ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ(ನರೇಗಾ) ಹೆಸರನ್ನು ತಿದ್ದುಪಡಿ ಮಾಡಿರುವ ಕೇಂದ್ರ ಸರ್ಕಾರದ ನಿಲುವನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಂಟಿ ಕಾರ್ಯದರ್ಶಿ ಹಾಗೂ ಪಕ್ಷದ ವಕ್ತಾರ ಎಲ್ ಜೀವನ್ ಖಂಡಿಸಿದ್ದಾರೆ.
ತುರುವೇಕೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎನ್ನುವ ಕಾರಣ ನೀಡಿ ಯೋಜನೆಯ ಹೆಸರು ಮತ್ತು ಸ್ವರೂಪವನ್ನು ಬದಲಿಸುತ್ತಿರುವುದು ಹಾಸ್ಯಾಸ್ಪದ. ಈ ಯೋಜನೆಗೆ ಒಕ್ಕೂಟ ಸರ್ಕಾರವು ತನ್ನ ಪಾಲಿನ ಅನುದಾನವನ್ನು ಕಡಿತ ಮಾಡಿ, ರಾಜ್ಯ ಸರ್ಕಾರಗಳೂ ಕೂಡ ಹಣವನ್ನು ನೀಡಬೇಕೆಂದು ತಿದ್ದುಪಡಿ ತರುವುದರಿಂದ ಯಾವುದೇ ರೀತಿಯಲ್ಲಿ ಭ್ರಷ್ಟಾಚಾರ ಕಡಿಮೆ ಮಾಡಲಾಗುತ್ತದೆಂದು ತಿಳಿಯುತ್ತಿಲ್ಲ. ಅನುದಾನದ ಮೂಲ ಯಾವುದಿದ್ದರೂ ಕೂಡ, ಹಣವನ್ನು ದೋಚುವುದುಕ್ಕೆ ಯಾವುದೇ ಕಡಿವಾಣ ಬೀಳುವುದಿಲ್ಲ. ಇತರೆ ಯೋಜನೆಗಳಂತೆ, ಈ ಯೋಜನೆಯಲ್ಲಿಯೂ ಕೂಡ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಅವರು ಆಪಾದಿಸಿದರು.
ಈ ಭ್ರಷ್ಟಾಚಾರದಲ್ಲಿ ಒಕ್ಕೂಟ ಸರ್ಕಾರ ನಡೆಸುತ್ತಿರುವ ಬಿಜೆಪಿ ಮತ್ತು ಅದರಲ್ಲಿ ಪಾಲುದಾರಾಗಿರುವ ಅವರ ಮಿತ್ರ ಪಕ್ಷಗಳು ಸೇರಿದಂತೆ ವಿರೋಧ ಪಕ್ಷಗಳು ಭಾಗಿಯಾಗಿವೆ. ಈ ಯೋಜನೆಗೆ ನೀಡಿರುವ ಅನುದಾನ ಯಾವ ರೀತಿ ದೋಚಲಾಗಿದೆ ಮತ್ತು ಆ ಹಣ ಯಾವೆಲ್ಲ ದೇಶದ್ರೋಹಿ ಕೆಲಸಗಳಿಗೆ ಬಳಕೆಯಾಗುತ್ತಿದೆ ಎಂದು ತನ್ನ ತನಿಖಾ ಸಂಸ್ಥೆಗಳ ಮೂಲಕ ತನಿಖೆ ಮಾಡಬೇಕಿದೆ. ಆದರೆ ತನ್ನ ರಾಜಕೀಯ ಮತ್ತು ಸೈದ್ದಾಂತಿಕ ವಿರೋಧಿಗಳನ್ನು ಮಣಿಸಲು ಬಳಕೆ ಮಾಡುತ್ತಿರುವುದು ದುರಂತವೇ ಸರಿ. ಒಂದು ದಶಕಕ್ಕಿಂತಲೂ ಹೆಚ್ಚಿನ ಅವಧಿಯಲ್ಲಿ, ಭ್ರಷ್ಟಾಚಾರ ತಡೆಯಲು ಯಾವ ಕ್ರಮವನ್ನು ಕೈಗೊಂಡಿಲ್ಲ. ದೇಶದ ಬಹುತೇಕ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವುದು ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳಾಗಿವೆ. ಹಾಗಾಗಿ ತನಿಖೆಯ ಬಗ್ಗೆ ಮೌನವಾಗಿದೆ ಎಂದು ಎಲ್ ಜೀವನ್ ಟೀಕಿಸಿದ್ದಾರೆ.

