ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರದ ಅಂಗಾರಕಟ್ಟೆಗೆ ಬಹು ನಿರೀಕ್ಷಿತ ಸಾರ್ವಜನಿಕರಿಗೆ ಕೊಟ್ಟಿರುವ ಭರವಸೆಯಂತೆ ಉಡುಪಿ ಹಾಗೂ ಅಂಗಾರಕಟ್ಟೆಯ ನಡುವೆ ಸರಕಾರಿ ಬಸ್ ಸಂಚಾರ ಫೆಬ್ರವರಿ 3 ಸೋಮವಾರದಂದು ವಿಸ್ತರಣೆಯಾಗಿ ಈ ಮಾರ್ಗದಲ್ಲಿ ಸರಕಾರಿ ಬಸ್ಸು ಸಂಚಾರ ಮಾಡುತ್ತಿದೆ ಎಂದು ಸಾರ್ವಜನಿಕರು ಆ ಭಾಗದಲ್ಲಿ ಬಸ್ಸನ್ನು ಸ್ವಾಗತಿಸಲು ಬ್ಯಾನರ್ ಬಂಟೀಸ್ ಅಳವಡಿಸಿ, ಬಸ್ಸಿಗೆ ಕಟ್ಟಲು ಬಾಳೆ, ಶೃಂಗಾರ ಮಾಡಲು ಹೂವು ತೆಗೆದುಕೊಂಡು ಬಸ್ಸನ್ನ ಸ್ವಾಗತಿಸಲು ಸಜ್ಜಾಗಿದ್ದರು ಕಾರಣಾಂತರದಿಂದ ಸರಕಾರಿ ಬಸ್ಸು ಬಾರದೆ ಈ ಮಾರ್ಗದಲ್ಲಿ ಸಂಚರಿಸದೆ ಸಾರ್ವಜನಿಕರಿಗೆ ನಿರಾಸೆ ಉಂಟು ಮಾಡಿದ ಘಟನೆ ಇಂದು ಮುಂಜಾನೆ ನಡೆದಿದೆ.

ಗುಂಡು ಪಾದೆಯಲ್ಲಿಯೂ ಸಾರ್ವಜನಿಕರು ಸರಕಾರಿ ಬಸ್ಸು ಈ ಮಾರ್ಗದಲ್ಲಿ ಸಂಚರಿಸುತ್ತದೆ ಎಂದು ತಿಳಿದು ಸರಕಾರಿ ಬಸ್ಸನ್ನು ಸ್ವಾಗತಿಸಲು ಕಾತರದಿಂದ ಕಾಯುತ್ತಿದ್ದರು ಅಲ್ಲಿಯ ಪ್ರಯಾಣಿಕರಿಗೂ ನಿರಾಸೆ ಉಂಟು ಮಾಡಿದೆ ಮೊದಲೇ ನಿಗದಿಯಾಗಿದ್ದ ಸರಕಾರಿ ಬಸ್ಸು ಅಂಗಾರಕಟ್ಟೆ ಹೆಲ್ತ್ ಸೆಂಟರ್ ತನಕ (ಪ್ರಾರ್ಥಮಿಕ ಆರೋಗ್ಯ ಕೇಂದ್ರ ) ಅಲ್ಲಿಯ ತನಕ ಸರಕಾರಿ ಬಸ್ ಓಡಾಟ ನಡೆಸುತ್ತದೆ ಎಂದು ದೂರವಾಣಿಯ ಮೂಲಕ ಮಾಹಿತಿ ಒದಗಿತ್ತು. ಮಂಗಳೂರು ಸಂಚಾರಿ ಆಯುಕ್ತರು ಹಾಗೂ ಉಡುಪಿಯ ಬಸ್ ಡಿಪೋ ಮ್ಯಾನೇಜರ್ ಮಾಹಿತಿಯಂತೆ ಬಸ್ ಬರುವುದು ಖಚಿತವಾಗಿದ್ದರಿಂದ ಸ್ಥಳೀಯರು ಸಾರ್ವಜನಿಕರೇ ಸ್ವಾಗತಿಸಲು ಸಿದ್ದರಾಗಿದ್ದರು.

