ಕಳೆದ ಒಂದೂವರೆ ತಿಂಗಳ ಹಿಂದೆ ರಸ್ತೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಅಪರಿಚಿತ ಹಿರಿಯ ವ್ಯಕ್ತಿಯನ್ನು ವಿಶು ಶೆಟ್ಟಿಯವರು ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಸುಮಾರು ಒಂದು ತಿಂಗಳ ಚಿಕಿತ್ಸೆಗೂ ಸ್ಪಂದಿಸದೆ ಅವರು ಸಾವನ್ನಪ್ಪಿದ್ದಾರೆ. ಇದೀಗ ಸಂಬಂಧಿಕರು ಪತ್ತೆಯಾಗಿದ್ದು, ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ.
ರಕ್ಷಣೆಯ ಸಮಯದಲ್ಲಿ ವೃದ್ದರು ತಮ್ಮ ಹೆಸರು ಕೃಷ್ಣ, ಗುರುವಾಯನಕೆರೆ ಎಂದು ಮಾತ್ರ ತಿಳಿಸಿದ್ದರು. ಚಿಕಿತ್ಸೆಯ ಅವಧಿಯಲ್ಲಿ ಮತ್ತು ಮೃತರಾದ ನಂತರ ಸಂಬಂಧಿಕರ ಪತ್ತೆಗಾಗಿ ಮಾದ್ಯಮಗಳ ಮೂಲಕ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಣೆ ನೀಡಲಾಗಿತ್ತು. ಬಳಿಕ ಬಂದ ಸಂಬಂಧಿಕರು ಮೃತರು ಮುಸ್ಲಿಂ ಸಮುದಾಯದವರಾಗಿದ್ದು, ಅವರ ನಿಜವಾದ ಹೆಸರು ಸಯ್ಯದ್ ಎಂದು ಖಚಿತಪಡಿಸಿದ್ದಾರೆ.
ವಯೋಸಹಜ ಆರೋಗ್ಯ ಸಮಸ್ಯೆಯ ಕಾರಣದಿಂದ ವೃದ್ದರು ಹೆಸರು ತಪ್ಪಾಗಿ ಹೇಳಿರುವುದು ಸ್ಪಷ್ಟವಾಗಿದೆ. ಆದರೆ ಅವರ ಮೂಲ ಊರು ಗುರುವಾಯನಕೆರೆ ಎಂಬ ಮಾಹಿತಿ ಸರಿಯೇ ಆಗಿದೆ. ಸಂಬಂಧಿಕರು ದಾಖಲೆ-ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಮೃತದೇಹವನ್ನು ಸ್ವೀಕರಿಸಿ ಅಂತ್ಯಸಂಸ್ಕಾರ ನಡೆಸಿದರು.






