ಉಡುಪಿ ಜಿಲ್ಲೆಯ 80 ಬಡಗುಬೆಟ್ಟು ಗ್ರಾಮದ ಸರ್ವೆ ನಂ. 11/1ರಲ್ಲಿ 6.30 ಎಕರೆ ಸರಕಾರಿ ಭೂಮಿಯನ್ನು ಉಡುಪಿ ಕಂಬಳ ಆಯೋಜನೆಗಾಗಿ ಕಾಯ್ದಿರಿಸಿರುವ ವಿಚಾರ ಇದೀಗ ರಾಜಕೀಯ ಕಿತ್ತಾಟಕ್ಕೆ ಕಾರಣವಾಗಿದೆ. ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ನಡುವೆ ಆರೋಪ–ಪ್ರತ್ಯಾರೋಪಗಳು ತೀವ್ರಗೊಂಡಿದ್ದು, ಕಂಬಳ ವಿಷಯ ರಾಜಕೀಯ ಸಂಘರ್ಷದ ಕೇಂದ್ರಬಿಂದುವಾಗಿದೆ.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, “ಕಾಪು ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಪಡಿಸಿ ಸಣ್ಣತನದ ರಾಜಕಾರಣ ಮಾಡುತ್ತಿದ್ದಾರೆ. ಇದನ್ನು ನಾವು ಸಹಿಸುವುದಿಲ್ಲ,” ಎಂದು ಎಚ್ಚರಿಸಿದ್ದಾರೆ.
ಇದುವರೆಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಂಪೂರ್ಣ ಬೆಂಬಲ ನೀಡಿ ಸೌಹಾರ್ದ ರಾಜಕೀಯ ನಡೆಸಿದ್ದೇವೆ. ಆದರೆ ಇದೇ ರೀತಿ ಸಂಘರ್ಷ ರಾಜಕೀಯ ಮುಂದುವರಿದರೆ ಕಪ್ಪು ಬಾವುಟ ಪ್ರದರ್ಶನ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಶಾಸಕರ ಪ್ರಕಾರ, ಆರು ತಿಂಗಳ ಹಿಂದೆ ಎಸಿ, ಡಿಸಿ ಸಹಿತ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಗಡಿ ಗುರುತು ಮಾಡಿ 6.30 ಎಕರೆ ಭೂಮಿಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಸರ್ಕಾರವೇ ಮಂಜೂರು ಮಾಡಿದೆ. ಪಕ್ಷಾತೀತವಾಗಿ ಕಂಬಳ ಸಮಿತಿ ರಚಿಸಿ ಜಿಲ್ಲಾ ಉಸ್ತುವಾರಿ ಸಚಿವರಿಂದಲೇ ಒಪ್ಪಿಗೆ ಪಡೆಯಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

“ಭೂಮಿ ಹಸ್ತಾಂತರವೇ ಆಗಿಲ್ಲ” — ಸೊರಕೆ ಪ್ರತಿಕ್ರಿಯೆ
ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ಅವರು ಈ ಆರೋಪಗಳನ್ನು ತಳ್ಳಿ ಹಾಕಿ, “ಜಿಲ್ಲಾಡಳಿತ ಉದ್ದೇಶಿತ ಉಡುಪಿ ಕಂಬಳಕ್ಕಾಗಿ 6.30 ಎಕರೆ ಭೂಮಿಯನ್ನು ಯಾವುದೇ ಕಂಬಳ ಸಮಿತಿಗೆ ಹಸ್ತಾಂತರಿಸಿಲ್ಲ. ಫೆ.28ರಂದು ನಡೆದ ಭೂಮಿ ಪೂಜೆ ಕಾನೂನು ಬಾಹಿರ” ಎಂದು ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದಾರೆ.

“ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಯಾವುದೇ ಅಧಿಕೃತ ಕಂಬಳ ಸಮಿತಿ ರಚನೆಯಾಗಿಲ್ಲ. ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಶಾಸಕರ ನೇತೃತ್ವದಲ್ಲಿ ಶಂಕುಸ್ಥಾಪನೆ ನಡೆಸಲಾಗಿದೆ,” ಎಂದು ಆರೋಪಿಸಿದ್ದಾರೆ.
2025ರ ಸೆ.22ರಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹೆಸರಿಗೆ ಷರತ್ತುಗಳೊಂದಿಗೆ ಭೂಮಿ ಕಾಯ್ದಿರಿಸಲಾಗಿದೆ. ಆದರೆ ಸಮಿತಿಗೆ ಹಸ್ತಾಂತರಿಸಿಲ್ಲ. ಅಲ್ಲದೆ ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಮರಮಟ್ಟುಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಿರುವ ಕುರಿತು ಪ್ರಕರಣವೂ ದಾಖಲಾಗಿದೆ ಎಂದು ಅವರು ಹೇಳಿದ್ದಾರೆ.
6.30 ಎಕರೆ ಬದಲು ಸುಮಾರು 13 ಎಕರೆ ಪ್ರದೇಶದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಈ ಪ್ರದೇಶದಲ್ಲಿ ಸುಮಾರು 40 ವರ್ಷಗಳಿಂದ 10 ಕೃಷಿಕ ಕುಟುಂಬಗಳು ತೋಟಗಾರಿಕೆ ನಡೆಸುತ್ತಿದ್ದು, 1993ರಲ್ಲಿ ಅವರಿಗೆ ಮಂಜೂರಾದ ಜಾಗವಿದು ಎಂದು ಅವರು ತಿಳಿಸಿದ್ದಾರೆ.

