ಕೊರಗ ಸಮುದಾಯದ ವಿದ್ಯಾವಂತ ಯುವಜನತೆಗೆ ಸರಕಾರಿ ಉದ್ಯೋಗದಲ್ಲಿ ನೇರ ನೇಮಕಾತಿ ವ್ಯವಸ್ಥೆ ಕಲ್ಪಿಸಬೇಕು ಎಂಬ ನ್ಯಾಯಸಮ್ಮತ ಬೇಡಿಕೆಯನ್ನು ಮುಂದಿಟ್ಟು, ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ (ಕರ್ನಾಟಕ–ಕೇರಳ) ಇದರ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಆರಂಭಿಸಿರುವ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಐದು ದಿನಗಳು ಪೂರೈಸಿದ್ದರೂ, ಇಲ್ಲಿಯವರೆಗೆ ಯಾವುದೇ ಸ್ಪಷ್ಟ ಪರಿಹಾರ ದೊರಕದ ಹಿನ್ನೆಲೆಯಲ್ಲಿ ಹೋರಾಟ ಇನ್ನಷ್ಟು ತೀವ್ರಗೊಂಡಿದೆ.
ಕೊರಗ ಸಮುದಾಯವು ದೇಶದ ಅತ್ಯಂತ ಹಿಂದುಳಿದ ಹಾಗೂ ಅತೀ ದುರ್ಬಲ ಬುಡಕಟ್ಟು ಸಮುದಾಯಗಳಲ್ಲಿ ಒಂದಾಗಿದ್ದು, ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ದೀರ್ಘಕಾಲದಿಂದಲೂ ವಂಚನೆಗೆ ಒಳಗಾಗುತ್ತಿದೆ. ಸರ್ಕಾರದಿಂದ ಮೀಸಲಾತಿ ವ್ಯವಸ್ಥೆ ಕಲ್ಪಿಸಲಾಗಿದ್ದರೂ, ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಕ್ರಿಯೆಯಲ್ಲಿ ಬಲಾಢ್ಯ ಸಮುದಾಯಗಳ ಎದುರು ಕೊರಗ ಸಮುದಾಯದ ಯುವಜನತೆ ಸಮರ್ಥವಾಗಿ ಸ್ಪರ್ಧಿಸುವುದು ಅಸಾಧ್ಯವಾಗುತ್ತಿರುವ ವಾಸ್ತವ ಇಂದು ಎಲ್ಲರ ಮುಂದಿದೆ.

ಪ್ರಸ್ತುತ ಕೊರಗ ಸಮುದಾಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಗಳನ್ನು ಪಡೆದ ಸುಮಾರು ಒಂದು ಸಾವಿರದಷ್ಟು ಯುವಜನರು ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗಿ ಬದುಕು ಸಾಗಿಸುತ್ತಿದ್ದಾರೆ. ವಿದ್ಯಾಭ್ಯಾಸ ಹೊಂದಿದ್ದರೂ ಸರಕಾರಿ ಉದ್ಯೋಗ ದೊರಕದಿರುವುದರಿಂದ ಈ ಯುವಜನತೆ ತೀವ್ರ ನಿರಾಶೆಗೆ ಒಳಗಾಗಿದ್ದು, ಅವರ ಬದುಕು ಮತ್ತೆ ಬಡತನದ ಚಕ್ರವ್ಯೂಹಕ್ಕೆ ಸಿಲುಕುವ ಆತಂಕ ಎದುರಾಗಿದೆ. ಈ ಹಿನ್ನಲೆಯಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಗಳ ಹೊರತಾಗಿ ವಿಶೇಷ ನೇರ ನೇಮಕಾತಿ ನೀತಿಯನ್ನು ರೂಪಿಸಿ, ಕೊರಗ ಸಮುದಾಯದ ವಿದ್ಯಾವಂತ ಯುವಜನತೆಗೆ ಸರಕಾರಿ ಉದ್ಯೋಗ ಕಲ್ಪಿಸಬೇಕೆಂಬುದು ಧರಣಿಯ ಪ್ರಮುಖ ಬೇಡಿಕೆಯಾಗಿದೆ. ಮತ್ತು ಇದು ಸಂವಿಧಾನಾತ್ಮಕ ಹಕ್ಕು ಮತ್ತು ಸಾಮಾಜಿಕ ನ್ಯಾಯದ ಭಾಗವೆಂದು ಹೋರಾಟಗಾರರು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಈದಿನ.ಕಾಮ್ ಜೊತೆ ಮಾತನಾಡಿದ ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ–ಕೇರಳ ಇದರ ಅಧ್ಯಕ್ಷರಾದ ಸುಶೀಲ ನಾಡ, ನಮ್ಮ ಸಂಘಟನೆಯ ಮೂಲಕ ಕಳೆದ 2024ರ ಆಗಸ್ಟ್ ತಿಂಗಳಲ್ಲಿ ಕೊರಗ ಸಮುದಾಯದ ವಿದ್ಯಾವಂತರಿಗೆ ನೇರ ನೇಮಕಾತಿ ಮೂಲಕ ಸರ್ಕಾರಿ ಉದ್ಯೋಗ ನೀಡಬೇಕು ಎಂಬ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದೇವೆ. ಈ ಒತ್ತಾಯ ಮಾಡಿ ಈಗಾಗಲೇ ಒಂದು ವರ್ಷ ಕಳೆದಿದ್ದು, ಈ ಸಂಬಂಧ ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ.
