ಉಡುಪಿ ಜಿಲ್ಲೆಯ ಮಲ್ಪೆಯ ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ಶಾಖೆಯಲ್ಲಿ ಕೋಟ್ಯಾಂತರ ರೂಪಾಯಿ ನಕಲಿ ಸಾಲ ಮಂಜೂರಾತಿ ನಡೆದಿರುವ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣವು ಹೊಸ ತಿರುವು ಪಡೆಯುತ್ತಿದೆ. ನಕಲಿ ದಾಖಲೆ ಸೃಷ್ಟಿಸಿ ಬೇನಾಮಿ ಹೆಸರಿನಲ್ಲಿ ಸಾಲಗಳನ್ನು ಪಡೆದು ದುರುಪಯೋಗ ಮಾಡಿದ ಗಂಭೀರ ಆರೋಪ ಜನರ ಮಧ್ಯೆ ಆತಂಕ ಸೃಷ್ಟಿಸಿದ್ದು, ಅನ್ಯಾಯಕ್ಕೆ ಒಳಗಾದ ಗ್ರಾಹಕರು ನ್ಯಾಯಕ್ಕಾಗಿ ಹೋರಾಟ ಮುಂದುವರಿಸಿದ್ದಾರೆ.
ಮಲ್ಪೆ ಶಾಖೆಯಲ್ಲಿ 2014ರ ಜುಲೈ 1ರಿಂದ 2023ರ ಮಾರ್ಚ್ 8ರವರೆಗೆ ಒಟ್ಟು 1413 ಮಂದಿ ಗ್ರಾಹಕರ ಹೆಸರು ಬಳಸಿಕೊಂಡು ತಲಾ 2 ಲಕ್ಷ ರೂ.ನಂತೆ ಒಟ್ಟು 28.86 ಕೋಟಿ ರೂ. ಸಾಲ ಮಂಜೂರು ಮಾಡಲಾಗಿದೆ ಎಂದು ದಾಖಲೆಗಳಲ್ಲಿ ತೋರಿಸಲಾಗಿತ್ತು. ಆದರೆ ಸಂಬಂಧಿಸಿದ ಗ್ರಾಹಕರಿಗೆ ಇದರಲ್ಲಿ ಯಾವುದೇ ಮಾಹಿತಿ ಇಲ್ಲದಿರುವುದು ಗಂಭೀರ ಅನುಮಾನಗಳಿಗೆ ಕಾರಣವಾಗಿತ್ತು. ನೊಂದ ಗ್ರಾಹಕರು ಮಲ್ಪೆ, ಉಡುಪಿ ನಗರ ಹಾಗೂ ಬ್ರಹ್ಮಾವರ ಪೊಲೀಸ್ ಠಾಣೆಗಳಿಗೆ ಹಲವು ಬಾರಿ ದೂರು ಸಲ್ಲಿಸಿದ್ದರಿಂದ ಪ್ರಕರಣ ದಾಖಲಾಗಿತ್ತು. ನಕಲಿ ಸಹಿ, ನಕಲಿ ದಾಖಲೆ ಸೃಷ್ಟಿ, ಬೇನಾಮಿ ಖಾತೆಗಳ ಬೇಜವಾಬ್ದಾರಿಯ ಬಳಕೆ ಮೊದಲಾದ ಗಂಭೀರ ಆರೋಪಗಳು ಬೆಳಕಿಗೆ ಬಂದಿತ್ತು.

