ಉಡುಪಿ ಜಿಲ್ಲೆಗೆ ಆಗಮಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಆತ್ಮೀಯ ಸ್ವಾಗತವನ್ನು ತಿಳಿಸುತ್ತಾ, ಜಿಲ್ಲೆಯ ಅಭಿವೃದ್ಧಿ, ಮೀನುಗಾರರ ಹಿತ ಮತ್ತು ಯುವಕರ ಭವಿಷ್ಯದ ಕುರಿತ ಮಹತ್ವದ ಸಮಸ್ಯೆಗಳತ್ತ ಪ್ರಧಾನಿಯವರು ಗಮನ ಹರಿಸುವ ಅಗತ್ಯವಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಹೇಳಿದ್ದಾರೆ.
ಪ್ರಧಾನಮಂತ್ರಿ ದೇಶದ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ, ಸಮಾಲೋಚನೆ ಮತ್ತು ಹೊಸ ಯೋಜನೆಗಳ ರೂಪಿಕರಣಕ್ಕಾಗಿ ರಾಜ್ಯಗಳಿಗೆ ಭೇಟಿ ನೀಡಬೇಕಿರುವಾಗ, ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡುವುದು ರಾಷ್ಟ್ರದ ಪ್ರಗತಿಗೆ ಪೂರಕವಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಉಡುಪಿಯಲ್ಲಿ ಮೋದಿ ಅವರ ಕಾರ್ಯಕ್ರಮ ವೀಕ್ಷಣೆಗೆ ಸಾಕಷ್ಟು ಮಾಧ್ಯಮ ವ್ಯವಸ್ಥೆಗಳಿದ್ದರೂ, ಅವರ ಆಗಮನದ ಹಿನ್ನೆಲೆಯಲ್ಲಿ ಶಾಲಾ–ಕಾಲೇಜುಗಳಿಗೆ ರಜೆ ನೀಡಲು ಜನಪ್ರತಿನಿಧಿಗಳು ಜಿಲ್ಲಾಧಿಕಾರಿಗೆ ಪತ್ರ ಬರೆದಿರುವುದು ಪ್ರಧಾನಮಂತ್ರಿಗೇ ಮುಜುಗರ ಉಂಟುಮಾಡುವ ವಿಚಾರವೆಂದು ಹೇಳಿದರು.
ಕರಾವಳಿ ಪ್ರದೇಶದಲ್ಲಿ ಸಾಂಪ್ರದಾಯಿಕ ಮೀನುಗಾರರು ಎದುರಿಸುತ್ತಿರುವ ಸಂಕಷ್ಟಗಳನ್ನು ಉಲ್ಲೇಖಿಸಿದ ಅವರು, ಅಭಿವೃದ್ಧಿಯ ಹೆಸರಿನಲ್ಲಿ ಮೀನುಗಾರರನ್ನು ಒಕ್ಕಲೆಬ್ಬಿಸುವ ಕ್ರಮಗಳು ಚಿಂತಾಜನಕ ಎಂದು ಹೇಳಿದರು. ಉತ್ತರ ಕನ್ನಡದ ಕಾಸರಕೋಡು ಪ್ರದೇಶದಲ್ಲಿ ಕಾರ್ಪೊರೇಟ್ ಹಿತಾಸಕ್ತಿಗಾಗಿ ಮೀನುಗಾರರನ್ನು ಸ್ಥಳಾಂತರಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ. ಕರಾವಳಿಯಲ್ಲಿ ಕಾರ್ಪೊರೇಟ್ ಮೀನುಗಾರಿಕೆ ಹೆಚ್ಚುತ್ತಿರುವುದು ಮತ್ತು ರೆಸಾರ್ಟ್ಗಳ ವಿಸ್ತರಣೆ ಸಾಂಪ್ರದಾಯಿಕ ಮೀನುಗಾರಿಕೆಗೆ ಅಡ್ಡಿಯಾಗಿದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರ ತಕ್ಷಣ ಗಮನಹರಿಸಬೇಕು ಎಂದು ಹೇಳಿದ್ದಾರೆ.
ಕರಾವಳಿಯ ಯುವಕರು ನಿರುದ್ಯೋಗದ ಸಮಸ್ಯೆಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ಕೇಂದ್ರ ಸರ್ಕಾರದ ಯೋಜನೆಗಳನ್ನು ಯುವಕರಿಗೆ ಪರಿಚಯಿಸುವ ಬದಲು ಅವರನ್ನು ಮತೀಯವಾಗಿ ದಾರಿ ತಪ್ಪಿಸಲಾಗುತ್ತಿದೆ ಎಂದು ಅವರು ಟೀಕಿಸಿದರು. ಯುವಕರಿಗೆ ಉದ್ಯೋಗಾವಕಾಶ ಮತ್ತು ಮಾರ್ಗದರ್ಶನ ನೀಡುವುದು ಕಾಲದ ಅವಶ್ಯಕತೆ. ಪ್ರಧಾನಮಂತ್ರಿಯವರು ಮಠ–ಮಂದಿರಗಳಲ್ಲಿ ಭಕ್ತಿಯ ಪ್ರದರ್ಶನ ಮಾಡುವ ಬದಲು, ಯುವಕರ ಭವಿಷ್ಯಕ್ಕೆ ಪೂರಕವಾದ ಯೋಜನೆಗಳ ಬಗ್ಗೆ ಇಲ್ಲಿ ಮಾತನಾಡುವುದು ಅತ್ಯಂತ ಅಗತ್ಯ ಎಂದು ಕೋಟ ನಾಗೇಂದ್ರ ಪುತ್ರನ್ ತಿಳಿಸಿದ್ದಾರೆ.





