ಸಾರಿಗೆ ನೌಕರರ ಒತ್ತಡದ ದುಡಿಮೆಯಿಂದ ಅನಾರೋಗ್ಯ ಹೆಚ್ಚಳವಾಗುತ್ತಿದೆ. ಆಟೋರಿಕ್ಷಾ ಚಾಲಕರು ತಮ್ಮ ಕುಟುಂಬಗಳ ನಿರ್ವಹಣೆಗಾಗಿ 12-14 ಘಂಟೆಗಳ ಕಾಲ ದುಡಿಯುವ ಅನಿವಾರ್ಯತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಹೃದಯಾಘಾತದಂತಹ ಅನಾರೋಗ್ಯಗಳು ಕಾಡುತ್ತಿದ್ದು, ಹಿಂದಿನ ಒಂದು ವರ್ಷದಲ್ಲಿ ಸುಮಾರು 11 ಸಾವಿರ ಮಂದಿ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ಸಿಐಟಿಯು ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದರು.
ಉಡುಪಿ ಜಿಲ್ಲೆಯ ಕುಂದಾಪುರದ ಹಂಚು ಕಾರ್ಮಿಕರ ಭವನದಲ್ಲಿ ನಡೆದ 48ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
“ಕರ್ನಾಟಕ ರಾಜ್ಯ ಸರ್ಕಾರವು ಸಾರಿಗೆ ನೌಕರರಾಗಿರುವ ಆಟೋರಿಕ್ಷಾ ಚಾಲಕರು, ಬಸ್ ಚಾಲಕರು, ನಿರ್ವಾಹಕರು, ಕ್ಲೀನರ್, ವಾಹನಗಳನ್ನು ದುರಸ್ತಿ ಮಾಡುವ ಮೆಕ್ಯಾನಿಕ್, ಆಟೋಮೊಬೈಲ್ನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮೋಟಾರು ವಾಹನ ನೌಕರರ ಕಲ್ಯಾಣ ಮಂಡಳಿಗೆ ರಾಜ್ಯಪಾಲರು ಅಂಕಿತ ಹಾಕಿರುವುದು ಸಿಐಟಿಯು ಹೋರಾಟಕ್ಕೆ ಸಂದ ಜಯವಾಗಿದೆ. ಸರ್ಕಾರ ಕೂಡಲೇ ಸೌಲಭ್ಯಗಳನ್ನು ಜಾರಿ ಮಾಡಬೇಕು” ಎಂದು ಓತ್ತಾಯಿಸಿದರು.
“ರಚನೆ ಆಗಿರುವ ಕಲ್ಯಾಣ ಮಂಡಳಿಯನ್ನು ರಕ್ಷಿಸಿಕೊಳ್ಳಲು ಬಜೆಟ್ನಲ್ಲಿಯೂ ಅನುದಾನ ನೀಡಲು ಒತ್ತಾಯಿಸಲು ಸಾರಿಗೆ ಸಂಘಟನೆಗಳನ್ನು ಜಿಲ್ಲೆಯಲ್ಲಿ ಬಲಿಷ್ಠಗೊಳಿಸಬೇಕು. ಸಾರಿಗೆ ನೌಕರರ ಇಂತಹ ಹೋರಾಟಗಳಿಗೆ ಸಿಐಟಿಯು ಸಂಪೂರ್ಣ ಬೆಂಬಲಿಸಿ ಪಾಲ್ಗೊಳ್ಳುತ್ತದೆ” ಎಂದರು.
ಮಹಾಸಭೆಯಲ್ಲಿ ಸಿಐಟಿಯು ಮುಖಂಡ ಎಚ್ ನರಸಿಂಹ, ಸಿಐಟಿಯು ತಾಲೂಕು ಸಂಚಾಲಕ ಚಂದ್ರಶೇಖರ, ವಿ ಸಂಘದ ಗೌರವಾಧ್ಯಕ್ಷ ಎಚ್ ಕರುಣಾಕರ ಸಭೆಯನ್ನುದ್ದೇಶಿಸಿ ಮಾತನಾಡಿದರು.
1.ಆಟೋ, ಟ್ಯಾಕ್ಸಿ, ಗೂಡ್ಸ್ ವಾಹನಗಳಿಗೆ ಅಧಿಕೃತ ನಿಲ್ದಾಣಗಳನ್ನು ಗುರುತಿಸಬೇಕು.
2.ಬೈಂದೂರು-ಕುಂದಾಪುರಕ್ಕೆ ತಲಾ ಎರಡು ಸಿಎನ್ಜಿ ಬಂಕ್ಗಳನ್ನು ತೆರೆಯಬೇಕು.
3.ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಮೋಟಾರು ವಾಹನ ಕಾಯ್ದೆ-2019 ಹಿಂಪಡೆಯಬೇಕು.
4.ನೂತನ ಕಾರ್ಮಿಕ ಕಾಯ್ದೆ, ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಹಿಂಪಡೆಯಬೇಕು ಎಂಬ ನಿರ್ಣಯಗಳನ್ನು ಮಂಡಿಸಿದರು.
ನೂತನ ಸಮಿತಿ ಆಯ್ಕೆ: ಸಂಘದ ನೂತನ ಅಧ್ಯಕ್ಷರಾಗಿ ರಮೇಶ್ ವಿ, ಪ್ರಧಾನ ಕಾರ್ಯದರ್ಶಿಯಾಗಿ ರಾಜು ದೇವಾಡಿಗ, ಸಂಘಟನಾ ಕಾರ್ಯದರ್ಶಿಯಾಗಿ ಚಂದ್ರಶೇಖರ ವಿ ಸೇರಿದಂತೆ 22 ಮಂದಿ ಪದಾಧಿಕಾರಿಗಳನ್ನೊಳಗೊಂಡ ಸಮಿತಿ ಆಯ್ಕೆ ಮಾಡಿದರು.
ಈ ಸುದ್ದಿ ಓದಿದ್ದೀರಾ? ಗದಗ | ದೊಡ್ಡೂರ ಗ್ರಾಮ ಪಂಚಾಯಿತಿಯಲ್ಲಿ ಹಡಪದ ಅಪ್ಪಣ್ಣ ಜಯಂತಿ ಆಚರಣೆ
ಸಂಘದ ಅಧ್ಯಕ್ಷ ರಮೇಶ್ ವಿ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ರಾಜು ದೇವಾಡಿಗ ವಾರ್ಷಿಕ ವರದಿ ಮಂಡಿಸಿದರು. ಸಂಘದ ಕೋಶಾಧಿಕಾರಿ ಸಂತೋಷ ಕಲ್ಲಾಗರ ನಿರ್ಣಯ ಮಂಡಿಸಿದರು. ಈ ಸಂದರ್ಭದಲ್ಲಿ ಬ್ರಹ್ಮಾವರ ಆಟೋರಿಕ್ಷಾ ಸಂಘದ ಮುಖಂಡ ಸದಾಶಿವ ಪೂಜಾರಿ ಇದ್ದರು.