ಈಗಲೂ ಭ್ರಷ್ಟಾಚಾರ ನಿಗ್ರಹಿಸುವ ಮೂಲಕ ಈ ಯೋಜನೆಯನ್ನು ಸರಿದಾರಿಗೆ ತರುವ ಸಂಪೂರ್ಣ ಅವಕಾಶ ಒಕ್ಕೂಟ ಸರ್ಕಾರದ ಮುಂದಿದೆ. ಇಲ್ಲಿಯವರೆಗೂ ಈ ವಿಚಾರದ ಬಗ್ಗೆ ಎಂದೂ ಚಕಾರವೆತ್ತದೆ, ಏಕಾಏಕಿ ಬದಲಾವಣೆ ತರಲು ಹೊರಟಿರುವುದು ದುರುದ್ದೇಶಪೂರಿತ ಎಂದು ಟೀಕಿಸಿದ್ದಾರೆ.
ಕೃಷಿ ಚಟುವಟಿಕೆಯಲ್ಲಿ ನಿರತರಾಗಿರುವ ಗ್ರಾಮೀಣ ಭಾಗದ ಸಣ್ಣ ರೈತರು, ಕೃಷಿಯಿಂದ ವಿಮುಖರಾಗಿ, ಭೂಮಿಯನ್ನು ಮಾರಾಟ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಭೂಮಿಯನ್ನು ಕೈಗಾರಿಕೆಗಳಿಗೆ ಒದಗಿಸುವುದು, ಬೃಹತ್ ಹಿಡುವಳಿದಾರರಿಗೆ ಅನುಕೂಲ ಮಾಡಿಕೊಡುವುದು, ಭೂ ವಂಚಿತರಾದವರು ಕಡಿಮೆ ಹಣಕ್ಕೆ ಕಾರ್ಖಾನೆಗಳಲ್ಲಿ ಗುಲಾಮರಂತೆ ಕೆಲಸ ಮಾಡಬೇಕಾದ ವಾತಾವರಣ ನಿರ್ಮಿಸುವುದು ಈ ತಿದ್ದುಪಡಿಯ ಉದ್ದೇಶವಾಗಿದೆ ಎಂದು ಎಲ್.ಜೀವನ್ ಕಿಡಿಕಾರಿದ್ದಾರೆ.
ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಿಂದ ಗ್ರಾಮೀಣ ಜನರ ನೆಮ್ಮದಿಯ ಜೀವನವನ್ನು ಕಿತ್ತುಕೊಂಡು, ಬಡವರನ್ನು ಮತ್ತಷ್ಟು ನಿರ್ಗತಿಕರನ್ನಾಗಿ ಮಾಡಲಾಗುತ್ತದೆ. ಜನರಿಗೆ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯವನ್ನು ಉಚಿತವಾಗಿ ಒದಗಿಸಲಾಗದ ಸರ್ಕಾರಗಳು, ಈಗ ಅವರ ದುಡಿಮೆಗೂ ಕೂಡ ಅಡ್ಡಗಾಲು ಹಾಕಿವೆ.
ಉದ್ಯೋಗ ಖಾತ್ರಿ ಮತ್ತು ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ನೀಡಬೇಕಾದ ತನ್ನ ಪಾಲಿನ ಅನುದಾನದ ಬಿಡುಗಡೆಯಲ್ಲಿ ನಿರಂತರವಾಗಿ ವಿಳಂಬ ಮಾಡುತ್ತಿದೆ. ಯೋಜನೆಗಳಲ್ಲಿ ನಿರಂತರವಾಗಿ ಅನ್ಯಾಯಕ್ಕೊಳಗಾಗುತ್ತಿರುವ ಕರ್ನಾಟಕಕ್ಕೆ ಈ ತಿದ್ದುಪಡಿಯು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮತ್ತಷ್ಟು ಹಿನ್ನೆಡೆಯನ್ನು ಮಾಡುತ್ತದೆ.
ಉದ್ಯೋಗ ಖಾತ್ರಿ ಯೋಜನೆಗೆ ತಿದ್ದುಪಡಿ ಮಾಡುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವಕ್ತಾರ ಎಲ್.ಜೀವನ್ ಆಗ್ರಹಿಸಿದ್ದಾರೆ.





