ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯಾದ್ಯಂತ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವಿಸ್ತರಿತ ಗಣತಿಯಲ್ಲಿ ಸೋಮವಾರ ಸಂಜೆವರೆಗೆ ಉಡುಪಿ ಜಿಲ್ಲೆಯಲ್ಲಿ ಶೇ.87.93ರಷ್ಟು ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ. ರಾಜ್ಯದ ಮಟ್ಟದಲ್ಲಿ ಶೇ.90.23ರಷ್ಟು ಸರ್ವೆ ಮುಗಿದಿರುವ ಮಾಹಿತಿ ಲಭ್ಯವಾಗಿದೆ.
ಉಡುಪಿ ಜಿಲ್ಲೆಯಲ್ಲಿ ಒಟ್ಟು 3,62,093 ಮನೆಗಳ ಗಣತಿ ನಡೆಯಬೇಕಿದ್ದು, ಇದುವರೆಗೆ 2,54,463 ಮನೆಗಳ ಸಮೀಕ್ಷೆ ಮುಗಿದಿದೆ. ಜಿಲ್ಲೆಯ ಏಳು ತಾಲೂಕುಗಳಲ್ಲಿ ಸೋಮವಾರದಂದು 2,786 ಮನೆಗಳ ಸರ್ವೆ ಕಾರ್ಯ ಮುಗಿದಿದೆ. 63,923 ಮನೆಗಳ ಯುಎಚ್ಐಡಿ (ಪ್ರತಿ ಮನೆಗೆ ನೀಡುವ ವಿಶಿಷ್ಟ ಗುರುತು) ಮನೆಯಲ್ಲಿ ಯಾರೂ ಇಲ್ಲದಿರುವುದು ಹಾಗೂ ಇತರ ತಾಂತ್ರಿಕ ಕಾರಣಗಳಿಂದ ಕೊನೆಗೊಳಿಸಲಾಗಿದೆ.
ಜಿಲ್ಲೆಯಲ್ಲಿ ಉಡುಪಿಯನ್ನು ಹೊರತುಪಡಿಸಿ ಉಳಿದ ತಾಲೂಕುಗಳಲ್ಲಿ ಗಣತಿ ಶೇ.80 ಕ್ಕಿಂತ ಮೇಲು ಮುಗಿದಿದೆ. ಉಡುಪಿ ತಾಲೂಕಿನಲ್ಲಿ ಮಾತ್ರ ಸರ್ವೆ ನಿಧಾನಗತಿಯಲ್ಲಿದ್ದು, ಶೇ.74.36ರಷ್ಟು ಮಾತ್ರ ಪೂರ್ಣಗೊಂಡಿದೆ. ಉಡುಪಿ ತಾಲೂಕಿನಲ್ಲೇ ಅತ್ಯಧಿಕ 21,620 ಮನೆಗಳ ಯುಎಚ್ಐಡಿ ಮುಕ್ತಾಯಗೊಂಡಿದೆ.
ಬೈಂದೂರಿನಲ್ಲಿ ಗುರಿಯಾದ 26,623 ಮನೆಗಳಲ್ಲಿ 25,111 ಮನೆಗಳ ಸರ್ವೆ ಮುಗಿದು ಶೇ.108 ಸಾಧನೆಯಾಗಿದೆ. ಇಲ್ಲಿ 3,084 ಮನೆಗಳ ಯುಎಚ್ಐಡಿ ಮುಚ್ಚಲಾಗಿದೆ. ಹೆಬ್ರಿಯಲ್ಲಿ 13,422 ಮನೆಗಳ ಗುರಿಯಲ್ಲಿ 11,585 ಮನೆಗಳ ಸಮೀಕ್ಷೆ ಪೂರ್ಣಗೊಂಡು ಶೇ.105.23 ಸಾಧನೆಯಾಗಿದೆ. ಇಲ್ಲೂ 2,539 ಮನೆಗಳ ಯುಎಚ್ಐಡಿ ಮುಕ್ತಾಯಗೊಂಡಿದೆ.
ಬ್ರಹ್ಮಾವರ ತಾಲೂಕಿನಲ್ಲಿ ಶೇ.97, ಕುಂದಾಪುರದಲ್ಲಿ ಶೇ.95, ಕಾರ್ಕಳದಲ್ಲಿ ಶೇ.85 ಹಾಗೂ ಕಾಪುವಿನಲ್ಲಿ ಶೇ.81ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ಈ ಸಮೀಕ್ಷೆ ಅಕ್ಟೋಬರ್ 18ರಂದು ಕೊನೆಗೊಳ್ಳಲಿದೆ.





