ಉಡುಪಿ ಜಿಲ್ಲೆಯ ಕುಂದಾಪುರ ವಿಧಾನಸಭಾ ಕ್ಷೇತ್ರದ ಕೋಟ, ಗೋಳಿಯಂಗಡಿ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗಗಳಲ್ಲಿ ವರ್ಷಗಳಿಂದ ತೀವ್ರವಾಗಿದ್ದ ಸರ್ಕಾರಿ ಬಸ್ ಸೇವೆಯ ಕೊರತೆಗೆ ಕೊನೆಗೂ ಪರಿಹಾರ ದೊರೆತಿದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಉದ್ದೇಶದೊಂದಿಗೆ, ಈ ಭಾಗಕ್ಕೆ KSRTC ಸರ್ಕಾರಿ ಬಸ್ ಸೇವೆ ಮಂಜೂರು ಮಾಡಲಾಗಿದೆ.
ಈ ಮಹತ್ವದ ನಿರ್ಧಾರಕ್ಕೆ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ ವಡ್ಡರ್ಸೆ ಅವರ ನಿರಂತರ ಮನವಿ ಮತ್ತು ಪ್ರಯತ್ನಗಳು ಕಾರಣವಾಗಿದ್ದು, ಅವರ ಮನವಿಗೆ ಸ್ಪಂದಿಸಿದ ಸಾರಿಗೆ ಸಚಿವ ಶ್ರೀ ರಾಮಲಿಂಗ ರೆಡ್ಡಿ ಅವರು ಬಸ್ ಸೇವೆಗೆ ಅನುಮೋದನೆ ನೀಡಿದ್ದಾರೆ.

ಗ್ರಾಮೀಣ ಜನರ ಬಹುಕಾಲದ ಬೇಡಿಕೆ : ಶಿರಿಯಾರ, ಗೋಳಿಯಂಗಡಿ, ಮಂದಾರ್ತಿ, ಸೈಬರ್ಕಟ್ಟೆ, ಬನ್ನಡಿ, ಅಚಲಾಡಿ, ಕೋಟ, ಬಾಗಗಳಂತಹ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಬಸ್ಗಳ ಕೊರತೆಯಿಂದ ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ನಾಗರಿಕರು ವರ್ಷಗಳಿಂದ ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದರು. ಖಾಸಗಿ ಬಸ್ಗಳ ಅಸಮರ್ಪಕ ಸಮಯ, ಹೆಚ್ಚಾದ ಟಿಕೆಟ್ ದರ ಹಾಗೂ ಕೆಲವೊಮ್ಮೆ ಸೇವೆಯೇ ಇಲ್ಲದ ಸ್ಥಿತಿ ಜನರ ದೈನಂದಿನ ಜೀವನಕ್ಕೆ ಅಡ್ಡಿಯಾಗಿತ್ತು.
ವಿಶೇಷವಾಗಿ ಕೋಟ ವಿವೇಕ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸಾವಿರಾರು ವಿದ್ಯಾರ್ಥಿಗಳು ಸಂಚಾರ ಸೌಲಭ್ಯಗಳ ಕೊರತೆಯಿಂದ ಶಿಕ್ಷಣದ ದಾರಿಗೆ ತೊಂದರೆ ಅನುಭವಿಸುತ್ತಿದ್ದರು. ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ಬಸ್ ಸಿಗದೆ ವಿದ್ಯಾರ್ಥಿಗಳು ದೀರ್ಘ ಸಮಯ ರಸ್ತೆ ಬದಿಯಲ್ಲಿ ಕಾಯಬೇಕಾಗುತ್ತಿದ್ದ ಘಟನೆಗಳು ಸಾಮಾನ್ಯವಾಗಿದ್ದವು.

ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಭದ್ರತೆ : ಶಕ್ತಿ ಯೋಜನೆಯಡಿ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ದೊರಕುತ್ತಿರುವುದರಿಂದ, ಗ್ರಾಮೀಣ ಭಾಗದ ಮಹಿಳೆಯರಿಗೆ ಇದು ದೊಡ್ಡ ಆಶಾಕಿರಣವಾಗಿದೆ. ಉಚಿತ ಪ್ರಯಾಣದ ಜೊತೆಗೆ ಸರ್ಕಾರಿ ಬಸ್ಗಳ ನಿಯಮಿತ ಸೇವೆ ಮಹಿಳೆಯರ ಭದ್ರತಾ ದೃಷ್ಟಿಕೋನದಿಂದಲೂ ಪರಿಣಾಮಕಾರಿ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಖಾಸಗಿ ಬಸ್ ಮಾಲಕರ ಒತ್ತಡಗಳ ನಡುವೆಯೂ ಜನಹಿತದ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿರುವುದು ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯ ಪಟ್ಟಿದ್ದಾರೆ.

ಕೃತಜ್ಞತೆ ವ್ಯಕ್ತಪಡಿಸಿದ ಅಜಿತ್ ಶೆಟ್ಟಿ : ಈ ಕುರಿತು ಪ್ರತಿಕ್ರಿಯಿಸಿದ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಜಿತ್ ಶೆಟ್ಟಿ, ಕೋಟ ವಿವೇಕ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುವ ಸಾವಿರಾರು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬಹುಕಾಲದ ಬೇಡಿಕೆಗೆ ಸ್ಪಂದಿಸಿರುವ ಸಾರಿಗೆ ಸಚಿವ ಶ್ರೀ ರಾಮಲಿಂಗ ರೆಡ್ಡಿ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ಗ್ರಾಮೀಣ ಪ್ರದೇಶಗಳ ಮಹಿಳೆಯರು, ವಿದ್ಯಾರ್ಥಿನಿಯರು ಹಾಗೂ ಸಾಮಾನ್ಯ ನಾಗರಿಕರು ಉಚಿತವಾಗಿ ಪ್ರಯಾಣಿಸಲು KSRTC ಬಸ್ ಸೇವೆ ಅನುಮೋದಿಸಿರುವುದು ಅತ್ಯಂತ ಅಭಿನಂದನೀಯ ಎಂದರು. ಈ ಬಸ್ ಸೇವೆ ಒದಗಿಸುವಲ್ಲಿ ಸಹಕಾರ ನೀಡಿದ ಮಾನ್ಯ ಮಂಜುನಾಥ ಭಂಡಾರಿ ಅವರಿಗೂ ಅವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ..





