ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ವಡ್ಡರ್ಸೆ ಗ್ರಾಮಕ್ಕೆ ಬಹುಕಾಲದ ಬೇಡಿಕೆಯಾಗಿದ್ದ ಕೆಎಸ್ಆರ್ಟಿಸಿ ಬಸ್ ಸಂಚಾರಕ್ಕೆ ಕೊನೆಗೂ ಚಾಲನೆ ದೊರೆತಿದೆ. ಗ್ಯಾರಂಟಿ ಸಮಿತಿಯ ರಾಜ್ಯ ಉಪಾಧ್ಯಕ್ಷೆ ಡಾ ಪುಪ್ಪ ಅಮರನಾಥ, ವಡ್ಡರ್ಸೆ ಗ್ರಾಮದಲ್ಲಿ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.

ಶಕ್ತಿ ಯೋಜನೆಯಡಿಯಲ್ಲಿ ಗೊಳಿಯಂಗಡಿ – ಮಂದಾರ್ತಿ – ಸೈಬರಕಟ್ಟೆ – ಬನ್ನಾಡಿ – ಕೋಟ – ಕುಂದಾಪುರ ಮಾರ್ಗದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ ಉದ್ದೇಶದಿಂದ KSRTC ಬಸ್ ಸೇವೆ ಮಂಜೂರಾಗಿದ್ದು ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು, ಉದ್ಯೋಗಿಗಳು, ಮಹಿಳೆಯರು ಹಾಗೂ ಹಿರಿಯ ನಾಗರಿಕರಿಗೆ ನಗರ ಸಂಪರ್ಕ ಸುಲಭವಾಗಿದ್ದು, ಸಾರ್ವಜನಿಕ ವಲಯದಲ್ಲಿ ಹರ್ಷ ವ್ಯಕ್ತವಾಗಿದೆ.
ವಡ್ಡರ್ಸೆ ಗ್ರಾಮವು ಕುಂದಾಪುರ ಪಟ್ಟಣದಿಂದ ದೂರವಿರುವುದರಿಂದ ಇಲ್ಲಿನ ಜನರು ದಿನನಿತ್ಯದ ಓಡಾಟಕ್ಕೆ ಖಾಸಗಿ ಬಸ್, ವಾಹನಗಳು, ಆಟೋಗಳ ಮೇಲೆ ಅವಲಂಬಿತರಾಗಿದ್ದರು. ಬಸ್ ಸೌಲಭ್ಯ ಇಲ್ಲದ ಕಾರಣ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಹಾಗೂ ರೋಗಿಗಳು ಚಿಕಿತ್ಸೆಗಾಗಿ ತೊಂದರೆ ಅನುಭವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳೀಯ ನಾಗರಿಕರು ಹಾಗೂ ಗ್ರಾಮಸ್ಥರು ಕೆಎಸ್ಆರ್ಟಿಸಿ ಬಸ್ ಸೇವೆ ಆರಂಭಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರು.

ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಅಜಿತ್ ಕುಮಾರ್ ಶೆಟ್ಟಿಯವರ ಪ್ರಯತ್ನ ಮತ್ತು ಸಾರಿಗೆ ಇಲಾಖೆಯ ಸ್ಪಂದನೆಯಿಂದ ಇದೀಗ ವಡ್ಡರ್ಸೆ–ಕುಂದಾಪುರ ಮಾರ್ಗದಲ್ಲಿ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭವಾಗಿದೆ. ನಿಗದಿತ ಸಮಯದಲ್ಲಿ ಸಂಚರಿಸುವ ಈ ಬಸ್ಗಳು ಬೆಳಗ್ಗೆ ಮತ್ತು ಸಂಜೆ ವೇಳೆಗೆ ವಿಶೇಷವಾಗಿ ಉಪಯುಕ್ತವಾಗಲಿದ್ದು, ವಿದ್ಯಾರ್ಥಿಗಳು ಮತ್ತು ಉದ್ಯೋಗಸ್ಥರಿಗೆ ಸಮಯಪಾಲನೆಗೆ ನೆರವಾಗಲಿದೆ. ಜೊತೆಗೆ ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತ ಪ್ರಯಾಣ ಸೌಲಭ್ಯವನ್ನು ಕೂಡ ಪಡೆದುಕೊಳ್ಳಬಹುದಾಗಿದೆ.

