ಉಡುಪಿ ಜಿಲ್ಲೆಯ ಮಲ್ಪೆ ಮಹಾಲಕ್ಷ್ಮಿ ಕೋ–ಆಪರೇಟಿವ್ ಬ್ಯಾಂಕ್ನ ಸಂತ್ರಸ್ತರು, ತಾವು ಪಡೆಯದೇ ಇದ್ದ ಸಾಲವನ್ನು ತಮ್ಮ ಹೆಸರಲ್ಲಿ ದಾಖಲಿಸಿ ಮೋಸ ಹಾಗೂ ಅನ್ಯಾಯ ಎಸಗಲಾಗಿದೆ ಎಂದು ಆರೋಪಿಸಿ ಉಡುಪಿ ಜಿಲ್ಲಾಧಿಕಾರಿ ಕಛೇರಿ ಎದುರು ಅನಿರ್ದಿಷ್ಟ ಮುಷ್ಕರ ನಡೆಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದರೂ ಇದುವರೆಗೂ ಸ್ಪಷ್ಟ ನ್ಯಾಯ ಸಿಕ್ಕಿಲ್ಲ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಲ್ಪೆ ಮಹಾಲಕ್ಷ್ಮಿ ಕೋ–ಆಪರೇಟಿವ್ ಬ್ಯಾಂಕ್ನಲ್ಲಿ ನಡೆದಿರುವ ಭಾರೀ ಹಗರಣದ ಕುರಿತು ಕರ್ನಾಟಕ ಸರ್ಕಾರ 64ನೇ ವಿಧಿಯ ತನಿಖೆಗೆ ಆದೇಶ ನೀಡಿ ಒಂದು ವರ್ಷ ಕಳೆದಿದ್ದರೂ, ಸೂಕ್ತ ಹಾಗೂ ಪಾರದರ್ಶಕ ತನಿಖೆ ನಡೆಯದೇ ವಿಳಂಬವಾಗುತ್ತಿದೆ ಎಂಬುದು ಸಂತ್ರಸ್ತರ ಆರೋಪ. ಈ ಪ್ರಕರಣದ ತನಿಖೆ ಜವಾಬ್ದಾರಿ ಹೊಂದಿರುವ ಉಡುಪಿ ಸಹಕಾರಿ ಸಂಘಗಳ ಉಪ ನಿಬಂಧಕರಾದ ಶ್ರೀಮತಿ ಲಾವಣ್ಯ ಅವರು ತನಿಖೆಯನ್ನು ಉದ್ದೇಶಪೂರ್ವಕವಾಗಿ ವಿಳಂಬಗೊಳಿಸಿ ಸಂತ್ರಸ್ತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಅವರು ದೂರಿದ್ದಾರೆ.
ಇದಲ್ಲದೆ, 64ನೇ ವಿಧಿಯ ತನಿಖೆಯನ್ನು ಉತ್ತರ ಕರ್ನಾಟಕದ ಶಿರಸಿಯಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಅಮಾನತುಗೊಂಡಿರುವ ಮಂಜುನಾಥ್ ಸಿಂಗ್ ಅವರೊಂದಿಗೆ ಸೇರಿ ನಡೆಸಲಾಗಿದೆ. ಇದು ಸರಕಾರಿ ಕಾನೂನು ಹಾಗೂ ಪ್ರಕ್ರಿಯೆಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಸರಕಾರ 60 ದಿನಗಳೊಳಗೆ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಆದೇಶಿಸಿದ್ದರೂ, ಸುಮಾರು ಒಂದು ವರ್ಷ ಒಂದು ತಿಂಗಳ ಬಳಿಕ ಮಾತ್ರ ವರದಿ ಸಲ್ಲಿಸಿರುವುದು ನ್ಯಾಯ ವ್ಯವಸ್ಥೆಯ ಮೇಲಿನ ನಂಬಿಕೆಗೆ ಧಕ್ಕೆ ತಂದಿದೆ ಎಂದು ಹೇಳಿದ್ದಾರೆ.