2024ರ ರಾಜ್ಯ ಬಜೆಟ್ನಲ್ಲಿ ಬುಡಕಟ್ಟು ಸಮುದಾಯದವರಿಗೆ ನೇರ ನೇಮಕಾತಿ ಮೂಲಕ ಉದ್ಯೋಗ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದ್ದರೂ, ಅದು ಇಂದಿಗೂ ಕೇವಲ ಘೋಷಣೆಯಲ್ಲಿಯೇ ಉಳಿದಿದ್ದು, ನೇಮಕಾತಿ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಈ ಹಿನ್ನೆಲೆಯಲ್ಲಿ ಬುಡಕಟ್ಟು ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿ ಹಾಗೂ ನಿರ್ದೇಶಕರನ್ನು ಭೇಟಿ ಮಾಡಿ ನಮ್ಮ ಅಹವಾಲುಗಳನ್ನು ಪುನಃ ಮುಂದಿಟ್ಟಿದ್ದೇವೆ.
ಅದರ ಫಲವಾಗಿ ಸರ್ಕಾರ ಒಂದು ಆದೇಶವನ್ನು ಹೊರಡಿಸಿ ಕಂದಾಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ಮಾಹಿತಿಯನ್ನು ಕೇಳಿಸಿದೆ. ಆದರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬುಡಕಟ್ಟು ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಅರಣ್ಯ ಇಲಾಖೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಖಾಲಿ ಹುದ್ದೆಗಳಿರುವುದರಿಂದ, ಈ ಇಲಾಖೆಗಳಲ್ಲಿಯೂ ಕೊರಗ ಸಮುದಾಯದವರಿಗೆ ನೇರ ನೇಮಕಾತಿ ನೀಡಬೇಕೆಂದು ನಾವು ಕಳೆದ ಒಂದು ವರ್ಷದಿಂದ ಒತ್ತಾಯಿಸುತ್ತಿದ್ದೇವೆ.

ಕರಾವಳಿ ಪ್ರದೇಶದ ಅತೀ ಹಿಂದುಳಿದ ಹಾಗೂ ಅಸ್ಪೃಶ್ಯತೆಗೆ ಒಳಗಾಗಿರುವ ಕೊರಗ ಸಮುದಾಯ, ಸಾವಿರಾರು ವರ್ಷಗಳಿಂದ ಗೌರವ ಮತ್ತು ಘನತೆಯನ್ನು ಕಳೆದುಕೊಂಡು ಬದುಕುತ್ತಿರುವ ಸಮುದಾಯವಾಗಿದೆ. ಕಳೆದ ಸುಮಾರು 40 ವರ್ಷಗಳಿಂದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ನಡೆದ ಜಾಗೃತಿಯಿಂದ ಸಮುದಾಯದಲ್ಲಿ ಶಿಕ್ಷಣದ ಅರಿವು ಮೂಡಿದ್ದು, ಇಂದಿಗೆ ಕೆಲವು ಯುವಕರು ಉನ್ನತ ಶಿಕ್ಷಣವೂ ಪಡೆಯುತ್ತಿದ್ದಾರೆ. ಆದರೆ ಇಂದಿಗೂ ಸರ್ಕಾರಿ ಉದ್ಯೋಗ ಎಂಬುದು ಕೊರಗ ಸಮುದಾಯಕ್ಕೆ ಕನಸಾಗಿಯೇ ಉಳಿದಿದೆ.
ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಕ್ರಿಯೆಯಲ್ಲಿ ಸಾಮಾಜಿಕ ಹಾಗೂ ಆರ್ಥಿಕವಾಗಿ ಬಲಾಢ್ಯ ಸಮುದಾಯಗಳೊಂದಿಗೆ ಕೊರಗ ಸಮುದಾಯದ ಯುವಜನತೆ ಸಮರ್ಥವಾಗಿ ಸ್ಪರ್ಧಿಸುವುದು ಅಸಾಧ್ಯವಾಗಿದೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಒಟ್ಟು ಜನಸಂಖ್ಯೆ ಮತ್ತು ವಿದ್ಯಾವಂತರ ಸಂಖ್ಯೆಯನ್ನು ಆಧರಿಸಿ ನೋಡಿದರೆ, ಕೊರಗ ಸಮುದಾಯಕ್ಕೆ ಕನಿಷ್ಠ 1,500 ರಿಂದ 2,000 ಸರ್ಕಾರಿ ಉದ್ಯೋಗಗಳ ಅಗತ್ಯವಿದೆ.

ಜನಸಂಖ್ಯೆ ದಿನೇದಿನೇ ಕಡಿಮೆಯಾಗುತ್ತಿದ್ದು, ಸರ್ಕಾರಿ ಉದ್ಯೋಗಕ್ಕೆ ನಿಗದಿಪಡಿಸಿರುವ ವಯೋಮಿತಿಯನ್ನೂ ಯುವಕರು ಮೀರುತ್ತಿದ್ದಾರೆ. ಸರ್ಕಾರ ಇನ್ನೂ ವಿಳಂಬ ಮಾಡಿದರೆ, ವಿದ್ಯೆಗೆ ತಕ್ಕಂತೆ ಸರ್ಕಾರಿ ಉದ್ಯೋಗ ಪಡೆಯುವ ಅವಕಾಶ ಕೊರಗ ಸಮುದಾಯದ ಯುವಜನತೆಗೆ ಸಂಪೂರ್ಣವಾಗಿ ಕಳೆದುಕೊಳ್ಳುವ ಆತಂಕವಿದೆ. ಆದ್ದರಿಂದ ಸರ್ಕಾರ ಕೂಡಲೇ ಆದೇಶ ರೂಪದಲ್ಲಿ ನೇರ ನೇಮಕಾತಿ ಜಾರಿಗೊಳಿಸಿ, ಕೊರಗ ಸಮುದಾಯದ ಯುವಜನತೆಗೆ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.
ಖಾಯಂ ಉದ್ಯೋಗ ಭರವಸೆ ನೀಡಿ ಕೈಬಿಟ್ಟರು, ಎಂ.ಕಾಂ ಪದವಿ ಇದ್ದರೂ ಉದ್ಯೋಗವಿಲ್ಲ : ಪ್ರೀತಿ

ಈದಿನ.ಕಾಮ್ ಜೊತೆ ಮಾತನಾಡಿದ ವಿದ್ಯಾರ್ಥಿನಿ ಪ್ರೀತಿ, ನಾನು ಎಂ.ಕಾಂ ಪದವಿಯನ್ನು ಪಡೆದಿದ್ದೇನೆ. ಹಲವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದಿದ್ದರೂ ಇದುವರೆಗೂ ಯಾವುದೇ ಫಲಿತಾಂಶ ಬಂದಿಲ್ಲ. ಹೆಬ್ರಿ ತಾಲೂಕಿನ ಕಂದಾಯ ಇಲಾಖೆಯಲ್ಲಿ ಒಂದೂವರೆ ವರ್ಷಗಳ ಕಾಲ ತಾತ್ಕಾಲಿಕವಾಗಿ ಕೆಲಸ ಮಾಡಿದ್ದೆ. ಖಾಯಂ ಉದ್ಯೋಗ ಬಂದಲ್ಲಿ ಮೊದಲ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಲಾಗಿತ್ತು. ಆದರೆ ಆ ಹುದ್ದೆಗೆ ನನ್ನಿಂದ ಅರ್ಜಿ ಪಡೆದುಕೊಂಡು, ಬಳಿಕ ಬೇರೆ ವ್ಯಕ್ತಿಯನ್ನು ನೇಮಕ ಮಾಡಲಾಗಿದೆ. ನಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಯಾವುದಾದರೂ ಇಲಾಖೆಯಲ್ಲಿ ಉದ್ಯೋಗ ಸಿಗಬೇಕು. ಇಷ್ಟು ವರ್ಷ ಕಲಿತಿದ್ದೇವೆ, ನಮ್ಮ ವಯಸ್ಸೂ ಮೀರುತ್ತಿದೆ. ನಮ್ಮ ಹೋರಾಟವನ್ನು ಸರ್ಕಾರ ಆಲಿಸಿ ಉದ್ಯೋಗದ ಭರವಸೆ ನೀಡಬೇಕು ಎಂದು ಆಗ್ರಹಿಸಿದರು.

