ಉಡುಪಿ ಜಿಲ್ಲೆಯಲ್ಲಿ ವಿಮಾನಯಾನ ಮಾಡುವ ಪ್ರಯಾಣಿಕರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಉಡುಪಿ ಜಿಲ್ಲೆಗೆ ಸ್ವಂತ ವಿಮಾನ ನಿಲ್ದಾಣದ ಅಗತ್ಯತೆ ತೀವ್ರವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತರು ಮತ್ತು ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.
ಉಡುಪಿ, ಮಣಿಪಾಲ, ಬ್ರಹ್ಮಾವರ, ಕುಂದಾಪುರ, ಬೈಂದೂರು, ಕಾರ್ಕಳ, ಹೆಬ್ರಿ ಹಾಗೂ ಕಾಪು ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಉದ್ಯೋಗ, ಶಿಕ್ಷಣ ಮತ್ತು ವೈದ್ಯಕೀಯ ಕಾರಣಗಳಿಗೆ ಹೆಚ್ಚುತ್ತಿರುವ ವಿಮಾನ ಪ್ರಯಾಣಿಕರ ಸಂಖ್ಯೆ ಸ್ಥಳೀಯ ವಿಮಾನ ನಿಲ್ದಾಣದ ಅವಶ್ಯಕತೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ.
ಮನವಿಯಲ್ಲಿ, ಹಾವಂಜೆ ಗ್ರಾಮದ ಕೀಳಂಜೆ ಪ್ರದೇಶವನ್ನು ವಿಮಾನ ನಿಲ್ದಾಣಕ್ಕಾಗಿ ಯೋಗ್ಯ ಸ್ಥಳವೆಂದು ಸೂಚಿಸಲಾಗಿದೆ. ಸುಮಾರು 900 ಏಕರ ಸರಕಾರಿ ಭೂಮಿ ಹೊಂದಿರುವ ಈ ಪ್ರದೇಶವು ಸಮತಟ್ಟಾದ, ಎತ್ತರದ ಭೂ ಭಾಗವಾಗಿದ್ದು, ಅರಣ್ಯ ಇಲಾಖೆಯವರಿಂದ ನೆಡಲಾಗಿರುವ ಆಕೇಶಿಯ ಮರಗಳು ಈಗ ಕಟಾವಿಗೆ ಬಂದಿರುವುದರಿಂದ ಭೂ ಉಪಯೋಗ ಸಾಧ್ಯತೆ ಹೆಚ್ಚಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಈಗಾಗಲೇ ಮೂಲಸೌಕರ್ಯ ಅಭಿವೃದ್ಧಿ ನಡೆಯುತ್ತಿದ್ದು, ಮೂರುವರೆ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ರಿಂಗ್ ರೋಡ್, ಬೃಹತ್ ಸೇತುವೆ ಹಾಗೂ ಸ್ವರ್ಣ ನದಿಯಲ್ಲಿ ನಿರ್ಮಿಸಲಾಗುತ್ತಿರುವ ಅಣೆಕಟ್ಟುಗಳು ಭವಿಷ್ಯದ ವಿಮಾನ ನಿಲ್ದಾಣಕ್ಕೆ ಹಿತಕರವಾಗಿದ್ದಾರೆಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಈ ಪ್ರದೇಶ ಅತ್ಯುತ್ತಮವಾಗಿರುವುದರಿಂದ ಜಿಲ್ಲಾಡಳಿತ ವಿಮಾನ ನಿಲ್ದಾಣಕ್ಕೆ ಕೀಳಂಜೆ ಪ್ರದೇಶವನ್ನು ಪರಿಗಣಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳಬೆಟ್ಟು, ಹಿರಿಯ ಕಾಂಗ್ರೆಸ್ ಮುಖಂಡ ಜಯಶೆಟ್ಟಿ ಬನ್ನಂಜೆ, ಪರಿಸರ ಪ್ರೇಮಿ ಪಾವ್ಲ್ ಡಿ ಅಲ್ಮೆಡಾ, ಅಮೇಡಾ ಡಿಸೋಜ, ತೋಮಸ್ ಡಿಸೋಜ ಹಾಗೂ ಜಾನ್ ಡಿಸೋಜ ಮುಂತಾದವರು ಉಪಸ್ಥಿತರಿದ್ದರು.