ಈ ಗಂಭೀರ ಹಗರಣದ ಹಿನ್ನೆಲೆಯಲ್ಲಿ ಬ್ಯಾಂಕಿನ ಆಗಿನ ಆಡಳಿತ ಮಂಡಳಿಗೆ ಜವಾಬ್ದಾರಿಯನ್ನು ನಿಗದಿ ಮಾಡಿ ಅವರನ್ನು ಬರ್ಖಾಸ್ತುಗೊಳಿಸಬೇಕು, ಹಾಗೂ ಉನ್ನತ ಮಟ್ಟದ, ಸ್ವತಂತ್ರ ತನಿಖೆ ನಡೆಸಬೇಕು ಎಂದು ಆಗಿನ ಉಡುಪಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಅವರಿಗೆ ಗ್ರಾಹಕರು ಮನವಿ ಸಲ್ಲಿಸಿದ್ದರು. ಈ ಪ್ರಕರಣವು ಗಂಭೀರವಾಗಿರುವುದರಿಂದ ಈ ಸಂಬಂಧ ಶಾಸನಾತ್ಮಕ ವಿಚಾರಣೆ ನಡೆಸುವುದು ಅಗತ್ಯವೆಂದು ಅಭಿಪ್ರಾಯಪಟ್ಟಿದ್ದು, ಈ ಕುರಿತು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಕಲಂ 64ರಡಿ ಶಾಸನಬದ್ಧ ವಿಚಾರಣೆಗೆ ಒಳಪಡಿಸಿ ಆದೇಶವನ್ನು ಹೊರಡಿಸಿತ್ತು. ವಿಚಾರಣಾಧಿಕಾರಿಯಾಗಿ ಸಹಕಾರ ಸಂಘಗಳ ಉಪ ಬಂಧಕರು, ಉಡುಪಿ ಜಿಲ್ಲೆ, ಇವರನ್ನು ನೇಮಿಸಿ ಆದೇಶಿಸಲಾಗಿತ್ತು. 2023ರ ಮಾರ್ಚ್ 8ರಿಂದ 2024ರ ಜುಲೈ 1ರವರೆಗೆ ಬ್ಯಾಂಕಿನ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರು ನಕಲಿ ದಾಖಲೆ ಸೃಷ್ಟಿಸಿ ಬೇನಾಮಿ ಹೆಸರಿನಲ್ಲಿ 28.26 ಕೋಟಿ ರೂ. ಸಾಲ ಸ್ವಂತ ಲಾಭಕ್ಕಾಗಿ ದುರುಪಯೋಗ ಮಾಡಿದ ವಿಚಾರ ಸೇರಿದಂತೆ ಇತರ ಅನಿಮಿತಿಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ವಿಚಾರಣೆ ನಡೆಸುವಂತೆ ಸೂಚಿಸಲಾಗಿತ್ತು. ವಿಚಾರಣೆ ಮುಗಿಸಿ ಎರಡು ತಿಂಗಳೊಳಗೆ ವಿಚಾರಣಾ ವರದಿ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಸಹಕಾರ ಸಂಘಗಳ ನಿಬಂಧಕರು ಆದೇಶದಲ್ಲಿ ತಿಳಿಸಿದ್ದರು.

ಆದರೆ ಇದೀಗ ಒಂದು ವರ್ಷ ಕಳೆದರೂ ತನಿಖೆಯ ವರದಿ ಹೊರಬರದೇ, ನ್ಯಾಯದ ನಿರೀಕ್ಷೆಯಲ್ಲಿ ಸಂತ್ರಸ್ತರು ಕಾಯುತ್ತಿದ್ದಾರೆ. ಸಂತ್ರಸ್ತರು ತನಿಖಾಧಿಕಾರಿಗಳಿಗೆ ಸಾಲ ಪತ್ರದಲ್ಲಿನ ಸಹಿಯನ್ನು ವಿಧಿವಿಜ್ಞಾನ (ಫಾರೆನ್ಸಿಕ್) ಸಂಸ್ಥೆಗೆ ಕಳುಹಿಸಿ ಸತ್ಯಾಸತ್ಯತೆ ಪರಿಶೀಲಿಸಲು ಮನವಿ ಮಾಡಿದ್ದರೂ, ಸಹಿಯನ್ನು ಪರೀಕ್ಷೆಗೆ ಕಳುಹಿಸಿರುವ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ತನಿಖೆ ಪೂರ್ಣಗೊಂಡಿಲ್ಲದಿದ್ದರೂ ಸಹಕಾರಿ ಸಂಘಗಳ ನ್ಯಾಯಾಲಯ, ಬೆಂಗಳೂರು ಏಕಪಕ್ಷೀಯ ತೀರ್ಪು ನೀಡಿ ಸಾಲ ಮರುಪಾವತಿಗೆ ಆದೇಶಿಸಿದೆ. ಇದನ್ನು ಆಧಾರಿಸಿಕೊಂಡು ಬ್ಯಾಂಕ್ ಮನೆ ಜಪ್ತಿ, ಅಸ್ತಿ ಜಪ್ತಿ ಹಾಗೂ ಚೆಕ್ ಕೇಸು ಹಾಕುವುದಾಗಿ ಬೆದರಿಸುತ್ತಿದೆ ಎಂದು ಸಂತ್ರಸ್ತರು ಹೇಳಿದ್ದಾರೆ.