ಈ ಬಗ್ಗೆ ಈ ದಿನ.ಕಾಮ್ ಜೊತೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಗಣೇಶ್ ಸರಳಬೆಟ್ಟು ತಾಂತ್ರಿಕ ದೋಷದಿಂದ ಬಸ್ಸು ಹೊರಡಲಿಲ್ಲ ಎಂದು ಡಿಪೋ ಮ್ಯಾನೇಜರ್ ತಿಳಿಸಿದ್ದಾರೆ, ಇದರ ಹಿಂದೆ ಖಾಸಗೀ ಬಸ್ ನವರ ಲಾಭಿ ಇದೆಯೋ ಎಂದು ಸಹ ತಿಳಿಯುತ್ತಿಲ್ಲ ಇತ್ತ ಖಾಸಗೀ ಬಸ್ಸು ಸಂಚಾರಿಸದೆ. ಈ ಭಾಗದ ಶಾಲಾ ಕಾಲೇಜು ವಿದ್ಯಾರ್ಥಿಗಳು ಪ್ರತಿನಿತ್ಯ ಸಂಚರಿಸುವ ಉದ್ಯೋಗಸ್ಥರು ಸರಕಾರಿ ಬಸ್ಸು ಬರುತ್ತದೆ ಎಂದು ಹುಮ್ಮಸ್ಸಿನಿಂದ ಸ್ವಾಗತಿಸಲು ಸನ್ನದ್ದರಾಗಿದ್ದರು. ಸರಕಾರಿ ಬಸ್ಸು ಬಾರದೆ ಪ್ರಯಾಣಿಕರಿಗೆ ನಿರಾಸೆ ಉಂಟು ಮಾಡಿದೆ. ಈಗಾಗಲೇ ಉಡುಪಿ ಭಾಗದಿಂದಲೂ ಸರಕಾರಿ ಬಸ್ಸು ಹೊರಟು, ಓಂತಿ ಬೆಟ್ಟಿನ ಮೂಲಕ ಪೆರ್ಲಂಕಿಲ ಮಹಾಗಣಪತಿ ದೇವಸ್ಥಾನದ ತನಕ ಸರ್ಕಾರಿ ಬಸ್ಸು ಸಂಚರಿಸಬೇಕೆಂದು ಉಡುಪಿಯ ಡಿಪೋ ಮ್ಯಾನೇಜರ್ ಗೆ ನಿಟ್ಟೂರಿನ ಬಸ್ ಡಿಪೋಗೆ ಹೋಗಿ ಈ ಹಿಂದೆ ಸ್ಥಳೀಯ ನಿವಾಸಿಗಳ ಸೇರಿಕೊಂಡು ಸರಕಾರಿ ಬಸ್ಸು ಬೇಕೆಂದು ಮನವಿ ಸಲ್ಲಿಸಿದ್ದೆವು. ಮೂಡುಬೆಳ್ಳೆ ಮೂಲಕವಾದರೂ ಸರಕಾರಿ ಬಸ್ಸು ಸಂಚರಿಸುತ್ತೇವೆ ಎಂದು ಮಾಹಿತಿ ನೀಡಿದ್ದರು ಆದರೆ ಈ ಭಾಗದ ಜನರಿಗೆ ಅತ್ಯಂತ ಹೆಚ್ಚಿನ ನಿರಾಸೆಯಾಗಿದೆ ಎಂದು ಹೇಳಿದರು.
ಒಟ್ಟಿನಲ್ಲಿ ರಾಜ್ಯ ಸರ್ಕಾರ ಘೋಷಿಸಿದ ಶಕ್ತಿ ಯೋಜನೆಯನ್ನು ಪಡೆಯುವಲ್ಲಿ ಕರಾವಳಿಯ ಅದರಲ್ಲೂ ಗ್ರಾಮೀಣ ಭಾಗದ ಮಹಿಳೆಯರು ಪಡೆಯುವಲ್ಲಿ ವಿಫಲರಾಗಿದ್ದಾರೆ ಸರ್ಕಾರ ಈ ಬಗ್ಗೆ ಹೆಚ್ಚಿನ ಗಮನವಹಿಸಿ ಗ್ರಾಮೀಣ ಭಾಗದ ಜನರಿಗೂ ಅನುಕೂಲ ಮಾಡಬೇಕಾಗಿದೆ..

ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.