ಈ ಕುರಿತು ಈದಿನ.ಕಾಮ್ ಜೊತೆ ಮಾತನಾಡಿದ ವಿದ್ಯಾರ್ಥಿ ಧೀರಜ್, “ನಮ್ಮೂರಿಗೆ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭವಾದುದರಿಂದ ಬಹಳ ಸಂತೋಷವಾಗಿದೆ. ಖಾಸಗಿ ಬಸ್ಗಳಿದ್ದರೂ ಅವು ಸಮಯಕ್ಕೆ ಸರಿಯಾಗಿ ಸಂಚರಿಸದ ಕಾರಣ ಸಾಕಷ್ಟು ತೊಂದರೆಯಾಗುತ್ತಿತ್ತು. ಈಗ ಕೆಎಸ್ಆರ್ಟಿಸಿ ಬಸ್ ಬಂದಿರುವುದರಿಂದ ಉಡುಪಿ–ಕುಂದಾಪುರ–ಕೋಟ–ಮಂದಾರ್ಥಿ ಭಾಗಗಳಿಗೆ ಪ್ರಯಾಣಿಸಲು ತುಂಬಾ ಅನುಕೂಲವಾಗಿದೆ” ಎಂದು ಸಂತಸ ವ್ಯಕ್ತಪಡಿಸಿದರು.

ಈದಿನ.ಕಾಮ್ ಜೊತೆ ಮಾತನಾಡಿದ ವಿದ್ಯಾರ್ಥಿನಿ ಫಾಸೀಲ, “ನಮಗೆ ಸಂಜೆ ವಿಶೇಷ ತರಗತಿಗಳು ಇರುತ್ತವೆ. ಆ ಸಮಯದಲ್ಲಿ ಮನೆಗೆ ತೆರಳಲು ಬಸ್ ಅಗತ್ಯವಾಗುತ್ತದೆ. ಆದರೆ ಖಾಸಗಿ ಬಸ್ಗಳಲ್ಲಿ ಹೆಚ್ಚಿನ ರಶ್ ಇರುವ ಕಾರಣ ಕೆಲವೊಮ್ಮೆ ನಿಲ್ಲಿಸುವುದೇ ಇಲ್ಲ. ಕಾಲೇಜು ವಿದ್ಯಾರ್ಥಿಗಳಿಂದಲೇ ಬಸ್ ತುಂಬಿರುತ್ತಿತ್ತು. ಇದರಿಂದ ನಮಗೆ ಸಾಕಷ್ಟು ತೊಂದರೆ ಆಗುತ್ತಿತ್ತು. ಈಗ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭವಾದುದರಿಂದ ತುಂಬಾ ಸಂತೋಷವಾಗಿದೆ” ಎಂದರು.

