ಇಪ್ಪತ್ತೈದು ಕೋಟಿ ಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸಿ ಹೊಸ ಕಾರ್ಮಿಕ ಸಂಹಿತೆ ವಿರೋಧಿಸಿದರೂ ಕೇಂದ್ರ ಸರಕಾರವು ತನ್ನ ಪಕ್ಷದ ಬೆಳೆವಣಿಗೆಗೆ ದೇಶದ ಬಂಡವಾಳಗಾರರಿಂದ ಲಾಭ ಪಡೆಯಲು ಬಂಡವಾಳಗಾರರ ಪರವಾದ ನೂತನ ಕಾರ್ಮಿಕ ಸಂಹಿತೆ ಅಧಿಸೂಚನೆ ಹೊರಡಿಸಿದೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದರು.
ಅವರು ಸಾಲಿಗ್ರಾಮದಲ್ಲಿ ನಡೆದ ಕಟ್ಟಡ ಕಾರ್ಮಿಕರ ಸಭೆಯಲ್ಲಿ ನೂತನ ಕಾರ್ಮಿಕ ಸಂಹಿತೆ ದಹಿಸಿ ಮಾತನಾಡಿದರು. ಹೊಸ ಕಾರ್ಮಿಕ ಸಂಹಿತೆ ಕಾರ್ಮಿಕರು ಅನ್ಯಾಯಕ್ಕೊಳಗಾದಾಗ ನಡೆಸುವ ಮುಷ್ಕರ ದೇಶದ್ರೋಹ ಆಗುತ್ತದೆ.
ಮಾಲಿಕರು ಕಾರ್ಮಿಕರಿಗೆ ಸೌಲಭ್ಯಗಳನ್ನು ಕೊಡಲು ನಿರಾಕರಿಸಿದಾಗ ಲೇಬರ್ ಇನ್ಸ್ಪೆಕ್ಟರ್ ಮಾಡುವ ತಪಾಸಣೆ ನಿರ್ಬಂಧಿಸುತ್ತದೆ ಅಥವಾ ಸ್ಪೇಷಲಿಟೇಟರ್ ಆಗುತ್ತದೆ.

ಕಾರ್ಮಿಕ ಇಲಾಖೆ ಕಾರ್ಮಿಕರ ರಕ್ಷಣೆಗೆ ಬದಲಾಗಿ ಖಾಸಗಿ ವಲಯದಲ್ಲಿ ಉದ್ಯೋಗ ಒದಗಿಸುವ ಮಾಲಿಕರ ಏಜೆಂಟ್ ಆಗಿ ಕೆಲಸ ಮಾಡಲು ಸೀಮಿತಗೊಳ್ಳುವ ಅಪಾಯಕಾರಿ ಅಂಶಗಳು ಶ್ರಮಶಕ್ತಿ ನೀತಿ -2025 ರಲ್ಲಿ ಅಡಕವಾಗಿದೆ ಆದರೆ ಕೇಂದ್ರ ಸರ್ಕಾರ ಇವುಗಳನ್ನು ಮರೆಮಾಚಿ ಜನರನ್ನು ಮರಳುಗೊಳಿಸುವ ಪ್ರಕಟಣೆ ಮಾಡುತ್ತಿದೆ.
ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವ ಹೊಸ ಸಂಹಿತೆ ರಾಜ್ಯ ಸರ್ಕಾರ ಜಾರಿ ಮಾಡಬಾರದು ಎಂದು ಅವರು ಹೇಳಿದರು. ಹೊಸ ಸಂಹಿತೆಯು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಮೇಲೆ ದುಷ್ಪರಿಣಾಮ ಬೀರುತ್ತದೆ ಮಂಡಳಿ ರದ್ದಾಗುತ್ತದೆ ಈ ಸಂಹಿತೆ ವಾಪಾಸ್ಸು ಪಡೆಯಬೇಕು ಎಂದು ಅವರು ಆಗ್ರಹಿಸಿದರು.

ಪ್ರತಿಭಟನೆಯು ಉಡುಪಿ ತಾಲೂಕು ಸಾಲಿಗ್ರಾಮ, ಕುಂದಾಪುರ ತಾಲೂಕು ಹಾಲಾಡಿ, ಗಂಗೊಳ್ಳಿ, ಆಲೂರು ಗ್ರಾಮಗಳಲ್ಲಿ ಕಾರ್ಮಿಕರು ಕೇಂದ್ರ ಸರ್ಕಾರದ ಜಾರಿ ಮಾಡಿದ ಪ್ರತಿಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ವಿ, ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ಸಿಐಟಿಯು) ಗೌರವಾಧ್ಯಕ್ಷರಾದ ಚಿಕ್ಕ ಮೊಗವೀರ ಗಂಗೊಳ್ಳಿ, ಶಶಿಕಾಂತ್, ರಘುರಾಮ ನಾಯ್ಕ್,ಅನಂತ ಕುಲಾಲ್, ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ಮುಖಂಡರಾದ ರಾಮ ಕಾರ್ಕಡ, ಸಾಲಿಗ್ರಾಮ ಕ್ರಷ್ಣ, ನಾಗರಾಜ್, ಶಾರದಾ ಇದ್ದರು. ಉಡುಪಿ ಜಿಲ್ಲೆಯಲ್ಲಿ 5 ಪ್ರದೇಶಗಳಲ್ಲಿ 217 ಮಂದಿ ಭಾಗವಹಿಸಿದ್ದರು.






