ಬೈಕಿನಲ್ಲಿ ತೆರಳುವಾಗ ಕೈ ತೋರಿಸಿದರೂ ಡ್ರಾಪ್ ಕೊಡಲಿಲ್ಲ ಎಂಬ ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಯೋರ್ವ ಮಂಗಳೂರು ಮೂಲದ ನೌಕರ ಸಹಿತ ಇಬ್ಬರಿಗೆ ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಜಾಲಹಳ್ಳಿ ಸಮೀಪ ಭಾನುವಾರ ರಾತ್ರಿ ನಡೆದಿದೆ.
ಹಲ್ಲೆಗೊಳಗಾದ ವ್ಯಕ್ತಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಅಹ್ಮದ್ ಸೈಫ್ ಕಕ್ಕಿಂಜೆ(25) ಹಾಗೂ ಲಾಡ್ಜ್ವೊಂದರಲ್ಲಿ ನೌಕರರಾಗಿರುವ ಅಬ್ದುಲ್ ಲತೀಫ್(50) ಎಂದು ಗುರುತಿಸಲಾಗಿದೆ.
ಹಲ್ಲೆ ನಡೆಸಿದ ವ್ಯಕ್ತಿಯನ್ನು ಜಾಲಹಳ್ಳಿ ಸಮೀಪದ ನಿವಾಸಿ ಕಿರಣ್ ಎಂದು ಗುರುತಿಸಲಾಗಿದೆ. ಸದ್ಯ ಘಟನೆಯ ಬಗ್ಗೆ ಗಂಗಮ್ಮನ ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿ ಕಿರಣ್ನನ್ನು ಪೊಲೀಸರು ಬಂಧಿಸಿದ್ದಾರೆ.

ಏನಿದು ಘಟನೆ?
ಅಹ್ಮದ್ ಸೈಫ್ ಹಾಗೂ ಆಫಿನ್ ಎಂಬ ಯುವಕರು ಬಸವೇಶ್ವರ ಬಸ್ ನಿಲ್ದಾಣದಿಂದ ಜಾಲಹಳ್ಳಿ ಸಮೀಪದಲ್ಲಿರುವ ತಮ್ಮ ರೂಮಿನ ಕಡೆಗೆ ಬೈಕಿನಲ್ಲಿ ಬರುತ್ತಿದ್ದರು. ಈ ವೇಳೆ ಆರೋಪಿ ಕಿರಣ್ ಬೈಕಿನಲ್ಲಿ ಬರುತ್ತಿದ್ದವರಿಗೆ ಕೈ ತೋರಿಸಿ ಲಿಫ್ಟ್ ಕೇಳಿದ್ದಾನೆ. ಈ ವೇಳೆ ಉತ್ತರಿಸಿದ್ದ ಯುವರು, ಈಗಾಗಲೇ ಬೈಕಿನಲ್ಲಿ ಇಬ್ಬರಿದ್ದೇವೆ. ಹಾಗಾಗಿ, ಡ್ರಾಪ್ ಕೊಡಲು ಆಗುವುದಿಲ್ಲ ಎಂದು ತಿಳಿಸಿ ಮುಂದೆ ಸಾಗಿದ್ದಾರೆ. ಆ ಬಳಿಕ ಯುವಕರನ್ನು ಹಿಂಬಾಲಿಸಿಕೊಂಡು ಬಂದಿದ್ದ ಕಿರಣ್, ಬೈಕಿನಲ್ಲಿ ಡ್ರಾಪ್ ಕೊಡದ್ದನ್ನೇ ನೆಪ ಮಾಡಿಕೊಂಡು ವಾಗ್ವಾದ ನಡೆಸಿದ್ದಾನೆ. ವಾಗ್ವಾದ ಮಾಡಿದ್ದಲ್ಲದೇ ಬೈಕಿನ ಕೀ ಕಸಿದುಕೊಂಡು, ಹಲ್ಲೆ ಕೂಡ ನಡೆಸಿದ್ದಾನೆ.
ಇದೇ ಸಂದರ್ಭದಲ್ಲಿ ಪಕ್ಕದ ರೂಮಿನಲ್ಲಿದ್ದ ಸಂತ್ರಸ್ತ ಗಾಯಾಳು ಅಬ್ದುಲ್ ಲತೀಫ್ ಅವರು ಶಾಫಿ ಮಸೀದಿಯ ಬಳಿಯಲ್ಲಿ ವಾಸವಿದ್ದು, ಏನೋ ಗಲಾಟೆ ಆಗುತ್ತಿದೆ ಎಂದು ಮಸೀದಿಯಿಂದ ಹೊರಗಡೆ ಬಂದು ವಿಚಾರಿಸಿದ್ದಾರೆ. ಈ ವೇಳೆ ಉದ್ರಿಕ್ತನಾದ ಆರೋಪಿ ಕಿರಣ್ ತನ್ನ ಕೈಯ್ಯಲ್ಲಿದ್ದ ಟೀ ಕಪ್ನಿಂದ ಲತೀಫ್ ಅವರಿಗೂ ಹಲ್ಲೆ ನಡೆಸಿದ್ದಾನೆ.

ಹಲ್ಲೆ ನಡೆಸಿದ ಪರಿಣಾಮ ಲತೀಫ್ ಅವರ ಮುಖಕ್ಕೆ ಗಂಭೀರ ಗಾಯವಾಗಿ, ರಕ್ತ ಕೂಡ ಬಂದಿದೆ. ಆ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಯಿತು. ಹಲ್ಲೆ ನಡೆಸಿರುವ ದೃಶ್ಯವು ಸ್ಥಳೀಯ ಮಸೀದಿಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಘಟನೆಯ ಬಗ್ಗೆ ಮಾಹಿತಿ ತಿಳಿದ ಸ್ಥಳಕ್ಕಾಗಮಿಸಿದ ಬ್ಯಾರಿಸ್ ಸೆಂಟ್ರಲ್ ಕಮಿಟಿಯ ಪದಾಧಿಕಾರಿಗಳು, ಆರೋಪಿಯನ್ನು ಕೂಡಲೇ ಬಂಧಿಸುವಂತೆ ಪೊಲೀಸರಲ್ಲಿ ಒತ್ತಾಯಿಸಿದ್ದಾರೆ. ಆ ಬಳಿಕ ಗಂಗಮ್ಮನ ಗುಡಿ ಪೊಲೀಸರು, ಮನೆಯಲ್ಲಿದ್ದ ಅಡಗಿ ಕೂತಿದ್ದ ಆರೋಪಿಯನ್ನು ವಶಕ್ಕೆ ಪಡೆದುಕೊಂಡು, ಘಟನೆಯ ಬಗ್ಗೆ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಹಲ್ಲೆಗೊಳಗಾದ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಲು ಬೆಂಗಳೂರಿನ ವಕೀಲೆ ಸೌಧ ಅಕ್ಕರಂಗಡಿ ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾರೆ. ಹಲ್ಲೆ ಘಟನೆಯನ್ನು ಬ್ಯಾರಿಸ್ ಸೆಂಟ್ರಲ್ ಕಮಿಟಿಯು ಖಂಡಿಸಿದ್ದು, ದೂರದ ಊರಿನಿಂದ ಬಂದು ದುಡಿಯುತ್ತಿರುವವರಿಗೆ ಈ ರೀತಿಯಲ್ಲಿ ವಿನಾಃಕಾರಣ ಹಲ್ಲೆ ನಡೆಸುವವರಿಗೆ ಪ್ರವೃತ್ತಿಗೆ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದೆ.





