ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ(ಸಿಐಟಿಯು)ದ ಕಾರ್ಯಕರ್ತರು ರಾಜ್ಯಾದ್ಯಂತ ತಮ್ಮ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹಾಗೂ ಕಾರ್ಮಿಕರ ಅಧಿಕಾರಿ ಕುಮಾರ್ ಮುಖಾಂತರ ಕಾರ್ಮಿಕ ಸಚಿವರಿಗೆ ಮನವಿ ನೀಡಿದರು.
ಪ್ರತಿಭಟನೆಗೆ ಮೊದಲು ಸಾವಿರಾರು ಕಾರ್ಮಿಕರಿಂದ ಮಣಿಪಾಲದ ಟೈಗರ್ ಸರ್ಕಲ್ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಮಾಡಿದರು.
ಕಟ್ಟಡ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತನಾಡಿ, “ಕಟ್ಟಡ ನಿರ್ಮಾಣ ಕಾರ್ಮಿಕರ ಸಮಸ್ಯೆ ಮತ್ತು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರಾಜ್ಯಾದ್ಯಂತ ಹಲವು ಬಾರಿ ಮನವಿ ಸಲ್ಲಿಸಿ, ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ನೈಜ ಸಮಸ್ಯೆಗಳಿಗೆ ಪರಿಹಾರ ಸಿಗುವ ಬದಲಾಗಿ ಕಲ್ಯಾಣ ಮಂಡಳಿಗೆ ಹೊರೆಯಾಗುವ ರೀತಿಯಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಕಾರ್ಮಿಕ ಸಚಿವರು ಘೋಷಣೆ ಮಾಡುತ್ತಾ ನೂರಾರು ಕೋಟಿ ಕಲ್ಯಾಣ ಮಂಡಳಿ ನಿಧಿಯನ್ನು ದುರುಪಯೋಗ ಮಾಡಿದ್ದಾರೆ” ಎಂದು ಆರೋಪಿಸಿದರು.

“ಕಟ್ಟಡ ನಿರ್ಮಾಣ ವಲಯದ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತಾಗಿ ಹಲವು ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ತಮ್ಮ ಜತೆ ಎರಡು ಬಾರಿ ಚರ್ಚೆ ನಡೆಸಲಾಗಿದೆ ಮತ್ತು ಇತ್ತೀಚೆಗೆ ಮಂಡಳಿಯ ನೂತನ ಕಾರ್ಯವರ್ತಿಗಳೂ ಕೂಡ ಕಾರ್ಮಿಕ ಪ್ರತಿನಿಧಿಗಳ ಜತೆ ವಿಶ್ವತವಾದ ಚರ್ಚೆ ನಡೆಸಿದ್ದಾರೆ. ಆದರೆ, ಸಮಸ್ಯೆಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಕೇಂದ್ರ ಸರ್ಕಾರ ಕಾರ್ಮಿಕ ಕಾನೂನು ತಿದ್ದುಪಡಿ ಮಾಡಿ ಕಟ್ಟಡ ಕಾರ್ಮಿಕರಿಗಾಗಿ ಇದ್ದ ಎರಡು ಕಾನೂನುಗಳನ್ನು ಎರಡು ಕಾರ್ಮಿಕ ಸಂಹಿತೆಗಳಲ್ಲಿ ಮೀಳಿಗೊಳಿಸಿದ್ದು, ಇದರಿಂದಾಗಿ ಭವಿಷ್ಯದಲ್ಲಿ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ನಿಧಿ ಕೆಲಸಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಹೀಗಾಗಿ ಕೇಂದ್ರ ಸರ್ಕಾರದ ಸಂಹಿತೆಗಳನ್ನು ರಾಜ್ಯದಲ್ಲಿ ಜಾರಿಯಾಗದಂತೆ ಕೂಡಲೇ ಸೂಕ್ತ ಕ್ರಮವಹಿಸಬೇಕು” ಎಂದು ಮನವಿ ಮಾಡಿದರು.
ಪ್ರಮುಖ ಬೇಡಿಕೆಗಳು
- ಬಾಕಿ ಇರುವ 2020-21 ಮತ್ತು 2021-22ನೇ ವರ್ಷದ ಅರ್ಜಿಗಳಿಗೆ ಕೂಡಲೇ ಹಣ ವರ್ಗಾವಣೆ ಆಗಬೇಕು.
- ಕಾರ್ಡ್ ನವೀಕರಣಕ್ಕೆ ವೇತನ ಚೀಟಿ ಮತ್ತು ಹಾಜರಾತಿ ಪಟ್ಟಿ ಕಡ್ಡಾಯ ಆದೇಶವನ್ನು ಹಿಂಪಡೆಯಬೇಕು.
- ಬೋಗಸ್ ಕಾರ್ಡ್ ನಿಯಂತ್ರಿಸಿ ನೈಜ ಕಾರ್ಮಿಕರನ್ನು ಮಾತ್ರ ನೊಂದಣಿ/ನವೀಕರಣ ಮಾಡಬೇಕು.