ಧರಣಿಗೆ ಬೆಂಬಲವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್, ಮೈಸೂರು ವಿಭಾಗದ ಸಂಘಟನಾ ಸಂಚಾಲಕ ಶ್ಯಾಮ್ರಾಜ್ ಬಿರ್ತಿ ಹಾಗೂ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ್ ಗಿಳಿಯಾರು ಅವರುಗಳು ಗುರುವಾರ ಭಾಗವಹಿಸಿದ್ದರು. ಅರಣ್ಯ ಹಾಗೂ ಬುಡಕಟ್ಟು ಸಮುದಾಯಗಳ ಅರ್ಹ ವಿದ್ಯಾವಂತ ನಿರುದ್ಯೋಗಿಗಳನ್ನು ಕರ್ನಾಟಕ ಸರ್ಕಾರದ ಸಿವಿಲ್ ಸೇವೆಗಳಲ್ಲಿ ನೇರ ನೇಮಕಾತಿ ಮಾಡಿ ಉದ್ಯೋಗ ಭದ್ರತೆ ಒದಗಿಸುವ ಸಂಬಂಧ ಸ್ಪಷ್ಟ ಆದೇಶ ಹೊರಡಿಸುವವರೆಗೂ ಈ ಹೋರಾಟವನ್ನು ನಿರಂತರವಾಗಿ ಮುಂದುವರಿಸಲಾಗುವುದು ಎಂದು ಧರಣಿನಿರತರು ಸ್ಪಷ್ಟಪಡಿಸಿದರು.
ಒಟ್ಟಿನಲ್ಲಿ, ಕೊರಗ ಸಮುದಾಯದ ವಿದ್ಯಾವಂತ ಯುವಜನತೆಗೆ ನೇರ ನೇಮಕಾತಿ ಮೂಲಕ ಸರ್ಕಾರಿ ಉದ್ಯೋಗ ಕಲ್ಪಿಸುವುದೆಂಬುದು ಕೇವಲ ಬೇಡಿಕೆ ಅಲ್ಲ, ಅದು ಸಾಮಾಜಿಕ ನ್ಯಾಯದ ಅನಿವಾರ್ಯತೆವಾಗಿದೆ. ಸರ್ಕಾರ ಘೋಷಣೆಗಳಿಗೆ ಸೀಮಿತವಾಗದೇ ಕೂಡಲೇ ಸ್ಪಷ್ಟ ಆದೇಶ ಹೊರಡಿಸಿ, ಖಾಲಿ ಹುದ್ದೆಗಳಲ್ಲಿ ಕೊರಗ ಸಮುದಾಯದವರಿಗೆ ನೇರ ನೇಮಕಾತಿ ಜಾರಿಗೊಳಿಸಬೇಕು. ವಿಳಂಬ ಮುಂದುವರಿದರೆ, ಶಿಕ್ಷಣ ಪಡೆದ ಈ ಪೀಳಿಗೆಯ ಭವಿಷ್ಯ ಅಂಧಕಾರಕ್ಕೆ ತಳ್ಳಲ್ಪಡುವ ಅಪಾಯವಿದ್ದು, ಸರ್ಕಾರ ತಕ್ಷಣವೇ ಜವಾಬ್ದಾರಿಯುತ ನಿರ್ಧಾರ ಕೈಗೊಳ್ಳಬೇಕಾಗಿದೆ.


ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.