ತನಿಖೆ ಪೂರ್ಣಗೊಂಡು ಫಾರೆನ್ಸಿಕ್ ವರದಿ ಬರುವವರೆಗೆ ಯಾವುದೇ ರೀತಿಯ ಕಿರುಕುಳ ನೀಡಬಾರದು. ನಕಲಿ ಸಹಿ ಪ್ರಕರಣಕ್ಕೆ ನ್ಯಾಯ ದೊರಕುವಂತೆ ಸರ್ಕಾರ ಮತ್ತು ಸಂಬಂಧಿತ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತರು ಉಡುಪಿ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕರಿಗೆ ಮತ್ತು ಉಡುಪಿ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ. ಸಂತ್ರಸ್ತರು ನ್ಯಾಯಕ್ಕಾಗಿ ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ಸಂತ್ರಸ್ತೆ ಆಫ್ರೀನ್, ಮಲ್ಪೆ ಮಹಾಲಕ್ಷಿ ಕೋ ಆಪರೇಟಿವ್ ಸೊಸೈಟಿಯಲ್ಲಿ ಸಾವಿರಕ್ಕೂ ಹೆಚ್ಚು ಜನರಿಗೆ ಈ ಮೋಸ ನಡೆದಿದೆ. ಅದರಲ್ಲಿ ನಾವು 28 ಜನರು ಸೇರಿದ್ದೇವೆ. ನಾವು ಬ್ಯಾಂಕಿನ ಯಾವುದೇ ದಾಖಲೆಗಳಿಗೆ ಸಹಿ ಹಾಕದೇ ಇರುವ ಹೊರತಾಗಿಯೂ, ನಮ್ಮ ಹೆಸರಿನಲ್ಲಿ 2.50 ಲಕ್ಷ ರೂ. ಸಾಲ ಮಂಜೂರು ಮಾಡಿದ ದಾಖಲೆ ತೋರಿಸುತ್ತಿದ್ದಾರೆ. ಆದರೆ ನಮಗೆ ನೀಡಲಾದದ್ದು ಕೇವಲ 20 ಸಾವಿರ ರೂ. ಅದು ಕೂಡ ಕೋವಿಡ್ ಸಮಯದಲ್ಲಿ ಬ್ಯಾಂಕ್ ಮ್ಯಾನೇಜರ್ ಸುಬ್ಬಣ್ಣವರು ನಮ್ಮ ಮನೆಗೆ ಬಂದು ‘ಸಂಘದ ರೀತಿಯಲ್ಲಿ ಈ ಹಣವನ್ನು ಕೊಡುತ್ತಿದ್ದೇವೆ, ತಿಂಗಳಿಗೆ 900 ರೂ. ಮರುಪಾವತಿ ಮಾಡಿದರೆ ಸಾಲ ಮುಗಿಯುತ್ತದೆ’ ಎಂದು ನಂಬಿಸಿ ನೀಡಿದ ಹಣ.
ಕಷ್ಟದ ಸಮಯದಲ್ಲಿ ನಂಬಿ ತೆಗೆದುಕೊಂಡಿದ್ದರಿಂದ ನಾವು ಒಂದು ವರ್ಷಕ್ಕೂ ಹೆಚ್ಚು ಕಾಲ 900 ರೂ. ಮರುಪಾವತಿ ಮಾಡುತ್ತಾ ಬಂದಿದ್ದೇವೆ. ಆದರೆ ಹಠಾತ್ ನಮಗೆ ಶೇರ್ ನೋಟಿಸ್ ಬಂತು. ಅದನ್ನು ನೋಡಿ ಬ್ಯಾಂಕ್ಗೆ ಮಾಹಿತಿ ಕೇಳಲು ಹೋದಾಗ, ಬ್ಯಾಂಕ್ನವರು ‘ನೀವು 2 ಲಕ್ಷ ರೂ. ಸಾಲ ತೆಗೆದುಕೊಂಡಿದ್ದೀರಿ, ಅದನ್ನು ತೀರಿಸಬೇಕು’ ಎಂದು ಹೇಳಿದರು. ನಮಗೆ ಕೊಟ್ಟದ್ದು 20 ಸಾವಿರವಾಗಿದ್ದರೂ, ಅವರ ದಾಖಲೆಗಳಲ್ಲಿ ಬಡ್ಡಿ ಮೇಲೆ ಬಡ್ಡಿ ಹಾಕಿ ಮೊತ್ತವನ್ನು 2.50 ಲಕ್ಷದಿಂದ 3.50 ಲಕ್ಷದವರೆಗೆ ಹೆಚ್ಚಿಸಿದ್ದಾರೆ. ಮನೆಗೆ ಬಂದು ಒತ್ತಡ ಹಾಕುವುದು, ಬೆದರಿಕೆ ಹಾಕುವುದು ನಡೆಯುತ್ತಿದೆ. ಎಷ್ಟು ಬಾರಿ ಹೋರಾಟ ಮಾಡಿದರೂ ಪರಿಹಾರ ಸಿಗಲಿಲ್ಲ. 64 ತನಿಖೆಗೆ ಆದೇಶ ಬಂದರೂ ಸರಿಯಾಗಿ ತನಿಖೆ ನಡೆದಿಲ್ಲ. ಮರುತನಿಖೆ ಆದರೂ, ನಾವು ಬೇಡಿಕೊಂಡ ನಮ್ಮ ಸಹಿಯ ಫಾರೆನ್ಸಿಕ್ ಪರೀಕ್ಷೆ ನಡೆಸಲಿಲ್ಲ. ಈಗ ಒಂದು ವರ್ಷವಾಗುತ್ತಿದೆ.

