ಅಸಹಾಯಕ ಸ್ಥಿತಿಯಲ್ಲಿ ಸಂಚರಿಸುತ್ತಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪ ರಕ್ಷಿಸಲಾಗಿದೆ.
ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಾರ್ಥವಾಗಿ ತೆರಳಿದ್ದ ಆದಿ ಉಡುಪಿಯ ಪ್ರೇಮ ರಾಮಚಂದ್ರ ಅವರಿಗೆ ಬಾಲಕಿ ಅನುಮಾನಾಸ್ಪದವಾಗಿ ಕಾಣಿಸಿಕೊಂಡಿದ್ದಾಳೆ. ಬಾಲಕಿಯ ಚಲನವಲನದಲ್ಲಿ ಸಂಶಯಗೊಂಡು ವಿಚಾರಿಸಿದಾಗ, ಆಕೆ ಮನನೊಂದು ಮನೆ ಬಿಟ್ಟು ಬಂದಿರುವುದಾಗಿ ತಿಳಿದುಬಂದಿದೆ. ತಕ್ಷಣ ಅವರು ಸಮಾಜಸೇವಕ ನಿತ್ಯಾನಂದ ಒಳಕಾಡುವರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ನಿತ್ಯಾನಂದ ಒಳಕಾಡುವರು ಕೂಡಲೇ ಸ್ಥಳಕ್ಕೆ ಧಾವಿಸಿ ಉಡುಪಿ ನಗರ ಪೊಲೀಸ್ ಠಾಣೆಗೆ ವಿಷಯವನ್ನು ತಿಳಿಸಿದರು. ನಂತರ ಬಾಲಕಿಯನ್ನು ದೊಡ್ಡಣಗುಡ್ಡೆಯ ಬಾಲಕೀಯರ ಬಾಲ ಮಂದಿರಕ್ಕೆ ಕಳುಹಿಸಿ ತಾತ್ಕಾಲಿಕ ಪುನರ್ವಸತಿ ಕಲ್ಪಿಸಲಾಯಿತು. ಈ ಕಾರ್ಯಾಚರಣೆಗೆ ಹರೀಶ್ ಪೂಜಾರಿ ಉದ್ಯಾವರ ಅವರು ಸಹಕರಿಸಿದರು.
ಇದಕ್ಕೂ ಮುನ್ನ ಬಾಲಕಿ ನಾಪತ್ತೆಯಾಗಿರುವ ಕುರಿತು ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಾಲಕಿ ಉಡುಪಿಯಲ್ಲಿ ಪತ್ತೆಯಾಗಿರುವ ಮಾಹಿತಿ ತಿಳಿದು, ಹಳೇಬೀಡು ಪೊಲೀಸರು ಬಾಲಕಿಯ ತಾಯಿಯೊಂದಿಗೆ ಸ್ಥಳಕ್ಕೆ ಆಗಮಿಸಿದರು. ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರು ಬಾಲಕಿಯನ್ನು ಹಳೇಬೀಡು ಪೊಲೀಸರಿಗೆ ಒಪ್ಪಿಸಿದರು.
ಆದರೆ ತಾಯಿಯೊಂದಿಗೆ ತೆರಳಲು ಬಾಲಕಿ ನಿರಾಕರಿಸಿದ ಹಿನ್ನೆಲೆಯಲ್ಲಿ, ಆಕೆಗೆ ಚಿಕ್ಕಮಗಳೂರು ಬಾಲಕೀಯರ ಬಾಲ ಮಂದಿರದಲ್ಲಿ ಪುನರ್ವಸತಿ ಕಲ್ಪಿಸುವ ಪ್ರಕ್ರಿಯೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





