ರಾಜ್ಯದಲ್ಲಿನ ದುರಾಡಳಿತ, ಭ್ರಷ್ಟಾಚಾರ, ಅನ್ಯಾಯ ಹಾಗೂ ದೌರ್ಜನ್ಯಗಳ ವಿರುದ್ಧ ನಿರಂತರ ಹೋರಾಟ ನಡೆಸುತ್ತಿರುವ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್ಎಸ್) ಪಕ್ಷವು ಜನರ ವಿಶ್ವಾಸವನ್ನು ಗಳಿಸುತ್ತಿದ್ದು, ಪಕ್ಷವನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ರಾಜ್ಯದಾದ್ಯಂತ “ಎದ್ದೇಳು ಕನ್ನಡಿಗ – ಸಮೃದ್ಧ ಕರ್ನಾಟಕ ಕಟ್ಟಲು ಕೆಆರ್ಎಸ್ ಪಕ್ಷ ಸೇರು ಬಾ, ಶಕ್ತಿ ಚೈತನ್ಯ ಪಡೆಯಲು” ಎಂಬ ಶೀರ್ಷಿಕೆಯಲ್ಲಿ ಸದಸ್ಯತ್ವ ಅಭಿಯಾನವನ್ನು ಪ್ರಾರಂಭಿಸಿದೆ. ಈ ಅಭಿಯಾನಕ್ಕೆ ಹೆಸರಾಂತ ಕನ್ನಡ ಹೋರಾಟಗಾರ ಸಾ. ರಾ. ಗೋವಿಂದ್ ಅವರು ಕಳೆದ ಅಕ್ಟೋಬರ್ 6ರಂದು ಬೆಂಗಳೂರಿನಲ್ಲಿ ಚಾಲನೆ ನೀಡಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಇದೇ ಅಭಿಯಾನವನ್ನು ಅಕ್ಟೋಬರ್ 16ರಂದು ಕೈಗೊಳ್ಳಲಾಗುವುದು ಎಂದು ಕೆಆರ್ಎಸ್ ಪಕ್ಷದ ಉಡುಪಿ ಜಿಲ್ಲಾಧ್ಯಕ್ಷ ರಾಜೇಶ್ ಕೆ.ವಿ. ಸಾಸ್ತಾನ ತಿಳಿದ್ದಾರೆ.
ಇಂದು ಉಡುಪಿಯ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿಯಾನದ ಅಂಗವಾಗಿ ಉಡುಪಿ ಜಿಲ್ಲೆಯ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜನರನ್ನು ಪಕ್ಷದ ಸದಸ್ಯರನ್ನಾಗಿ ಮಾಡಲು ಕಾರ್ಯಕ್ರಮ ನಡೆಯಲಿದೆ, ಎಂದು ತಿಳಿಸಿದ್ದಾರೆ.
ಕೆಆರ್ಎಸ್ ಪಕ್ಷವು ಸಾಮಾನ್ಯ ಜನರ ಹಿತಾಸಕ್ತಿಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದು, ಪ್ರತಿದಿನ ನೂರಾರು ಜನರು ಪಕ್ಷ ಸೇರುತ್ತಿದ್ದಾರೆ ಹಾಗೂ ದೇಣಿಗೆಯ ಮೂಲಕ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಜನರ ಪರ ಹೋರಾಡುವ ನಮ್ಮ ಧೋರಣೆಯನ್ನು ವ್ಯವಸ್ಥೆ ಸಹಿಸಲಾಗದೆ, ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಹೆದರಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ ನಾವು ಹಿಂಜರಿಯದೆ ಹೋರಾಟ ಮುಂದುವರಿಸುತ್ತೇವೆ ಎಂದರು.
ರಾಜ್ಯದಲ್ಲಿ ಕೋಟ್ಯಾಂತರ ಜನರು ದುರಾಡಳಿತ ಮತ್ತು ಭ್ರಷ್ಟಾಚಾರದಿಂದ ನರಳುತ್ತಿರುವುದನ್ನು ಉಲ್ಲೇಖಿಸಿದ ಅವರು, ಈ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಕುಸಿದಿರುವ ವ್ಯವಸ್ಥೆಯನ್ನು ಪುನರ್ನಿರ್ಮಿಸಲು ಜನರ ಸಹಭಾಗಿತ್ವ ಅತ್ಯಗತ್ಯ. ಆದ್ದರಿಂದ ನಾಡಿನ ಬಗೆಗೆ ಕಾಳಜಿಯುಳ್ಳವರು, ಕನ್ನಡದ ಬಗ್ಗೆ ಬದ್ಧತೆಯುಳ್ಳವರು ಮುಂದೆ ಬಂದು ಕೆಆರ್ಎಸ್ ಪಕ್ಷದ ಸದಸ್ಯತ್ವ ಪಡೆಯಬೇಕು, ಎಂದು ಹೇಳಿದರು. ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ 300 ಸದಸ್ಯರಿದ್ದು ಮುಂದಿನ ದಿನಗಳಲ್ಲಿ ಈ ಸದಸ್ಯತ್ವ ಅಭಿಯಾನವನ್ನು ಸಕ್ರಿಯವಾಗಿ ಹಮ್ಮಿಕೊಂಡು 5000 ಸದಸ್ಯರನ್ನು ಮಾಡುವ ಗುರಿಯನ್ನು ಹೊಂದಿದ್ದೇವೆ,ಎಂದು ಅವರು ತಿಳಿಸಿದರು.





