ಕಾಂಗ್ರೆಸ್ ಸರ್ಕಾರವು ಮುಸ್ಲಿಂ ಸಮುದಾಯಕ್ಕೆ ನೀಡಿದ್ದ ಚುನಾವಣಾ ಭರವಸೆಗಳನ್ನು ಇನ್ನೂ ಪೂರ್ಣವಾಗಿ ಈಡೇರಿಸದಿರುವ ಹಿನ್ನೆಲೆಯಲ್ಲಿ, ರಾಜ್ಯ ಮಟ್ಟದಲ್ಲಿ ಮುಸ್ಲಿಂ ಸಂಘಟನೆಗಳ ಒಕ್ಕೂಟವನ್ನು ರಚಿಸಿ ಸಂಘಟಿತ ಹೋರಾಟ ನಡೆಸಬೇಕೆಂದು ಇಂದು ಉಡುಪಿಯಲ್ಲಿ ತೀರ್ಮಾನಿಸಲಾಯಿತು.

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ರಾಜ್ಯದ ಮುಸ್ಲಿಮ್ ಸಂಘಟನೆಯ ನಾಯಕರ ಸಭೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದ ಪ್ರತಿನಿಧಿಗಳು ಸಮ್ಮುಖದಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಮಾತನಾಡಿದ ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಎಲ್.ಕೆ. ಅತೀಕ್, ಮುಸ್ಲಿಂ ಸಮುದಾಯ ಸರ್ಕಾರದಿಂದ ನಿರೀಕ್ಷಿಸುವ ಕ್ರಮಗಳಿಗೆ ಇರುವ ರಾಜಕೀಯ, ಕಾನೂನು ಮತ್ತು ಆಡಳಿತಾತ್ಮಕ ಸವಾಲುಗಳ ಕುರಿತು ವಿವರಿಸಿದರು. ಸಮುದಾಯದ ಸ್ವಯಂ ಅಭಿವೃದ್ಧಿ, ಇತರ ಸಮುದಾಯಗಳೊಂದಿಗೆ ಸೌಹಾರ್ದಯುತ ಸಹಕಾರ ಮತ್ತು ಅದಕ್ಕಾಗಿ ಬೇಕಾದ ಕ್ರಮಗಳ ಬಗ್ಗೆ ಅವರು ಸಲಹೆ ನೀಡಿದರು.
ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಮಾಜಿ ಅಧ್ಯಕ್ಷ ಯಾಸೀನ್ ಮಲ್ಪೆ ಮಾತನಾಡಿ, ಕಾಂಗ್ರೆಸ್ ಭರವಸೆಗಳ ಅನುಷ್ಠಾನ, ಸರ್ಕಾರದ ಧೋರಣೆ ಹಾಗೂ ಮುಂದಿನ ಎರಡುವರೆ ವರ್ಷಗಳಲ್ಲಿ ಸಮುದಾಯ ಸರಕಾರದೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದರ ಕುರಿತು ಚರ್ಚೆಗೆ ಪೀಠಿಕೆ ನೀಡಿದರು.

ಕಾನೂನಾತ್ಮಕ ಅಡಚಣೆಗಳ ಬಗ್ಗೆ ಬೆಂಗಳೂರಿನ ವಕೀಲ ಮುಝಫರ್ ಅಹ್ಮದ್ ಮಾಹಿತಿ ನೀಡಿದರು. ರಾಜ್ಯದ ಸುಮಾರು 15 ಜಿಲ್ಲೆಗಳಿಂದ ಆಗಮಿಸಿದ ವಿವಿಧ ಮುಸ್ಲಿಂ ಸಂಘಟನೆಗಳ ಪ್ರತಿನಿಧಿಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮೊಹಮ್ಮದ್ ಮೌಲಾ ಸ್ವಾಗತಿಸಿದರು. ಮೌಲಾನಾ ಝಮೀರ್ ಅಹ್ಮದ್ ರಶಾದಿ ಚರ್ಚೆಯನ್ನು ನಡೆಸಿದರು. ಜಿ.ಎಂ. ಶರೀಫ್ ಹೂಡೆ ನಿರೂಪಿಸಿದರು. ಝಫರುಲ್ಲಾ ಹೂಡೆ ವಂದಿಸಿದರು.