ತನಿಖೆ ವಿಳಂಬದಿಂದಾಗಿ, ಬ್ಯಾಂಕ್ನಿಂದ ಪಡೆಯದೇ ಇದ್ದ ಸಾಲದ ಪ್ರಕರಣಗಳಲ್ಲಿ ಸಂತ್ರಸ್ತರನ್ನು ಕೋರ್ಟ್ ಕಾನೂನು ಕುಣಿಕೆಗೆ ಸಿಲುಕಿಸಿ ಜಾಮೀನು ಪಡೆಯುವ ಸ್ಥಿತಿಗೆ ತಳ್ಳಲಾಗಿದೆ. ಇದರಿಂದ ಅನೇಕ ಕುಟುಂಬಗಳು ಆರ್ಥಿಕ ಹಾಗೂ ಮಾನಸಿಕವಾಗಿ ಅತಂತ್ರ ಸ್ಥಿತಿಗೆ ತಲುಪಿವೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಈ ಬಗ್ಗೆ ಈ ದಿನ.ಕಾಮ್ ಜೊತೆ ಮಾತನಾಡಿದ ಸಾಮಾಜಿಕ ಹೋರಾಟಗಾರ ಕೋಟ ನಾಗೇಂದ್ರ ಪುತ್ರನ್, ಮಲ್ಪೆ ಮಹಾಲಕ್ಷ್ಮಿ ಕೋ–ಆಪರೇಟಿವ್ ಬ್ಯಾಂಕ್ನಲ್ಲಿ ನಡೆದಿರುವ ಹಗರಣ ಹಾಗೂ ಅನ್ಯಾಯದ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಕರ್ನಾಟಕ ಸರ್ಕಾರ 64ನೇ ವಿಧಿಯಡಿ ತನಿಖೆಗೆ ಆದೇಶಿಸಿ ಒಂದು ವರ್ಷ ಕಳೆದಿದೆ. ಆದರೆ ಇದುವರೆಗೂ ಸಮರ್ಪಕ ತನಿಖೆ ನಡೆಯದೆ ಸಂತ್ರಸ್ತರಿಗೆ ಅನ್ಯಾಯ ಮುಂದುವರಿದಿದೆ ಎಂದು ಆರೋಪಿಸಿದರು. ಉಡುಪಿ ಸಹಕಾರಿ ಸಂಘಗಳ ಉಪನಿಬಂಧಕಿ ಲಾವಣ್ಯ ಅವರು ತನಿಖೆಯನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಪ್ರಕರಣದಲ್ಲಿ ಅಮಾನತುಗೊಂಡಿರುವ ಮಂಜುನಾಥ್ ಸಿಂಗ್ ಅವರೊಂದಿಗೆ ಸೇರಿ ವಿಚಾರಣೆ ನಡೆಸಿರುವುದು ಸಂಶಯಕ್ಕೆ ಕಾರಣವಾಗಿದೆ ಎಂದರು. ಸರ್ಕಾರವು 60 ದಿನಗಳೊಳಗೆ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಆದೇಶಿಸಿದ್ದರೂ, ಇದುವರೆಗೂ ತನಿಖೆ ಮುಕ್ತಾಯಗೊಂಡಿಲ್ಲ ಎಂದು ಹೇಳಿದರು.

ತನಿಖೆಯನ್ನು ವಿಳಂಬಗೊಳಿಸುವ ಮೂಲಕ ಬ್ಯಾಂಕ್ನಿಂದ ಸಾಲ ಪಡೆಯದೇ ಇದ್ದ ಸಂತ್ರಸ್ತರನ್ನು ನ್ಯಾಯಾಲಯದ ಪ್ರಕ್ರಿಯೆಗಳಲ್ಲಿ ಸಿಲುಕಿಸಿ, ಜಾಮೀನು ಪಡೆಯುವಂತಹ ಪರಿಸ್ಥಿತಿಗೆ ತಳ್ಳಲಾಗಿದೆ. ಇದರಿಂದ ಸಂತ್ರಸ್ತರು ತೀವ್ರ ಮಾನಸಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಅವರು ಆರೋಪಿಸಿದರು. 64ನೇ ವಿಧಿಯಡಿ ನಡೆಸಬೇಕಾದ ತನಿಖೆಯನ್ನು 60 ದಿನಗಳಲ್ಲಿ ಪೂರ್ಣಗೊಳಿಸದೆ ಒಂದು ವರ್ಷ ಒಂದು ತಿಂಗಳ ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಸಾಲಕ್ಕೆ ಸಹಿ ಹಾಕದೇ ಇರುವ ಸುಮಾರು 30 ಮಂದಿಯ ಸಹಿಗಳನ್ನು ಇನ್ನೂ ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸದೇ ವಿಳಂಬ ಮಾಡಲಾಗುತ್ತಿದೆ ಎಂದು ದೂರಿದರು.
