದ್ದತಿಯಲ್ಲಿ 62 ಬಗೆಯ ತರಕಾರಿಗಳನ್ನು ಬೆಳೆಯಬಹುದು ಎಂದ ಅವರು ಸಹಜ ಕೃಷಿಯ ಅಂತಿಮ ಗುರಿ ಕೇವಲ ಆಹಾರ ಪದಾರ್ಥಗಳನ್ನು ಬೆಳೆಯುವುದಲ್ಲ ಮನುಷ್ಯರನ್ನು ಉತ್ತಮರನ್ನಾಗಿ ರೂಪಿಸುವುದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಹಜ ಕೃಷಿಕರಾದ ರಾಜಶೇಖರ್, ಪುಟ್ಟರಾಜು, ಉಮೇಶ್, ಶಶಿಕುಮಾರ್, ಗಂಗಣ್ಣ, ಮಹಾಂತೇಶ್, ನವೀನ್ ಕುಮಾರ್, ಮಾಲಿಂಗಪ್ಪ, ಪ್ರಸಾದ್, ಜಯರಾಮೇಗೌಡ ಸೇರಿದಂತೆ ಜಿಲ್ಲೆಯ ಸಹಜ ಕೃಷಿಕರು ಉಪಸ್ಥಿತರಿದ್ದರು.





