ಕೋಮು ದ್ವೇಷದ ಭಾಷಣ ಮಾಡಿ ರಾಜ್ಯದ ಸೌಹಾರ್ದ ಪರಂಪರೆಗೆ ಧಕ್ಕೆ ತರುತ್ತಿರುವ ಚಕ್ರವರ್ತಿ ಸೂಲಿಬೆಲೆ ಅವರು ಕುಂದಾಪುರಕ್ಕೆ ಬಂದು ಭಾಷಣ ಮಾಡಲು ಅವಕಾಶ ನೀಡಬಾರದು ಎಂದು ಕುಂದಾಪುರ ಪೊಲೀಸ್ ಉಪನಿರೀಕ್ಷರಿಗೆ ಕರ್ನಾಟಕ ಸೌಹಾರ್ದ ಸಮಿತಿ ಮನವಿ ಮಾಡಿದೆ.
ಹಿಂದುತ್ವವಾದಿ ಕೋಮು ಗುಂಪಾದ ನಮೋ ಬ್ರಿಗೇಡ್ ಜುಲೈ 21ರಿಂದ ಮೂರು ದಿನಗಳ ಕಾಲ ಕಾರ್ಯಕ್ರಮ ಆಯೋಜಿಸಿದೆ. ಕಾರ್ಯಕ್ರಮದಲ್ಲಿ ಸೂಲಿಬೆಲೆ, ‘ಇನ್ನೂ ಮಲಗಿದರೆ, ಏಳುವಾಗ ಭಾರತವಿರುವುದಿಲ್ಲ’ ಎಂಬ ವಿಚಾರದ ಕುರಿತು ಮಾತನಾಡಲಿದ್ದಾರೆ. ಅವರು ಕೋಮು ದ್ವೇಷದ ಭಾಷಣ ಮಾಡಿ, ಸೌಹಾರ್ದತೆ ಕದಡಲು ಪ್ರಚೋದನೆ ನೀಡುವ ಸಾಧ್ಯತೆ ಇರುವುದರಿಂದ ಅವರಿಗೆ ಕುಂದಾಪುರ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದೆ.
ಈ ಹಿಂದೆ ಸೂಲಿಬೆಲೆ ಅವರ ಸ್ವಂತ ಜಿಲ್ಲೆಯಾದ ಉತ್ತರ ಕನ್ನಡಕ್ಕೆ ಪ್ರವೇಶಿಸದಂತೆ ಅಲ್ಲಿನ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಅಂತೆಯೇ ಕುಂದಾಪುರಕ್ಕೂ ಪ್ರವೇಶಿಸದಂತೆ ಆದೇಶಿಸಬೇಕು ಎಂದು ಸೌಹಾರ್ದ ಸಮಿತಿ ಆಗ್ರಹಿಸಿದೆ.
“ಸೂಲಿಬೆಲೆಯವರು ನೇರವಾಗಿ ಹೇಳದಿದ್ದರೂ, ಒಂದು ರಾಜಕೀಯ ಪಕ್ಷದ ಸಕ್ರಿಯ ಕಾರ್ಯಕರ್ತನಂತೆ ಕೆಲಸ ಮಾಡುತ್ತಾರೆ. ಪ್ರಜಾಪ್ರಭುತ್ವ ದೇಶದಲ್ಲಿ ಎಲ್ಲರಿಗೂ ಅವರವರು ನಂಬಿದ ರಾಜಕೀಯ ಪಕ್ಷದ ಧೋರಣೆಗಳನ್ನು ಪ್ರಚಾರ ಮಾಡುವ ಹಕ್ಕಿದೆ. ಆದರೆ ಯುವ ಮನಸ್ಸುಗಳೇ ಹೆಚ್ಚಿರುವ ಕಾಲೇಜಿನ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಆತಂಕ ಉಂಟುಮಾಡಿದೆ. ಅದೇ ಕಾಲೇಜಿನಲ್ಲಿ ಈ ಹಿಂದೆ ಮತೀಯ ದ್ವೇಷದ ವಿವಾದಗಳನ್ನು ಸೃಷ್ಟಿಸಿ, ಹಲವಾರು ಹೆಣ್ಣು ಮಕ್ಕಳು ತಮ್ಮ ವ್ಯಾಸಂಗವನ್ನು ನಿಲ್ಲಿಸುವಂತಾಗಿತ್ತು” ಎಂದು ಸಮಿತಿಯ ಸಂಚಾಲಕ ರಾಜೇಶ್ ವಡೇರ ತಿಳಿಸಿದ್ದಾರೆ.
ಸಾಮಾಜಿಕ ಸಹಬಾಳ್ವೆಯ ಪರಂಪರೆಗೆ ಧಕ್ಕೆ ತರುವ ಕಾರ್ಯಕ್ರಮಗಳನ್ನು ಶಿಕ್ಷಣ ಸಂಸ್ಥೆಗಳಲ್ಲಿ ನಡೆಸಲು ಅವಕಾಶ ನೀಡಬಾರದು ಎಂದು ಕೋರುತ್ತೇವೆ ಅವರು ಒತ್ತಾಯಿಸಿದ್ದಾರೆ




