ಈ ದಿನಮಾನದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ದೇಶವನ್ನು ಕಟ್ಟಿದ ಮಹನೀಯರ ಬಗ್ಗೆ ನಮಗೆ ಗೊತ್ತಿಲ್ಲದೆ ಅವರ ಬಗ್ಗೆ ತಪ್ಪು ಸಂಗತಿಗಳನ್ನು ಪ್ರಸರಿಸುವ ಮಂದಿಯ ಮೋಡಿಗೆ ನಾವು ಬಲಿಯಾಗಿ ಅವರ ಬಗ್ಗೆ ತಪ್ಪು ಅಭಿಪ್ರಾಯವನ್ನು ಹೊಂದಿರುತ್ತೇವೆ. ಹಾಗಾಗಿ ದೇಶದ ಸ್ವತಂತ್ರ ಚಳವಳಿಗಳಲ್ಲಿ ಭಾಗವಹಿಸಿ ದೇಶ ಕಟ್ಟಿದ ಗಾಂಧಿ, ನೆಹರೂ, ವಲ್ಲಭ ಬಾಯಿ ಪಟೇಲ್, ಸುಭಾಸ್ ಚಂದ್ರ ಬೋಸ್ ಇವರ ಬಗ್ಗೆ ನಾವು ತಿಳಿದು ಕೊಳ್ಳ ಬೇಕಾದ ಅನಿವಾರ್ಯತೆ ಹಿಂದಿಗಿಂತಲೂ ಈಗ ಹೆಚ್ಚಿದೆ. ದೇಶದ ಪ್ರಥಮ ಪ್ರಧಾನಿಯಾದ ನೆಹರೂರವರು ಪ್ರಧಾನಿಯಾಗಿ ಈ ದೇಶದ ಆಡಳಿತವನ್ನು ಕೈಗೆತ್ತಿಕೊಂಡಾಗ ಈ ದೇಶ ಬಡತನದಿಂದ ಕೂಡಿತ್ತು. ದೇಶದಲ್ಲಿ ನಿರಾಶ್ರಿತರ ಸಮಸ್ಯೆ ನಿರುದ್ಯೋಗದ ಸಮಸ್ಯೆ ತಾಂಡವ ಮಾಡುತ್ತಿತ್ತು. ಪಂಚವಾರ್ಷಿಕ ಯೋಜನೆಯ ಮೂಲಕ ದೇಶದಲ್ಲಿ ಕೈಗಾರಿಕೆ ಮತ್ತು ಕೃಷಿಗೆ ಪ್ರಾಧಾನ್ಯತೆ ಕೊಟ್ಟು ನೆಹರೂರವರು ದೇಶವನ್ನು ಕಟ್ಟಿದರು. ಹುಟ್ಟಿನಿಂದಲೇ ಅಗರ್ಭ ಶ್ರೀಮಂತರಾದ ನೆಹರೂರವರು ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಕೈಗೊಂಡ ಯೋಜನೆಗಳು ಸಮ ಸಮಾಜದ ಕನಸು ಸಾಕಾರಗೊಳಿಸುವಲ್ಲಿ ಮೊದಲ ಹೆಜ್ಜೆ ಇಟ್ಟಿದ್ದವು ಎಂದು ಕೋಟೇಶ್ವರ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಶ್ರೀ ಸುಧಾಕರ್ ದೇವಾಡಿಗ ಅವರು 2017 ಸಾಲಿನ ಉಡುಪಿ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಸೈಂಟ್ ಪ್ರಾನ್ಸಿಸ್ ಕ್ಸೇವಿಯರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಜರಗಿದ ನೆಹರು ಜಯಂತಿ ಮತ್ತು ಮಕ್ಕಳ ದಿನಾಚರಣೆಯ ಪ್ರಯುಕ್ತ ಗ್ರಾಮದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ದೇಶ ಭಕ್ತಿ ಗೀತೆ ಸಮೂಹ ಗಾಯನ ಸ್ಪರ್ಧೆ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ನುಡಿದರು.

