ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ 8ನೇ ಸಮ್ಮೇಳನ ಇಂದು ಉಡುಪಿ ವಿಮಾ ನೌಕರರ ಸಂಘದ ಕಛೇರಿ ಸಭಾಂಗಣದಲ್ಲಿ ಭಾವಪೂರ್ಣವಾಗಿ ನೆರವೇರಿತು. ಸಮ್ಮೇಳನವನ್ನು ಬೀಡಿ ಫೆಡರೇಶನ್ ರಾಜ್ಯಾಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ ಉದ್ಘಾಟಿಸಿ ಮಾತನಾಡಿದರು.
ಬೀಡಿ ಕಾರ್ಮಿಕರಿಗೆ ಸರಕಾರ ನಿಗದಿ ಮಾಡಿದ ತುಟ್ಟಿಭತ್ಯೆ ಮತ್ತು ಕನಿಷ್ಠ ಕೂಲಿ ನೀಡುವಲ್ಲಿ ಮಾಲೀಕರು ಹಿಂದೆಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಸರಕಾರ ನಿಗದಿ ಮಾಡಿದ ₹301 ಕನಿಷ್ಠ ಕೂಲಿ ನೀಡುವ ಬದಲು ₹287 ನೀಡುತ್ತೇವೆ ಎಂದು ಹೇಳಿ, ಅದನ್ನೂ ಕೊಡದೆ ಕಾರ್ಮಿಕರನ್ನು ಮೋಸಗೊಳಿಸಲಾಗುತ್ತಿದೆ. ಈ ಅನ್ಯಾಯದ ವಿರುದ್ಧ ಬೀಡಿ ಕಾರ್ಮಿಕರು ನಿರ್ಣಾಯಕ ಹೋರಾಟಕ್ಕೆ ಸಜ್ಜಾಗಬೇಕು ಎಂದು ಕಿಡಿಕಾರಿದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮೂರು ಲಕ್ಷಕ್ಕಿಂತ ಹೆಚ್ಚು ಬೀಡಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಆದರೂ ಶಾಸಕರು, ಸಂಸದರು ಅಥವಾ ಸರಕಾರದ ಪ್ರತಿನಿಧಿಗಳಿಂದ ನಮ್ಮ ಪರವಾಗಿ ಧ್ವನಿ ಏಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ನವೆಂಬರ್ 24ರಿಂದ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಅನಿರ್ದಿಷ್ಟ ಅಹೋರಾತ್ರಿ ಹೋರಾಟ ಹಾಗೂ ನವೆಂಬರ್ 28ರಂದು ಸಹಾಯಕ ಕಮೀಷನರ್ ಕಚೇರಿ ಮುತ್ತಿಗೆ ಹೋರಾಟ ನಡೆಯಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೀಡಿ ಫೆಡರೇಶನ್ ಉಪಾಧ್ಯಕ್ಷೆ ಬಲ್ಕೀಸ್, ಕಾರ್ಕಳ ತಾಲೂಕು ಬೀಡಿ ಕಾರ್ಮಿಕ ಸಂಘದ ಅಧ್ಯಕ್ಷೆ ಸುನೀತಾ ಶೆಟ್ಟಿ, ಜನವಾದಿ ಮಹಿಳಾ ಸಂಘದ ಕಾರ್ಯದರ್ಶಿ ಶೀಲಾವತಿ ಹಾಗೂ ಉಡುಪಿ ಬೀಡಿ ಸಂಘದ ಅಧ್ಯಕ್ಷೆ ನಳಿನಿ ಎಸ್. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಸಮ್ಮೇಳನದ ಅಧ್ಯಕ್ಷತೆಯನ್ನು ಬೀಡಿ ಫೆಡರೇಶನ್ ಅಧ್ಯಕ್ಷ ಮಹಸಬಲ ವಡೇಯರಹೊಬಳಿ ವಹಿಸಿದರು. ಫೆಡರೇಶನ್ ಕಾರ್ಯದರ್ಶಿ ಉಮೇಶ್ ಕುಂದರ್ ಸ್ವಾಗತ ಹಾಗೂ ವರದಿ ಮಂಡಿಸಿದರು. ಕಾರ್ಯಕ್ರಮ ನಿರೂಪಣೆ ಮತ್ತು ಧನ್ಯವಾದ ಪ್ರಸ್ತಾವನೆ ಕವಿರಾಜ್ ಎಸ್. ಕಾಂಚನ್ ನಿರ್ವಹಿಸಿದರು.

ಈ ಸಂದರ್ಭ ಮುಂದಿನ ಮೂರು ವರ್ಷಗಳ ಅವಧಿಗೆ ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್ ನೂತನ 15 ಸದಸ್ಯರ ಸಮಿತಿ ಆಯ್ಕೆ ನಡೆಯಿತು. ಉಮೇಶ್ ಕುಂದರ್ ಅಧ್ಯಕ್ಷರಾಗಿ, ಕವಿರಾಜ್ ಎಸ್. ಕಾಂಚನ್ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಬಲ್ಕೀಸ್ ಕೋಶಾಧಿಕಾರಿಯಾಗಿ ಸರ್ವಾನುಮತದಿಂದ ಆಯ್ಕೆಯಾದರು.