ನಾವು 28 ಜನರೂ ಸಹಿ ಹಾಕಿಲ್ಲ. ಆದರೆ ನಮ್ಮ ಮೇಲೆ ಲಕ್ಷಾಂತರ ರೂ. ಬಾಕಿ ಎಂದು ಒತ್ತಾಯಿಸುತ್ತಿದ್ದಾರೆ. ಫಾರೆನ್ಸಿಕ್ಗೆ ಕಳುಹಿಸಿದರೆ ನಮ್ಮ ಸಹಿ ಹೌದೋ ಅಲ್ಲವೋ ಎನ್ನುವುದು ಸ್ಪಷ್ಟವಾಗುತ್ತದೆ. ಅದರ ಮೇಲೆ ಬೇಕಾದರೆ ಕಾನೂನು ಹೋರಾಟ ಮಾಡಬಹುದು. ಈಗ ಮನೆ ಜಪ್ತಿ ನೋಟಿಸ್ಗಳು ಬರುತ್ತಿವೆ. ಮನೆ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುವುದಾಗಿ ಹೆದರಿಸುತ್ತಿದ್ದಾರೆ. ಹಣದ ಜೋರಿನಲ್ಲಿ ಏನೇನೋ ಮಾಡುತ್ತಿದ್ದಾರೆ. ನಾವು ಬಡ ಜನ—ಎಲ್ಲಿಗೆ ಹೋಗಬೇಕು? ನಮಗೆ ನ್ಯಾಯ ಬೇಕು ಎಂದು ಹೇಳಿದರು.

ಈದಿನ.ಕಾಮ್ ಜೊತೆ ಮಾತನಾಡಿದ ಸಾಮಾಜಿಕ ಹೋರಾಟಗಾರ ಕೋಟ ನಾಗೇಂದ್ರ ಪುತ್ರನ್, ಉಡುಪಿ ಜನತೆಗೆ ಅದ ಅನ್ಯಾಯದ ವಿರುದ್ಧ ಕಳೆದ ಒಂದು ವರ್ಷದಿಂದ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದೇವೆ. ನಮ್ಮ ಹೋರಾಟದ ಪರಿಣಾಮವಾಗಿ ಸರ್ಕಾರ 64 ತನಿಖೆಗೆ ಆದೇಶ ಹೊರಡಿಸಿತ್ತು. ಆದರೆ ಆ ತನಿಖೆಯಿಂದ ಸಂತ್ರಸ್ತರಿಗೆ ಇನ್ನೂ ನ್ಯಾಯ ಸಿಗಲಿಲ್ಲ. ಸರ್ಕಾರ ವಿಚಾರಾಧಿಕಾರಿಯಾಗಿ ಉಡುಪಿ ಉಪನಿಬಂಧಕರಾದ ಲಾವಣ್ಯರನ್ನು ನೇಮಕ ಮಾಡಿತ್ತು. ಆದರೆ ಲಾವಣ್ಯರು ಸರಿಯಾದ ರೀತಿಯಲ್ಲಿ ವಿಚಾರಣೆ ನಡೆಸದೇ, ಶಿರಸಿ ಮೂಲದ ಬ್ಯಾಂಕ್ನಲ್ಲಿ ಭ್ರಷ್ಟಾಚಾರ ಪ್ರಕರಣದ ಆರೋಪದಲ್ಲಿ ಅಮಾನತುಗೊಂಡಿದ್ದ ಮಂಜುನಾಥ್ ಸಿಂಗ್ ಎಂಬ ವ್ಯಕ್ತಿಯನ್ನು ಕರೆದುಕೊಂಡು ಬಂದು ಇಲ್ಲಿ ವಿಚಾರಣೆ ನಡೆಸಿದರು. ಉಪನಿಬಂಧಕರ ಕಚೇರಿಯಲ್ಲಿ ಸಾಕಷ್ಟು ಜಾಗ ಇದ್ದರೂ, ವಿಚಾರಣೆಯನ್ನು ಖಾಸಗೀಯಾದ ಜಗನ್ನಾಥ ಭವನದಲ್ಲಿ ನಡೆಸಿದರು ಎಂದು ಆರೋಪಿಸಿದರು.
