ಅಂತರ್ ರಾಜ್ಯ ಮಟ್ಟದಲ್ಲಿ ನಡೆದ ಮೋಟರ್ಸೈಕಲ್ ಕಳ್ಳತನ ಪ್ರಕರಣವೊಂದನ್ನು ಉಡುಪಿ ನಗರ ಪೊಲೀಸರು ಭೇದಿಸಿದ್ದು, ಕೇರಳ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿ ಕಳವುಗೊಂಡ ಯಮಹಾ R15 ಬೈಕ್ ವಶಪಡಿಸಿಕೊಂಡಿದ್ದಾರೆ.
ಮೂಡನಿಡಂಬೂರು ಗ್ರಾಮದ ನಾಗಚಂದ್ರ (32) ಎಂಬವರು ಡಿಸೆಂಬರ್ 28ರಂದು ರಾತ್ರಿ ಕರಾವಳಿ ಬೈಪಾಸ್ ಬಳಿಯ ಲ್ಯಾಂಡ್ಮಾರ್ಕ್ ಬಿಲ್ಡಿಂಗ್ ಸಮೀಪ ತಮ್ಮ ಮೋಟರ್ಸೈಕಲ್ ನಿಲ್ಲಿಸಿ ಮನೆಗೆ ತೆರಳಿದ್ದರು. ಡಿಸೆಂಬರ್ 29ರಂದು ಬೆಳಿಗ್ಗೆ ವಾಹನ ಕಾಣೆಯಾಗಿರುವುದು ಗಮನಕ್ಕೆ ಬಂದಿದ್ದು, ಅಂದಾಜು ₹70,000 ಮೌಲ್ಯದ ಬೈಕ್ ಕಳವುಗೊಂಡಿರುವ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ಪತ್ತೆಗೆ ಡಿವೈಎಸ್ಪಿ ಡಿ.ಟಿ. ಪ್ರಭು ಅವರ ಮಾರ್ಗದರ್ಶನದಲ್ಲಿ, ಉಡುಪಿ ನಗರ ಠಾಣಾ ಪ್ರಭಾರ ನಿರೀಕ್ಷಕ ಮಹೇಶ್ ಪ್ರಸಾದ್ ಪಿ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಪೊಲೀಸ್ ಉಪನಿರೀಕ್ಷಕ ಭರತೇಶ್ ಕಂಕಣವಾಡಿ ಹಾಗೂ ಗೋಪಾಲಕೃಷ್ಣ ಜೋಗಿ ನೇತೃತ್ವದ ತಂಡವು ಜನವರಿ 4ರಂದು ಕೇರಳದ ಕೋಯಿಕ್ಕೋಡು ಜಿಲ್ಲೆಯ ಮುಕ್ಕಂ ಪ್ರದೇಶದಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದೆ.
ಬಂಧಿತ ಆರೋಪಿಗಳನ್ನು ಕೇರಳ ರಾಜ್ಯದ ಆಶಿಕ್ ಅನ್ಸಾರ್ (19) ಹಾಗೂ ಮಹಮ್ಮದ್ ಅಲ್ತಫ್ (23) ಎಂದು ಗುರುತಿಸಲಾಗಿದ್ದು, ಇವರಿಂದ ಯಮಹಾ R15 ಮೋಟರ್ಸೈಕಲ್ ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಆಶಿಕ್ ಅನ್ಸಾರ್ ವಿರುದ್ಧ ಕೇರಳ ರಾಜ್ಯದಲ್ಲಿ ಮನೆಕಳ್ಳತನ ಹಾಗೂ ಗಾಂಜಾ ಸೇವನೆ ಸೇರಿ ಎರಡು ಪ್ರಕರಣಗಳು ದಾಖಲಾಗಿದ್ದರೆ, ಮಹಮ್ಮದ್ ಅಲ್ತಫ್ ವಿರುದ್ಧ ಮೂರು ಕಳ್ಳತನ ಹಾಗೂ ಎರಡು ಗಾಂಜಾ ಸೇವನೆ ಪ್ರಕರಣಗಳೂ ಸೇರಿದಂತೆ ಒಟ್ಟು ಐದು ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದೆ.