ಈದಿನ.ಕಾಮ್ ಜೊತೆ ಮಾತನಾಡಿದ ಸಂತ್ರಸ್ತೆ ಗಿರಿಜಾ, ನಮಗೆ 20 ಸಾವಿರ ರೂಪಾಯಿ ಸಾಲ ನೀಡಲಾಗಿತ್ತು. ಅದನ್ನು ನಾವು ಸಂಪೂರ್ಣವಾಗಿ ಕಟ್ಟಿದ್ದೇವೆ. ಆದರೆ ಒಂದು ವರ್ಷದ ಬಳಿಕ ಬ್ಯಾಂಕ್ ಸಿಬ್ಬಂದಿಗಳು ನಮ್ಮ ಮನೆಗೆ ಬಂದು ಗಲಾಟೆ ಆರಂಭಿಸಿದರು. ಹಣ ಕೊಡದಿದ್ದರೆ ಜಾಗವನ್ನು ವಶಪಡಿಸಿಕೊಳ್ಳುವುದಾಗಿ ಬೆದರಿಕೆ ಹಾಕಿ ಮಾನಸಿಕ ಹಿಂಸೆ ನೀಡಿದರು. ಈ ಬಗ್ಗೆ ಬ್ಯಾಂಕ್ಗೆ ತೆರಳಿ ವಿಚಾರಿಸಿದಾಗಲೂ ನಮಗೆ ಅವಾಚ್ಯ ಶಬ್ದಗಳಿಂದ ಬೈದು ಕಳುಹಿಸಿದರು ಎಂದು ಆರೋಪಿಸಿದರು.
ಈದಿನ.ಕಾಮ್ ಜೊತೆ ಮಾತನಾಡಿದ ಸಂತ್ರಸ್ತ ಶ್ರೀಕಾಂತ್, ನಾವು 2023ರಲ್ಲಿ ಬ್ಯಾಂಕ್ನಲ್ಲಿ ಎರಡು ಲಕ್ಷ ರೂಪಾಯಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದೆವು. ಆಗಿನ ಬ್ಯಾಂಕ್ ಮ್ಯಾನೇಜರ್ ‘ನೀವು ಸಹಿ ಮಾಡಿ ಹೋಗಿ, ನಂತರ ಕರೆ ಮಾಡುತ್ತೇವೆ’ ಎಂದು ತಿಳಿಸಿದ್ದರು. ಸುಮಾರು 15 ದಿನಗಳ ಬಳಿಕ ಕರೆ ಮಾಡಿ ಬ್ಯಾಂಕಿಗೆ ಬರಲು ಹೇಳಿ, ಬ್ಯಾಂಕ್ ಕಟ್ಟಡದ ಕೆಳಭಾಗದಲ್ಲಿ 82 ಸಾವಿರ ರೂಪಾಯಿಯನ್ನು ನಗದು ರೂಪದಲ್ಲಿ ನೀಡಿದರು. ನಮ್ಮಿಂದ ಸಹಿ ಪಡೆದುಕೊಂಡರೂ, ಎರಡು ಲಕ್ಷ ರೂಪಾಯಿ ಸಾಲವನ್ನು ನಮಗೆ ನೀಡಲೇ ಇಲ್ಲ.