ಬ್ರಹ್ಮಾವರ ಗ್ಯಾರಂಟಿ ಸಮಿತಿ ಸದಸ್ಯರು ಹಾಗೂ ಸ್ಥಳೀಯ ಶ್ರೀನಿವಾಸ ವಡ್ಡರ್ಸೆ ಮಾತನಾಡಿ, “ಗ್ರಾಮೀಣ ಭಾಗಗಳಲ್ಲಿ ಮೊದಲಿನಿಂದಲೂ ಬಸ್ ಸಮಸ್ಯೆ ಇತ್ತು. ಖಾಸಗಿ ಬಸ್ಗಳಿದ್ದರೂ ಬೆಳಗಿನ ವೇಳೆ ಫುಟ್ಬೋರ್ಡ್ನಲ್ಲಿ ಶಾಲಾ ಮಕ್ಕಳು ನೇತಾಡಿಕೊಂಡೇ ಪ್ರಯಾಣಿಸುವ ಪರಿಸ್ಥಿತಿ ಇತ್ತು. ಆ ದೃಶ್ಯಗಳನ್ನು ನಾನು ವೀಡಿಯೋ ಮಾಡಿ ವೈರಲ್ ಕೂಡ ಮಾಡಿದ್ದೇನೆ. ಬೆಳಗಿನ ಸಮಯದಲ್ಲಿ ಕಾರ್ಮಿಕರೂ ಅದೇ ಬಸ್ನಲ್ಲಿ ಪ್ರಯಾಣಿಸುವುದರಿಂದ ಅವರಿಗೆ ಸಹ ತೀವ್ರ ಸಮಸ್ಯೆ ಎದುರಾಗುತ್ತಿತ್ತು. ಅಜಿತ್ ಶೆಟ್ಟಿಯವರ ನೇತೃತ್ವದಲ್ಲಿ ನಾವೆಲ್ಲರೂ ಸೇರಿ ಮನವಿ ಸಲ್ಲಿಸಿದ ಬಳಿಕ ಈಗ ನಮ್ಮೂರಿಗೆ ಸರ್ಕಾರಿ ಬಸ್ ಮಂಜೂರಾಗಿದೆ. ಶಕ್ತಿ ಯೋಜನೆ ಗ್ರಾಮೀಣ ಪ್ರದೇಶಗಳಿಗೆ ಇನ್ನಷ್ಟು ಪ್ರಯೋಜನಕಾರಿಯಾಗಬೇಕಿದೆ. ಮೈಸೂರು, ಮಂಡ್ಯ, ರಾಯಚೂರು, ವಿಜಯಪುರ ಭಾಗಗಳಲ್ಲಿ ಯೋಜನೆ ಸಮರ್ಪಕವಾಗಿ ಜಾರಿಗೆ ಬಂದಿದೆ. ಆದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಭಾಗಗಳಲ್ಲಿ ಹಳ್ಳಿ ಹಳ್ಳಿಗಳಿಗೆ ಬಸ್ ವ್ಯವಸ್ಥೆ ಇನ್ನೂ ಕಡಿಮೆ ಇದೆ. ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಡ್ಡರ್ಸೆ ನಿವಾಸಿ ಅಜಿತ್ ಕುಮಾರ್ ಶೆಟ್ಟಿ, “ಕಳೆದ 25 ವರ್ಷಗಳಿಂದ ಕೋಟ ವಿವೇಕ ವಿದ್ಯಾ ಸಂಸ್ಥೆಯ ಸಾವಿರಾರು ವಿದ್ಯಾರ್ಥಿಗಳ ಬೇಡಿಕೆಯಾಗಿದ್ದ ಕೆಎಸ್ಆರ್ಟಿಸಿ ಬಸ್ ಮಂಜೂರು ಕೊನೆಗೂ ಈಡೇರಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶ್ರೀನಿವಾಸ ಪೂಜಾರಿ ಸಚಿವರಾಗಿದ್ದ ಸಂದರ್ಭದಲ್ಲಿಯೂ ಈ ಬೇಡಿಕೆ ಇಡಲಾಗಿತ್ತು. ಆದರೆ ಆ ವೇಳೆ ಬಸ್ ಮಂಜೂರಾಗಿರಲಿಲ್ಲ. ಉದಯವಾಣಿ ವರದಿಗಾರರಾದ ರಾಜೇಶ್ ಗಾಣಿಗರು ಬಸ್ ಸಮಸ್ಯೆಗಳ ಕುರಿತು ವರದಿ ಮಾಡಿ ನನ್ನ ಗಮನಕ್ಕೆ ತಂದರು. ನಂತರ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿಯವರ ಗಮನಕ್ಕೆ ತಂದ ಪರಿಣಾಮವಾಗಿ ಬಸ್ ಮಂಜೂರಾಗಿದೆ. ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ” ಎಂದು ಹೇಳಿದರು.

ಈದಿನ.ಕಾಮ್ ಜೊತೆ ಮಾತನಾಡಿದ ಬ್ರಹ್ಮಾವರ ಗ್ಯಾರಂಟಿ ಸಮಿತಿಯ ಅಧ್ಯಕ್ಷ ಡಾ. ಸುನೀತ್ ಶೆಟ್ಟಿ, “ಗ್ರಾಮೀಣ ಪ್ರದೇಶವಾದ ವಡ್ಡರ್ಸೆಗೆ ಕೆಎಸ್ಆರ್ಟಿಸಿ ಬಸ್ ಬೇಕೆಂಬುದು ಬಹಳ ದಿನಗಳ ಬೇಡಿಕೆಯಾಗಿತ್ತು. ಖಾಸಗಿ ಬಸ್ ಮಾಲೀಕರೊಂದಿಗೆ ಯಾವುದೇ ಹೋರಾಟವಿಲ್ಲ. ಪರಸ್ಪರ ಸೌಹಾರ್ದತೆಯಿಂದ ಪರಿಹಾರ ಕಂಡುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಮಕ್ಕಳಿಗೂ ಮಹಿಳೆಯರಿಗೂ ತೊಂದರೆಯಾಗದಂತೆ ಬಸ್ ಸಮಯ ವ್ಯವಸ್ಥೆ ಮಾಡಬೇಕು ಎಂದು ಮನವಿ ಸಲ್ಲಿಸಿದ್ದೇವೆ. ಗ್ರಾಮೀಣ ಪ್ರದೇಶಗಳಿಗೆ ಶಕ್ತಿ ಯೋಜನೆ ವರದಾನವಾಗಲಿ” ಎಂದು ಹೇಳಿದರು.

