ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಭೆ ಇಂದು ಸರಕಾರಿ ಪದವಿ ಪೂರ್ವ ಕಾಲೇಜು, ಉಡುಪಿಯಲ್ಲಿ ಮಾನ್ಯ ಶಾಸಕ ಶ್ರೀಯುತ ಯಶಪಾಲ್ ಎ. ಸುವರ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಶಿಕ್ಷಣ ಕಾಶಿ ಎಂದೇ ಖ್ಯಾತಿ ಪಡೆದಿರುವ ಉಡುಪಿ ಜಿಲ್ಲೆ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಗಳಿಸಿರುವುದಕ್ಕೆ ಶಿಕ್ಷಕರ ಶ್ರಮವೇ ಕಾರಣವಾಗಿದ್ದು, ಆ ಸ್ಥಾನವನ್ನು ಮುಂದುವರಿಸಿಕೊಳ್ಳಲು ಇನ್ನಷ್ಟು ಪರಿಶ್ರಮವಹಿಸಬೇಕೆಂದು ಶಾಸಕ ಯಶಪಾಲ್ ಎ. ಸುವರ್ಣ ಅವರು ಕರೆ ನೀಡಿದರು.

ಡಯಟ್ ಉಡುಪಿ ಉಪನಿರ್ದೇಶಕ ಹಾಗೂ ಪ್ರಾಚಾರ್ಯರಾದ ಡಾ. ಅಶೋಕ ಕಾಮತ್ ಮಾತನಾಡಿ, ಮಕ್ಕಳ ಕುರಿತು ದೂರು ಹೇಳುವುದಕ್ಕಿಂತ ಅವರನ್ನು ಕಲಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಉತ್ತಮ ಶೇಕಡಾವಾರು ಫಲಿತಾಂಶಕ್ಕೆ ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಯಲ್ಲಮ್ಮ ಅವರು ಕಳೆದ ಎರಡು ವರ್ಷಗಳ ಹಾಗೂ ಪ್ರಸಕ್ತ ವರ್ಷದ ಸಂಕಲನಾತ್ಮಕ–1 ಮತ್ತು ಮಂಡಳಿಯ ಪೂರ್ವ ಸಿದ್ಧತಾ ಪರೀಕ್ಷೆಗಳ ಫಲಿತಾಂಶಗಳ ಬಗ್ಗೆ ಮಾಹಿತಿ ನೀಡಿದರು. ಮುಂದಿನ 2 ಮತ್ತು 3ನೇ ಪರೀಕ್ಷೆಗಳ ವೇಳಾಪಟ್ಟಿ, ಅದರ ಅನುಷ್ಠಾನ, ಕಲಿಕೆಯಲ್ಲಿ ನವೀನತೆ ಅಳವಡಿಸಿಕೊಳ್ಳುವಿಕೆ, ಒತ್ತಡರಹಿತ ವಾತಾವರಣ ನಿರ್ಮಾಣ ಹಾಗೂ ಶೇಕಡಾ 100 ಫಲಿತಾಂಶ ಸಾಧಿಸಲು ಶಿಕ್ಷಕರನ್ನು ಪ್ರೇರೇಪಿಸಿದರು.
ಸಭೆಯನ್ನು ಸರಕಾರಿ ಪದವಿ ಪೂರ್ವ ಕಾಲೇಜು (ಬಾಲಕಿಯರ) ಉಡುಪಿ ಪ್ರಾಚಾರ್ಯ ಶ್ರೀಯುತ ಜಗದೀಶ್ ಸ್ವಾಗತಿಸಿದರು. ಬಾಲಕಿಯರ ಪ್ರೌಢಶಾಲೆ ಉಡುಪಿ ಹಿರಿಯ ಸಹಶಿಕ್ಷಕಿ ಶ್ರೀಮತಿ ಇಂದಿರಾ ವಂದಿಸಿದರು.
ಸಭೆಯಲ್ಲಿ ಬ್ರಹ್ಮಾವರ ವಲಯದ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಉಮಾ, ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಪ್ರಾಚಾರ್ಯರು ಉಪಸ್ಥಿತರಿದ್ದರು.