“ಬಡವರಿಗೆ ಭೂಮಿ ಕೊಡಿ, ಕಂಬಳಕ್ಕಲ್ಲ” — ದಸಂಸ ಆಕ್ರೋಶ
ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದದ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್ ಮತ್ತು ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಸಾವಿರಾರು ಬಡವರು ಸ್ವಂತ ನಿವೇಶನವಿಲ್ಲದೇ ಸಂಕಷ್ಟದಲ್ಲಿರುವಾಗ 6.30 ಎಕರೆ ಸರಕಾರಿ ಭೂಮಿಯನ್ನು ಕಂಬಳಕ್ಕೆ ಕಾಯ್ದಿರಿಸಿರುವುದು ಜನವಿರೋಧಿ ನಡೆ ಎಂದು ಅವರು ಆರೋಪಿಸಿದ್ದಾರೆ.
“ಕಂಬಳ ಕೆಲವೊಂದು ಕುಟುಂಬಗಳ ಆಚರಣೆ. ಅದು ಜಿಲ್ಲೆಯ ಮೂಲಭೂತ ಅವಶ್ಯಕತೆ ಅಲ್ಲ. ಬಡವರಿಗೆ 5 ಸೆಂಟ್ಸ್ ಭೂಮಿ ಕೊಡಲು ಭೂಮಿ ಇಲ್ಲವೆಂದು ಹೇಳುವ ಆಡಳಿತ ಈಗ ಕಂಬಳಕ್ಕಾಗಿ ಭೂಮಿ ಕಾಯ್ದಿರಿಸಿರುವುದು ವಿರೋಧಾಭಾಸ,” ಎಂದು ಅವರು ಪ್ರಶ್ನಿಸಿದ್ದಾರೆ.
ಜಿಲ್ಲಾಡಳಿತ ರಾಜಕಾರಣಿಗಳ ಒತ್ತಡಕ್ಕೆ ಮಣಿಯದೆ ಮೊದಲು ಬಡವರಿಗೆ ನಿವೇಶನ ಮಂಜೂರು ಮಾಡಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.

ಜಾನಪದ ಕ್ರೀಡೆನಾ? ರಾಜಕೀಯ ವೇದಿಕೆಯಾ?
ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತೀ ವರ್ಷ ಅನೇಕ ಕಂಬಳಗಳು ನಡೆಯುತ್ತವೆ. ಗ್ರಾಮೀಣ ಜಾನಪದ ಕ್ರೀಡೆಯಾಗಿ ಗುರುತಿಸಿಕೊಂಡಿರುವ ಕಂಬಳ ಇದೀಗ ರಾಜಕೀಯ ಪ್ರತಿಷ್ಠೆಯ ವೇದಿಕೆಯಾಗಿದೆ ಎಂಬ ಟೀಕೆ ಕೇಳಿಬರುತ್ತಿದೆ.
ಒಂದೆಡೆ ಕಂಬಳವನ್ನು ಜಿಲ್ಲಾಡಳಿತದ ಕಾರ್ಯಕ್ರಮವನ್ನಾಗಿ ನಡೆಸಬೇಕು ಎಂಬ ಆಗ್ರಹ; ಮತ್ತೊಂದೆಡೆ ಬಡವರ ಭೂಮಿ ಹಕ್ಕು, ಕೃಷಿಕರ ಜೀವನೋಪಾಯ, ಪರಿಸರ ಹಾನಿ ಎಂಬ ಪ್ರಶ್ನೆಗಳು ಮುಂದಿಡಲ್ಪಡುತ್ತಿವೆ.
ಜಿಲ್ಲಾಡಳಿತದ ಅಂತಿಮ ನಿರ್ಧಾರವೇ ವಿವಾದಕ್ಕೆ ತೆರೆ ಎಳೆಯುವ ಸಾಧ್ಯತೆ ಇದೆ. ಭೂಮಿ ಹಸ್ತಾಂತರ ಪ್ರಕ್ರಿಯೆ, ಷರತ್ತುಗಳ ಅನುಸರಣೆ ಹಾಗೂ ಕಾನೂನು ಪ್ರಕ್ರಿಯೆಗಳ ಕುರಿತು ಸ್ಪಷ್ಟತೆ ಬಂದ ಬಳಿಕವೇ ಉಡುಪಿ ಕಂಬಳದ ಭವಿಷ್ಯ ನಿರ್ಧಾರವಾಗಲಿದೆ.
ಇದೀಗ ಕಂಬಳ ವಿಷಯ ಕೇವಲ ಕ್ರೀಡೆಗೆ ಸೀಮಿತವಾಗದೆ, ಕಾಪು ಕ್ಷೇತ್ರದ ರಾಜಕೀಯ ಪ್ರತಿಷ್ಠೆಯ ಪ್ರಶ್ನೆಯಾಗಿ ರೂಪಾಂತರಗೊಂಡಿರುವುದು ಸ್ಪಷ್ಟವಾಗಿದೆ.

ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.