ಸ್ಥಳೀಯರಾದ ಸುಕುಮಾರ ಶೆಟ್ಟಿ ಮಾತನಾಡಿ, “ಅಜಿತ್ ಶೆಟ್ಟಿಯವರ ಪ್ರಯತ್ನದಿಂದ ವಡ್ಡರ್ಸೆ ಗ್ರಾಮಕ್ಕೆ ಸರ್ಕಾರಿ ಬಸ್ ಬಂದಿದೆ. ಈ ಸಂಬಂಧ ನಮ್ಮ ಬೇಡಿಕೆಯನ್ನು ಅವರ ಮುಂದೆ ಇಟ್ಟಿದ್ದೇವೆ. ಗ್ಯಾರಂಟಿ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಡಾ. ಪುಷ್ಪ ಅಮರನಾಥರವರಿಗೆ ಸಹ ಮನವಿ ಸಲ್ಲಿಸಲಾಗಿದೆ. ನಮ್ಮ ಪಕ್ಕದ ಊರು ಕಾವಡಿಯಿಂದ ಸುಮಾರು ನೂರುಕ್ಕೂ ಹೆಚ್ಚು ಮಕ್ಕಳು ಶಾಲೆಗೆ ಹೋಗುತ್ತಾರೆ. ಕಾವಡಿಯಿಂದ ಗೋಳಿಮರಕ್ಕೆ ಸುಮಾರು ಮೂರು ಕಿಲೋಮೀಟರ್ ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿ ಇದೆ. ಕಾರ್ಮಿಕರು, ಮಕ್ಕಳು ಮತ್ತು ಮಹಿಳೆಯರಿಗೆ ಅನುಕೂಲವಾಗುವಂತೆ ಶಕ್ತಿ ಯೋಜನೆಯಡಿ ನಮ್ಮೂರಿಗೂ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸಬೇಕು” ಎಂದು ಅವರು ಆಗ್ರಹಿಸಿದರು.
ಇದನ್ನೂ ಓದಿ: ಉಡುಪಿ | ನಕ್ಸಲ್ ಪ್ರಕರಣಗಳ ಕುರಿತು ಜಿಲ್ಲಾ ಪೊಲೀಸ್ ಪ್ರಕಟಣೆ
ಒಟ್ಟಿನಲ್ಲಿ ಬಹುಕಾಲದ ಬೇಡಿಕೆಯಾಗಿದ್ದ ವಡ್ಡರ್ಸೆ ಗ್ರಾಮಕ್ಕೆ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭವಾಗಿದ್ದು, ಗ್ರಾಮೀಣ ಜನಜೀವನಕ್ಕೆ ಹೊಸ ಚೈತನ್ಯ ತಂದಿದೆ. ಸರ್ಕಾರದ ಶಕ್ತಿ ಯೋಜನೆ ಹಾಗೂ ಸಾರಿಗೆ ಇಲಾಖೆಯ ಈ ಮಹತ್ವದ ಕ್ರಮದಿಂದ ಗ್ರಾಮ–ನಗರ ಸಂಪರ್ಕಕ್ಕೆ ಕೊಂಡಿಯಾಗಿದ್ದು, ಶಿಕ್ಷಣ, ಉದ್ಯೋಗ ಹಾಗೂ ಆರೋಗ್ಯ ಸೇವೆಗಳ ಲಭ್ಯತೆ ಸುಲಭವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಚಾರ ಸೌಲಭ್ಯಗಳು ವಿಸ್ತರಣೆಯಾಗಬೇಕೆಂಬುದೇ ಆಶಯ.

ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.