ಸಂತ್ರಸ್ತರು ನೀಡಿದ ಹೇಳಿಕೆಗಳನ್ನು ತಪ್ಪಾಗಿ ದಾಖಲಿಸುವ ಘಟನೆಗಳೂ ನಡೆದವು. ನಂತರದ ದಿನ ಲಾವಣ್ಯರು ಮಂಜುನಾಥ್ ಸಿಂಗ್ ಅವರನ್ನು ಕರೆದುಕೊಂಡು ಬಂದ ವಿಚಾರದಲ್ಲಿ ನಮ್ಮಲ್ಲಿ ಕ್ಷಮೆ ಕೇಳಿ ಮರುತನಿಖೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಮರುತನಿಖೆಗೆ ಈಗ ಒಂದು ವರ್ಷ ಕಳೆದರೂ, ಸರಿಯಾದ ವಿಚಾರಣೆ ನಡೆದಿಲ್ಲ. ಇದಾದ ನಂತರವೂ ಅವರು ಸರ್ಕಾರಕ್ಕೆ ನಾವು ಮನವಿ ನೀಡಿದ್ದೇವೆ ಎಂದು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಸಂತ್ರಸ್ತರ ಸಹಿಗೆ ಸಂಬಂಧಿಸಿದಂತೆ ವಿಚಾರಣಾಧಿಕಾರಿಗೆ ಫಾರೆನ್ಸಿಕ್ ಪರೀಕ್ಷೆಗೆ ಕಳುಹಿಸುವ ಅಧಿಕಾರವಿದೆ. ಆದರೆ ಲಾವಣ್ಯರು ತನಿಖೆ ಮಾಡುವ ಅಧಿಕಾರ ಮಾತ್ರ ನನಗಿದೆ, ಫಾರೆನ್ಸಿಕ್ಗೆ ಕಳುಹಿಸಲು ಅಧಿಕಾರ ಇಲ್ಲ ಎಂದು ಹೇಳುತ್ತಿದ್ದಾರೆ. ಇಂತಹ ಗೊಂದಲಕಾರಿ ಹೇಳಿಕೆಗಳು ಮತ್ತು ತನಿಖೆಯ ವಿಳಂಬವನ್ನು ನೋಡಿದಾಗ, ಇವರನ್ನು ಉಡುಪಿ ಜಿಲ್ಲೆಯಲ್ಲಿ ಮುಂದುವರಿಸುವುದು ಸೂಕ್ತವಲ್ಲ ಎಂದು ಹೇಳಿದರು.
ಬ್ಯಾಂಕಿನ ಅಧ್ಯಕ್ಷರೇ ಈ ಪ್ರದೇಶದ ಶಾಸಕರಾಗಿದ್ದಾರೆ. ಮತದಾರರು ಈ ರೀತಿಯ ತೊಂದರೆ ಅನುಭವಿಸುತ್ತಿದ್ದರೂ, ಜನಪ್ರತಿನಿಧಿ ಅವರೊಂದಿಗೆ ನಿಂತಿಲ್ಲ ಎಂಬುದು ವಿಷಾದನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಒಟ್ಟಿನಲ್ಲಿ ಸಂತ್ರಸ್ತರ ಮತ್ತು ಹೋರಾಟಗಾರರ ಹೇಳಿಕೆ ಪ್ರಕಾರ, ಸರ್ಕಾರ ನೀಡಿದ ತನಿಖಾ ಆದೇಶ ಉದ್ದೇಶಪೂರಿತವಾಗಿ ವಿಳಂಬಗೊಳ್ಳುತ್ತಿರುವುದು ಸಂತ್ರಸ್ತರಿಗೆ ಮತ್ತೊಂದು ಅನ್ಯಾಯವಾಗಿದೆ. ಬ್ಯಾಂಕಿನಲ್ಲಿ ನಡೆದ ನಕಲಿ ಸಹಿ ಮತ್ತು ಬೇನಾಮಿ ಸಾಲದ ಆರೋಪ ಗಂಭೀರವಾಗಿರುವುದರಿಂದ, ಇದನ್ನು ಸತ್ಯಸಂಧಾನಗೊಳಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಸಂತ್ರಸ್ತರಿಗೆ ಆದಷ್ಟು ಬೇಗ ನ್ಯಾಯ ಸಿಗಲಿ ಎಂಬುದೇ ನಮ್ಮ ಆಶಯವಾಗಿದೆ.