ಸುಮಾರು ಒಂದೂವರೆ ವರ್ಷದ ನಂತರ ಬ್ಯಾಂಕ್ನಿಂದ ಎರಡು ಲಕ್ಷ ರೂಪಾಯಿ ಸಾಲ ಪಡೆದಿದ್ದೀರಿ ಎಂದು ಹೇಳಿ ನೋಟಿಸ್ ಬರತೊಡಗಿತು. ಈ ಕುರಿತು ಬ್ಯಾಂಕ್ಗೆ ತೆರಳಿ ವಿಚಾರಿಸಿದಾಗ, ‘ನೀವು ಎರಡು ಲಕ್ಷ ಸಾಲ ಪಡೆದಿರುವುದಕ್ಕೆ ಸಹಿ ಇದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಮಗೆ ಸಾಲ ನೀಡಿದ ಬ್ಯಾಂಕ್ ಮ್ಯಾನೇಜರ್ ನಂತರ ಯಾವುದೋ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಯಿತು. ಈಗ ಬ್ಯಾಂಕ್ನಿಂದ ನಮಗೆ ತೀವ್ರ ಕಿರುಕುಳ ನೀಡುತ್ತಿದ್ದಾರೆ. ಮನೆಗೆ, ಕೆಲಸ ಮಾಡುವ ಸ್ಥಳಕ್ಕೂ ಬಂದು ಹಣ ಕಟ್ಟುವಂತೆ ಒತ್ತಡ ಹೇರುತ್ತಿದ್ದಾರೆ.
ನಾವು ಪಡೆದಿದ್ದು ಕೇವಲ 82 ಸಾವಿರ ರೂಪಾಯಿ ಮಾತ್ರ. ಈಗಾಗಲೇ ಬಡ್ಡಿ ಸೇರಿ ಒಂದು ಲಕ್ಷ 10 ಸಾವಿರ ರೂಪಾಯಿ ಕಟ್ಟಿದ್ದೇವೆ. ಇನ್ನಷ್ಟು ಹಣ ಕಟ್ಟಲು ಸಾಧ್ಯವಿಲ್ಲ. ಈ ಬಗ್ಗೆ ಮನವಿ, ಹೋರಾಟ ಎಲ್ಲವನ್ನೂ ಮಾಡಿದರೂ ಇಲ್ಲಿಯವರೆಗೂ ನಮಗೆ ನ್ಯಾಯ ಸಿಕ್ಕಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಬ್ಯಾಂಕ್ ಹಾಗೂ ಅಧಿಕಾರಿಗಳ ವಿರುದ್ಧ ಸಂತ್ರಸ್ತರ ಗಂಭೀರ ಆರೋಪಗಳು
ಕೊರೋನಾ ಅವಧಿಯಲ್ಲಿ ನಡೆದ ಸಾಲ ವಿತರಣಾ ಪ್ರಕ್ರಿಯೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಸಂತ್ರಸ್ತರು ಬ್ಯಾಂಕ್ ಹಾಗೂ ಸಂಬಂಧಿತ ಅಧಿಕಾರಿಗಳ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ಅವರ ಪ್ರಮುಖ ಆರೋಪಗಳು
ಕೊರೋನಾ ಸಂಕಷ್ಟದ ಅವಧಿಯಲ್ಲಿ ಮನೆಗೆ ಬಂದು ತುರ್ತು ಸಾಲವಾಗಿ ಕೇವಲ 20 ಸಾವಿರ ರೂಪಾಯಿ ನೀಡುವುದಾಗಿ ಹೇಳಿ, ಪ್ರತಿ ವ್ಯಕ್ತಿಯ ಹೆಸರಿನಲ್ಲಿ 2 ಲಕ್ಷ ರೂಪಾಯಿ ಸಾಲ ದಾಖಲು ಮಾಡಲಾಗಿದೆ.
ಕೋಟಿ ಗಟ್ಟಲೆ ಹಣವನ್ನು ಸಾಲವಾಗಿ ವಿತರಿಸುವ ವೇಳೆ ಬ್ಯಾಂಕ್ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಗೆ ಯಾವುದೇ ಮಾಹಿತಿ ನೀಡದೇ ಪ್ರಕ್ರಿಯೆ ನಡೆಸಲಾಗಿದೆ.