- ರಾಜ್ಯ ಸರ್ಕಾರದ ಆರೋಗ್ಯ ಸಂಜೀವಿನಿ ಯೋಜನೆಯನ್ನು ಕಟ್ಟಡ ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ಜಾರಿಗೊಳಿಸಬೇಕು.
- ಹೊಸ ತಂತ್ರಾಂಶವನ್ನು ಕೂಡಲೇ ಆರಂಭಿಸಿ ಕಾರ್ಮಿಕ ಸಂಘಗಳಿಗೆ ಮಾತ್ರ ಮಾನ್ಯತೆ ನೀಡಿ ನಕಲಿ ಕಾರ್ಡ್ಗಳನ್ನು ಮಾಡುತ್ತಿರುವ ಗ್ರಾಮ ಓನ್ ಸೇವಾಸಿಂಧೂ ಕೇಂದ್ರಗಳಲ್ಲಿ ನೋಂದಣಿ/ನವೀಕರಣ ನಿಲ್ಲಿಸಬೇಕು.
- ಜೀವಿತಾವಧಿ ಪ್ರಮಾಣಪತ್ರವನ್ನು ಕಂದಾಯ ಇಲಾಖೆಯ ಬದಲಾಗಿ ಕಾರ್ಮಿಕ ಇಲಾಖೆಯೇ ನೀಡಬೇಕು.
- ಅರ್ಜಿಗಳ ವಿಲೇವಾರಿ ವಿಳಂಬ ತಡೆಗಟ್ಟಿ, ಕಾರ್ಮಿಕ ಇಲಾಖೆಯಲ್ಲಿ ಇರುವ ಭ್ರಷ್ಟ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು.
- ಮಂಡಳಿಯಿಂದ ಆರಂಭಿಸಲಾದ ಶಿಶುವಿಹಾರ ಹಾಗೂ ಮೊಬೈಲ್ ಕ್ಲಿನಿಕ್ಗಳು, ವಿವಿಧ ಕಿಟ್, ಬಸ್ ಪಾಸ್ ನಿಲ್ಲಿಸಬೇಕು.
- ಮನೆ ನಿರ್ಮಾಣಕ್ಕೆ 5 ಲಕ್ಷ ರೂಪಾಯಿ ಸಹಾಯಧನ ನೀಡಿ, ಸ್ಲಂ ಬೋರ್ಡ್ಗೆ ನೀಡಿದ ಹಣ ವಸೂಲಿ ಮಾಡಬೇಕು.
- ನಿರ್ಮಾಣ ಕಾರ್ಮಿಕರಿಗೆ ಭವಿಷ್ಯನಿಧಿ ಯೋಜನೆ ಜಾರಿಗೆ ತನ್ನಿ.
- ಕಲ್ಯಾಣ ಮಂಡಳಿಯಲ್ಲಿ ಸಿಡಬ್ಲ್ಯೂಎಫ್ಐ ಸಂಘಟನೆಗೆ ಪ್ರಾತಿನಿಧ್ಯ ಸಿಗಬೇಕು.
- ಮಂಡಳಿ ಹಾಗೂ ಕಾರ್ಮಿಕ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಬೇಕು.
- ಎಲ್ಲ ಖರೀದಿಗಳನ್ನು ನಿಲ್ಲಿಸಬೇಕು ಫಲಾನುಭವಿಗೆ ನೇರ ಹಣ ವರ್ಗಾವಣೆ ಮಾಡಬೇಕು.
- ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದ ತೊಂದರೆಗಳನ್ನು ಕೂಡಲೇ ಬಗೆಹರಿಸಲು ಕ್ರಮವಹಿಸಬೇಕು.
- ಸರ್ಕಾರಿ ಹಾಗೂ ಖಾಸಗಿ ಉದ್ಯಮ/ಸಂಸ್ಥೆಗಳಿಂದ ಬಾಕಿ ಇರುವ ಸೆಸ್ ಮತ್ತು ಬೆಂಗಳೂರು ಸೇರಿ ರಾಜ್ಯದ್ಯಾಂತ ಸರ್ಕಾರದ ಆದೇಶದಂತೆ ಅನಧಿಕೃತವಾಗಿ ನಿರ್ಮಾಣಗೊಂಡಿರುವ ಕಟ್ಟಡಗಳಿಂದಲೂ ಸೆಸ್ ಸಂಗ್ರಹಕ್ಕೆ ಕ್ರಮವಹಿಸಬೇಕು.
- ಕರಾವಳಿ ಭಾಗದಲ್ಲಿ ಕಟ್ಟಡ ನಿರ್ಮಾಣ ಕೆಲಸಗಳಿಗೆ ತೊಡಕಾಗಿರುವ ‘ಮರಳು ಸಮಸ್ಯೆ’ಯನ್ನು ಬಗೆಹರಿಸಬೇಕು.