ಅವರು ಮುಂದುವರೆಯುತ್ತಾ ತನ್ನ ಆಡಳಿತದ ಪ್ರಾರಂಭದಲ್ಲಿ ದೇಶಕ್ಕೆ ಅತ್ಯುತ್ತಮವಾದ ಸಂವಿಧಾನವನ್ನು ನೀಡುವುದರ ಮೂಲಕ ದೇಶದ ಜನತೆಯ ಹಿತ ಕಾಯುವಲ್ಲಿ ಅಪಾರವಾದ ಸಾಧನೆಯನ್ನು ಗೈದರು. ವೈಜ್ಞಾನಿಕ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಿದರು. ಕೈಗಾರಿಕೆ ಮತ್ತು ಕೃಷಿಗೆ ಒತ್ತುಕೊಟ್ಟು ದೇಶವನ್ನು ಕೊಟ್ಟಲು ಶ್ರಮಿಸಿ ಅದರಲ್ಲಿ ಯಶಸ್ವಿಯಾದರು, ಇಂತಹ ನೆಹರೂರವರುನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಮತ್ತು ಇವತ್ತಿನ ಯುವ ತಲೆಮಾರಿಗೆ ಸರಿಯಾಗಿ ಅರ್ಥ ಮಾಡಿಸದೆ ದೇಶ ಕಟ್ಟಿದ ಮಹನೀಯರನ್ನು ಅವಮಾನಿಸಲಾಗುತ್ತಿದೆ. ರಾಜಕೀಯ ಕಾರಣಗಳಿಗಾಗಿ ಮಾಡುತ್ತಿರುವ ಈ ತಪ್ಪನ್ನು ಯುವ ಜನರು ಅರ್ಥ ಮಾಡಿಕೊಂಡು ಅವರ ವ್ಯಕ್ತಿತ್ವಕ್ಕೆ ಅಪಚಾರ ಮಾಡುವ ಕೆಲಸವನ್ನು ಬಿಡಬೇಕು ಎಂದರು.
ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅಧ್ಯಕ್ಷರೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರೂ ಆದ ಉದ್ಯಾವರ ನಾಗೇಶ್ ಕುಮಾರ್ ರವರು ಮಾತನಾಡುತ್ತಾ ಎಷ್ಟೋ ಶಾಲೆಗಳಲ್ಲಿ ಮಕ್ಕಳ ದಿನಾಚರಣೆಯನ್ನು ನೆಹರೂರವರ ಜನ್ಮದಿನ ಎಂದು ದಾಖಲಿಸದೆ ಆಚರಿಸಲಾಗುತ್ತಿದೆ. ಅಂದು ನೆಹರೂರವರ ಜನ್ಮದಿನ ಎಂದು ಹೇಳಲು ಅದೇನೋ ಭಯ ಶಿಕ್ಷಕರನ್ನು ಕಾಡುತ್ತಿದೆ. ಇದನ್ನು ಬಿಟ್ಟು ಮಕ್ಕಳ ದಿನಾಚರಣೆ ಎಂದು ನೆಹರೂರವರ ಬಗ್ಗೆ ನೈಜ ಸಂಗತಿಗಳನ್ನು ಹೇಳಿ ಮಕ್ಕಳ ದಿನಾಚರಣೆಯನ್ನು ಆಚರಿಸಬೇಕಾಗಿದೆ. ಇಲ್ಲವಾದಲ್ಲಿ ಮುಂದೊಂದು ದಿನ ದೇಶ ಕಟ್ಟಿದ ಮಹನೀಯರ ಜನ್ಮದಿನವನ್ನು ಆಚರಿಸುವುದು ಅಪರಾಧ ಎಂದೆನಿಸಬಹುದು. ಈ ಬಗ್ಗೆ ಶಿಕ್ಷಕರು ಮತ್ತು ಹೆತ್ತವರು ಎಚ್ಚರ ವಹಿಸಬೇಕು ಎಂದರು
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸಿಂತಿಯಾ ಪಿರೇರ ಸಂದರ್ಭೋಚಿತವಾಗಿ ಮಾತನಾಡಿದರು. ವೇದಿಕೆಯಲ್ಲಿ ಕೋಶಾಧಿಕಾರಿ ಸತೀಶ್ ಡಿ. ಸಾಲಿಯಾನ್ ಉಪಸ್ಥಿತರಿದ್ದರು
ಪ್ರಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಗಿರೀಶ್ ಗುಡ್ಡೆಯಂಗಡಿ ಅವರು ಸ್ವಾಗತಿಸಿದರು. ಕೊನೆಯಲ್ಲಿ ಪ್ರಧಾನ ಕಾರ್ಯದರ್ಶಿ ಸುಹೇಲ್ ರಹಮತ್ತುಲ್ಲ ರವರು ವಂದಿಸಿದರು ಮಾಜಿ ಅಧ್ಯಕ್ಷರುಗಳಾದ ಅನುಪ್ ಕುಮಾರ್ ಮತ್ತು ತಿಲಕ್ ರಾಜ್ ಸಾಲಿಯಾನ್ ಅವರು ಕಾರ್ಯಕ್ರಮ ನಿರ್ವಹಿಸಿದರು
ಪ್ರಾರಂಭದಲ್ಲಿ ಸಂಗೀತಜ್ಞರಾದ ಹೇಮಲತಾ ಎಸ್. ರಾವ್ ಕಸ್ತೂರಿ ಕೆ. ಮತ್ತು ಗಣೇಶ್ ರಾವ್ ಎಲ್ಲೂರು ಸ್ಪರ್ಧೆಯನ್ನು ಉದ್ಘಾಟಿಸಿದರು. ಸ್ಪರ್ಧೆಯಲ್ಲಿ ಗ್ರಾಮದ 9 ಶಾಲೆಗಳ 13 ತಂಡಗಳು ಭಾಗವಹಿಸಿದ್ದವು.





