ಮಲ್ಪೆ ಬಂದರಿನಲ್ಲಿ ಮೀನು ಯಾಲಂ ನಡೆಸುತ್ತಿದ್ದ ಕಾರ್ಮಿಕ ಅಯ್ಯುಬ್ ಅವರ ಮೇಲೆ ನಡೆದಿರುವ ಕಾನೂನುಬಾಹಿರ ಹಲ್ಲೆಯನ್ನು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ತೀವ್ರವಾಗಿ ಖಂಡಿಸಿದೆ.
ಫೆ 26ರ ಬೆಳಗ್ಗೆ ಸುಮಾರು 7.30ರ ವೇಳೆಗೆ ಅಯ್ಯುಬ್ ಅವರು ತಮ್ಮ ನಿತ್ಯದ ಉದ್ಯೋಗದಲ್ಲಿ ತೊಡಗಿದ್ದ ಸಂದರ್ಭದಲ್ಲಿ, ಮಿಥುನ್ ಕರ್ಕೆರ ಎಂಬ ವ್ಯಕ್ತಿ ಕಳ್ಳತನದ ಆರೋಪ ಮಾಡುತ್ತಾ ಏಕಾಏಕಿ ಹಲ್ಲೆಗೆ ಇಳಿದಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಒಕ್ಕೂಟ ತಿಳಿಸಿದೆ. ಅಯ್ಯುಬ್ ಅವರು ತಮಗೆ ಬಂದ ಸರಕನ್ನೇ ಯಾಲಂ ಮಾಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದರೂ, ಅವರ ಮನವಿಯನ್ನು ಲೆಕ್ಕಿಸದೇ ಹಲ್ಲೆ ನಡೆಸಿರುವುದು ದುಃಖಕರ ಮತ್ತು ಅಸ್ವೀಕಾರಾರ್ಹ ಎಂದು ಹೇಳಲಾಗಿದೆ.
ಮಲ್ಪೆ ಬಂದರು ವಿವಿಧ ಜಾತಿ–ಮತಗಳ ಕಾರ್ಮಿಕರು ಶಾಂತಿಯುತವಾಗಿ ದುಡಿಯುವ ಸ್ಥಳವಾಗಿದೆ. ಇಂತಹ ಸ್ಥಳದಲ್ಲಿ ಕಾನೂನನ್ನು ಕೈಗೆತ್ತಿಕೊಂಡು ಹಿಂಸಾಚಾರ ನಡೆಸುವುದು ಶ್ರಮಿಕ ವರ್ಗದ ಬದುಕಿನ ಹಕ್ಕಿನ ಮೇಲಿನ ನೇರ ದಾಳಿಯಾಗಿದೆ ಎಂದು ಒಕ್ಕೂಟ ಅಭಿಪ್ರಾಯಪಟ್ಟಿದೆ.
ಘಟನೆಯ ವೇಳೆ ಅಯ್ಯುಬ್ ಅವರು ಉಪವಾಸದಲ್ಲಿದ್ದೇನೆ, ಆರೋಗ್ಯ ಸಮಸ್ಯೆ ಇದೆ ಎಂದು ಮನವಿ ಮಾಡಿಕೊಂಡಿದ್ದರೂ ಹಲ್ಲೆ ನಿಲ್ಲಿಸದಿರುವುದು ಮಾನವೀಯ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಿದ್ದಾರೆ.
ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಬಂದರು ಪ್ರದೇಶದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ತಕ್ಷಣ ಕ್ರಮವಹಿಸಬೇಕು ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಮಾಧ್ಯಮ ವಕ್ತಾರ ಇಕ್ಬಾಲ್ ಮನ್ನಾ ಆಗ್ರಹಿಸಿದ್ದಾರೆ.





