ದೇರಳಕಟ್ಟೆ ಖಾಸಗಿ ಆಸ್ಪತ್ರೆ ಸಮೀಪದ ರಿಕ್ಷಾ ಪಾರ್ಕ್ ಬಳಿ ನಿಂತಿರುವ ಕೊಳಚೆ ನೀರಿನಿಂದ ಸಾರ್ವಜನಿಕರಿಗೆ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ ಎಂದು ಆರೋಪಿಸಿ ತುಳು ನಾಡ ರಕ್ಷಣಾ ವೇದಿಕೆ ಹಾಗೂ ಆಟೋರಿಕ್ಷಾ ಚಾಲಕರ ಘಟಕದ ಆಶ್ರಯದಲ್ಲಿ ಪ್ರತಿಭಟನೆ ಸಭೆ ನಡೆಯಿತು.
ಪ್ರತಿಭಟನೆ ಸಭೆ ದೇರಳಕಟ್ಟೆ ಖಾಸಗಿ ಆಸ್ಪತ್ರೆ ಬಳಿ ಇರುವ ರಿಕ್ಷಾ ಪಾರ್ಕ್ನಲ್ಲಿ ಜರುಗಿತು. ಸಭೆಯಲ್ಲಿ ಮಾತನಾಡಿದ ತುಳು ನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ದೇರಳಕಟ್ಟೆ ಪರಿಸರದಲ್ಲಿ ನಿರ್ಮಾಣವಾಗಿರುವ ಬಹುಮಹಡಿ ಕಟ್ಟಡಗಳಿಗೆ ಕೊಳಚೆ ನೀರು ಸರಬರಾಜು ಹಾಗೂ ಹೊರಹರಿವು ವ್ಯವಸ್ಥೆ ಸಮರ್ಪಕವಾಗಿ ಮಾಡಿಲ್ಲ. ಇದರ ಪರಿಣಾಮವಾಗಿ ಕೊಳಚೆ ನೀರು ಆಸ್ಪತ್ರೆ ಸಮೀಪದ ರಿಕ್ಷಾ ಪಾರ್ಕ್ ಬಳಿ ಶೇಖರಗೊಂಡು ದುರ್ವಾಸನೆ ಉಂಟುಮಾಡುತ್ತಿದೆ ಎಂದು ದೂರಿದರು.
ಈ ದುರ್ವಾಸನೆಯಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಸಾರ್ವಜನಿಕರ ಆರೋಗ್ಯಕ್ಕೆ ಅಪಾಯ ಉಂಟಾದರೂ ಸಂಬಂಧಪಟ್ಟ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದೆ ಎಂದು ಅವರು ಆರೋಪಿಸಿದರು.
ಪ್ರಶಾಂತ್ ಭಟ್ ಕಡಬ ಮಾತನಾಡಿ, ದೇರಳಕಟ್ಟೆ ಖಾಸಗಿ ಆಸ್ಪತ್ರೆ ಬಳಿ ಶೇಖರಗೊಂಡಿರುವ ಕೊಳಚೆ ನೀರಿನ ನಿರ್ಮೂಲನೆ ಕಾರ್ಯವನ್ನು ತಕ್ಷಣ ಕೈಗೊಳ್ಳಬೇಕು. ಬಹುಮಹಡಿ ಕಟ್ಟಡಗಳ ಮಾಲಕರು ತಮ್ಮ ಕಟ್ಟಡಗಳಿಂದ ಹೊರಹೊಮ್ಮುವ ಕೊಳಚೆ ನೀರು ಸರಿಯಾಗಿ ಹರಿಯುವಂತೆ ಅಗತ್ಯ ವ್ಯವಸ್ಥೆ ಕಲ್ಪಿಸುವಂತೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ರೀತಿಯಲ್ಲಿ ಕೊಳಚೆ ನೀರು ಶೇಖರಣೆಯಾಗುವುದನ್ನು ತಡೆಗಟ್ಟಲು ಸಂಬಂಧಪಟ್ಟ ಇಲಾಖೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತುಳು ನಾಡ ರಕ್ಷಣಾ ವೇದಿಕೆ ಮುಖಂಡರಾದ ಕ್ಲೀಟಸ್ ಲೋಬೊ ಅಳಕೆ, ರಕ್ಷಿತ್ ಕುಡುಪು ಹಾಗೂ ರಿಕ್ಷಾ ಚಾಲಕರು ಮತ್ತು ಮಾಲಕರು ಉಪಸ್ಥಿತರಿದ್ದರು.





