ಉಡುಪಿಯಲ್ಲಿ ಹದಗೆಟ್ಟ ರಸ್ತೆಯಿಂದ ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದು, ರಸ್ತೆಯಲ್ಲಿ ಹಾರುವ ಧೂಳಿನಿಂದಾಗಿ ಸ್ಥಳೀಯರು ಬೇಸತ್ತಿದ್ದಾರೆ.
ಉಡುಪಿ ನಗರಸಭೆ ವ್ಯಾಪ್ತಿಗೆ ಒಳಪಟ್ಡ ಇಂದ್ರಾಳಿಯ ಸಗ್ರಿ ವಾರ್ಡ್ ಹಯಗ್ರೀವ ನಗರದ ಒಂದನೇ ಅಡ್ಡರಸ್ತೆಯಲ್ಲಿ ಹಾಕಲಾದ ಇಂಟರ್ ಲಾಕ್ ಕಿತ್ತು ಹೋಗಿದ್ದು ವಾಹನ ಸಂಚಾರಕ್ಕೆ ತೀರಾ ತೊಂದರೆಯಾಗಿದ್ದು, ಈ ಸಮಸ್ಯೆ ಉದ್ಭವಿಸಿ ಆರೇಳು ತಿಂಗಳಾದರೂ ಸಂಬಂಧಪಟ್ಟ ಯಾರೊಬ್ಬರೂ ಇನ್ನೂ ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಈ ರಸ್ತೆಯಲ್ಲಿ ಸ್ವಲ್ಪ ಭಾಗ ಡಾಂಬರು ಮತ್ತು ಇನ್ನು ಅಲ್ಪ ಭಾಗ ‘ಇಂಟರ್ ಲಾಕ್’ ಮೂಲಕ ರಚಿಸಲಾಗಿದೆ. ‘ಇಂಟರ್ ಲಾಕ್’ ಸಂಪೂರ್ಣ ಕಿತ್ತು ಹೋಗಿದ್ದು, ಕಲ್ಲುಗಳು ರಸ್ತೆಯಲ್ಲೇ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬರುತ್ತದೆ.
ಅಲ್ಲದೆ ಇಂಟರ್ಲಾಕ್ ಅಳವಡಿಸಲು ಹಾಕಿರುವ ಮರಳು ಕೂಡ ಮೇಲೆದ್ದಿದ್ದು, ವಾಹನ ಸವಾರರು ನಿತ್ಯವೂ ಸಂಕಷ್ಟ ಅನುಭವಿಸುವಂತಾಗಿದೆ. ಈ ಮರಳಿನಿಂದಾಗಿ ದ್ವಿಚಕ್ರ ವಾಹನ ಸವಾರರು ನಿತ್ಯವೂ ಸ್ಕಿಡ್ ಆಗಿ ರಸ್ತೆಗೆ ಬೀಳುವುದು ಸಾಮಾನ್ಯವಾಗಿ ಬಿಟ್ಟಿದೆ. ಶಾಲಾ ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಈ ರಸ್ತೆಯಲ್ಲಿ ಹೆಚ್ಚು ಸಂಚಾರ ಮಾಡುತ್ತಿದ್ದು ಅವರೆಲ್ಲ ತೀರಾ ಸಮಸ್ಯೆ ಎದುರಿಸುತ್ತಿದ್ದಾರೆ.
ಈ ದಿನ.ಕಾಮ್ ಜೊತೆ ಮಾತನಾಡಿದ ಇಂದ್ರಾಳಿಯ ಅನ್ಸರ್ ಶೇಖ್, ಈ ವಾರ್ಡ್ನಲ್ಲಿ ನೂರಾರು ಮನೆಗಳಿವೆ. ಈ ರಸ್ತೆ ಮುಖ್ಯರಸ್ತೆಗೆ ಸಂಪರ್ಕ ಕೊಂಡಿಯಾಗಿದೆ, ಪ್ರತಿನಿತ್ಯ ಸಾವಿರಾರು ಜನರು ಓಡಾಡುತ್ತಾರೆ. ಶಾಲಾ ಮಕ್ಕಳು, ಹಿರಿಯರು ಮಹಿಳೆಯರು ಎಲ್ಲರೂ ಈ ರಸ್ತೆಯ ಮೂಲಕವೇ ಹಾದು ಹೋಗುತ್ತಾರೆ. ರಸ್ತೆ ಹದಗೆಟ್ಟ ನಂತರ ಶಾಲಾ ವಾಹನ ಕೂಡ ಮನೆಯ ಬಳಿ ಬರುತ್ತಿಲ್ಲ ದೂರದಲ್ಲಿ ನಿಲ್ಲಿಸಿ ಹೋಗುತ್ತಿದ್ದಾರೆ. ಇದರಿಂದ ಪೋಷಕರಿಗೆ ಬಹಳಷ್ಟು ಸಮಸ್ಯೆಯಾಗಿದೆ, ಸಾರ್ವಜನಿಕರ ಪ್ರತಿದಿನಗ ಗೋಳು ಕೇಳುವರಿಲ್ಲದಂತಾಗಿದೆ ಎಂದರು.
ಈಗಾಗಲೇ ಇಲ್ಲಿಯ ಸ್ಥಳೀಯರೆಲ್ಲರು ಸೇರಿ ಈ ಬಗ್ಗೆ ನಗರಸಭೆ ಸದಸ್ಯರಿಗೆ ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸಂಬಂಧಪಟ್ಟವರು ಇದರ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ರಸ್ತೆ ಸಂಚಾರ ಸಮಸ್ಯೆ ಉಲ್ಬಣವಾಗುತ್ತಲೇ ಇದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಈ ಸಮಸ್ಯೆಯನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.




