ಅಂಗಡಿ ಶೋ ರೂಮ್ ಗಳು ಹೋಟೆಲ್ಗಳು ಮತ್ತು ಶಾಲಾ ಕಾಲೇಜ್ಗಳ ನಾಮಫಲಕದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಅಳವಡಿಸಲು ಸರಕಾರವು ಈಗಾಗಲೇ ಆದೇಶ ನೀಡಿದೆ.
ರಾಜ್ಯ ಸರಕಾರವು ಕನ್ನಡ ಭಾಷೆ ಅಳವಡಿಸಲು ಆದೇಶ ಮಾಡಿದರೂ ಸಹ ಅಂಗಡಿ ಶೋ ರೂಮ್ಗಳು, ಹೋಟೆಲ್ಗಳು ಮತ್ತು ಶಾಲಾ ಕಾಲೇಜ್ನವರು ಇಲ್ಲಿಯವರೆಗೆ ನಾಮಫಲಕವನ್ನು ಅಳವಡಿಸಿರುವುದಿಲ್ಲ. ಉಡುಪಿ ಜಿಲ್ಲೆಯಲ್ಲಿ ಕನ್ನಡ ಭಾಷೆ ಮಾಯವಾಗಿರುತ್ತದೆ, ಒಂದು ವೇಳೆ 15 ದಿನಗಳ ಒಳಗಾಗಿ ಕನ್ನಡ ಭಾಷೆಯ ನಾಮಫಲಕವನ್ನು ಯಾವುದೇ ಅಂಗಡಿ ಶೋ ರೂಮ್ಗಳು, ಹೋಟೆಲ್ಗಳು ಮತ್ತು ಶಾಲಾ ಕಾಲೇಜ್ನವರು ಹಾಗೂ ಇನ್ನಿತರ ಕಚೇರಿಗಳಲ್ಲಿ ಅಳವಡಿಸದಿದ್ದರೆ ಹಾಗೂ ನಿಮ್ಮ ಆದೇಶಕ್ಕೆ ಸ್ಪಂದಿಸಿಲ್ಲವಾದರೆ ಮುಂದಿನ ದಿನಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಘಟಕದ ವತಿಯಿಂದ ಮುಂದಿನ ಹೋರಾಟವನ್ನು ಕೈಗೊಳ್ಳುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಪ್ರಭಾಕರ್ ಪೂಜಾರಿಯವರು ಹೇಳಿದರು.
ಅವರು ಇಂದು ಉಡುಪಿಯ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾಮಫಲಕದಲ್ಲಿ ಕನ್ನಡ ಕಡ್ಡಾಯವಾಗಿ ಅನುಷ್ಠಾನಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾಧಿಕಾರಿಗಳು, ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದೇವೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೂಡ ಪ್ರಸ್ತಾಪ ಮಾಡಿದ್ದೇವೆ. ಉಡುಪಿ ಜಿಲ್ಲೆಯಲ್ಲಿ ನಾಮಫಲಕಗಳಲ್ಲಿ ಶೇ. 60ರಷ್ಟು ಭಾಗ ಕನ್ನಡ ಇರಬೇಕು. ಈ ಬಗ್ಗೆ ಪೌರಾಯುಕ್ತರಿಗೆ ಮನವಿ ಮಾಡಿದ್ದೇವೆ. ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಇರದಿದ್ದರೆ ಅಂತಹವರ ಲೈಸನ್ಸ್ ರದ್ದು ಮಾಡುವ ಭರವಸೆಯನ್ನು ಪೌರಾಯುಕ್ತರು ಕೊಟ್ಟಿದ್ದಾರೆ ಎಂದರು. ನಾಮಫಲಕ ಬದಲಾವಣೆ ಮಾಡಲು 15 ದಿನಗಳ ಗಡುವನ್ನು ಪೌರಾಯುಕ್ತರಿಗೆ ಕೊಟ್ಟಿದ್ದೇವೆ. ಅದರೊಳಗೆ ನಾಮಫಲಕ ಬದಲಾಗದಿದ್ದರೆ ಅಂತಹ ಕಟ್ಟಡ, ವಾಣಿಜ್ಯ ಮಳಿಗೆಗಳ ನಾಮಫಲಕಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತೇವೆ. ಉಗ್ರವಾದ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.