ಬ್ಯಾಂಕ್ ಮ್ಯಾನೇಜರ್, ಸಿಬ್ಬಂದಿ ಹಾಗೂ ಬೋಕರ್ಗಳ ಮೂಲಕ ಸಾರ್ವಜನಿಕರಿಗೆ ರಸ್ತೆ ಬದಿಯಲ್ಲೇ ಹಣ ವಿತರಿಸಲಾಗಿದೆ.
ಉಡುಪಿ ಜಿಲ್ಲೆಯ ಸಹಕಾರಿ ಸಂಘಗಳ ಉಪ ನಿಬಂಧಕರು ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಮಂಜುನಾಥ್ ಸಿಂಗ್ ಅವರೊಂದಿಗೆ ಸೇರಿ 64ನೇ ವಿಧಿಯ ತನಿಖೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
60 ದಿನಗಳಲ್ಲಿ ಪೂರ್ಣಗೊಳ್ಳಬೇಕಿದ್ದ ತನಿಖೆಯನ್ನು ಒಂದು ವರ್ಷ ಒಂದು ತಿಂಗಳ ಬಳಿಕ ಮಾತ್ರ ಸರ್ಕಾರಕ್ಕೆ ವರದಿ ರೂಪದಲ್ಲಿ ಸಲ್ಲಿಸಲಾಗಿದೆ.
ಸಾಲಕ್ಕೆ ಸಹಿ ಹಾಕದೇ ಇರುವ ಸುಮಾರು 30 ಮಂದಿಯ ಸಹಿಗಳನ್ನು ವಿಧಿ ವಿಜ್ಞಾನ (ಫಾರೆನ್ಸಿಕ್) ಪರೀಕ್ಷೆಗೆ ಕಳುಹಿಸದೇ ತನಿಖೆ ಅಪೂರ್ಣಗೊಳಿಸಲಾಗಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.
ಈ ಎಲ್ಲಾ ಅಕ್ರಮಗಳು ಹಾಗೂ ನ್ಯಾಯ ವಿಳಂಬವನ್ನು ಖಂಡಿಸಿ, ಮರು ತನಿಖೆ ನಡೆಸಬೇಕು, ತಪ್ಪಿತಸ್ಥ ಅಧಿಕಾರಿಗಳು ಹಾಗೂ ಬ್ಯಾಂಕ್ ಆಡಳಿತ ಮಂಡಳಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಸಂತ್ರಸ್ತರಿಗೆ ತಕ್ಷಣ ನ್ಯಾಯ ಒದಗಿಸಬೇಕು ಎಂಬ ಆಗ್ರಹಗಳೊಂದಿಗೆ ಸಂತ್ರಸ್ತರು ಅನಿರ್ದಿಷ್ಟ ಮುಷ್ಕರ ಹಮ್ಮಿಕೊಂಡಿದ್ದಾರೆ.

ಪ್ರತಿಭಟನಾ ಮುಷ್ಕರ ಸ್ಥಳಕ್ಕೆ ಆಗಮಿಸಿದ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಅವರಿಗೆ ಸಂತ್ರಸ್ತರು ಮನವಿ ಸಲ್ಲಿಸಿದರು. ಈ ಕುರಿತು ಜ.9ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ವಿಷಯವನ್ನು ಗಮನಕ್ಕೆ ತರಲಾಗುವುದಾಗಿ ಅವರು ಭರವಸೆ ನೀಡಿದರು. ಅಪರ ಜಿಲ್ಲಾಧಿಕಾರಿ ಆಬೀದ್ ಗದ್ಯಾಳ್ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರಿಂದ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಉಡುಪಿ ಸಹಕಾರಿ ಸಂಘಗಳ ಉಪ ನಿಬಂಧಕಿ ಲಾವಣ್ಯ ಅವರು ಉಪಸ್ಥಿತರಿದ್ದರು. ಉಡುಪಿ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಹಾಗೂ ಮಾಜಿ ಉಡುಪಿ ಶಾಸಕ ರಘುಪತಿ ಭಟ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಬೆಂಬಲ ಸೂಚಿಸಿದರು.

ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.




