ಕೇಂದ್ರ ಸಚಿವ ಕುಮಾರಸ್ವಾಮಿ ಇತ್ತೀಚೆಗೆ ಭಗವದ್ಗೀತೆಯ ಸಾರಾಂಶವನ್ನು ಶಾಲಾ ಪಠ್ಯಪುಸ್ತಕಗಳಲ್ಲಿ ಸೇರಿಸುವಂತೆ ರಾಜ್ಯ ಸರ್ಕಾರಕ್ಕೆ ವಿನಂತಿ ಸಲ್ಲಿಸಿರುವುದನ್ನು ಸಮತಾ ಸೈನಿಕ ದಳ ತೀವ್ರವಾಗಿ ಆಕ್ಷೇಪಿಸಿದೆ. ಸಮತಾ ಸೈನಿಕ ದಳ ಜಿಲ್ಲಾಧ್ಯಕ್ಷರಾದ ವಿಶ್ವನಾಥ ಪೇತ್ರಿ ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ್ದು “ಭಾರತ ಹಲವು ಧರ್ಮ–ಜಾತಿ ಸಮುದಾಯಗಳನ್ನು ಒಳಗೊಂಡ ಪ್ರಜಾಸತ್ತಾತ್ಮಕ ರಾಷ್ಟ್ರ. ಇಂತಹ ಸಂದರ್ಭದಲ್ಲಿ ನಿರ್ದಿಷ್ಟ ಧಾರ್ಮಿಕ ಗ್ರಂಥದ ಆಯ್ದ ಭಾಗಗಳನ್ನು ಶಾಲಾ ಪಠ್ಯಕ್ರಮಕ್ಕೆ ಸೇರಿಸುವುದು ಸಮಾಜದಲ್ಲಿ ಭಿನ್ನಾಭಿಪ್ರಾಯ ಮತ್ತು ಸಂಘರ್ಷದ ವಾತಾವರಣವನ್ನು ಉಂಟುಮಾಡುವ ಸಾಧ್ಯತೆ ಇದೆ” ಎಂದು ತಿಳಿಸಿದ್ದಾರೆ.
ಭಾರತ ದೇಶ ಹಲವಾರು ಧರ್ಮ ಜಾತಿಯನ್ನೊಳಗೊಂಡ ಶಾಂತಿಯ ತೋಟದ ಪ್ರಬುದ್ಧ ಭಾರತ ಹಾಗಿರುವಾಗ ಜಾತಿ ಧರ್ಮಗಳ ಮಧ್ಯ ಸಂಘರ್ಷನ್ನುಂಟುಮಾಡುವ ಧರ್ಮಕ್ಕೆ ಹಾಗೂ ಕೆಲವೇ ಶೇಖಡವಾರು ಜನಾಂಗದ ಬ್ರಾಹ್ಮಣ್ಯ ಶಾಯಿ ತತ್ವವನ್ನು ಬಹುಸಂಖ್ಯಾತ ಜನರ ಮೇಲೆ ಹೇರಲ್ಪಡುವ ಭಗವದ್ಗೀತೆಯನ್ನು ಶಾಲಾ ಪಠ್ಯಪುಸ್ತಕದಲ್ಲಿ ಯಾವುದೇ ಕಾರಣಕ್ಕೂ ಸೇರಿಸಬಾರದು. ಕುಮಾರಸ್ವಾಮಿ ಮಾಡಿರುವ ಸಲಹೆ ಮಕ್ಕಳಲ್ಲಿ ‘ಸಾಮಾಜಿಕ ವಿಭಜನೆಗೆ ಕಾರಣವಾಗಬಹುದಾದ ಧಾರ್ಮಿಕ ಪರಿಕಲ್ಪನೆಗಳನ್ನು’ ಬಿತ್ತುವ ಪ್ರಯತ್ನವೆಂದು ಅವರು ಟೀಕಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹಲವಾರು ಸಂದರ್ಭಗಳಲ್ಲಿ “ಯುದ್ಧ ಬೇಡ, ಬುದ್ಧ ಬೇಕು – ಪ್ರಬುದ್ಧ ಭಾರತದ ಸಂಕಲ್ಪ” ಕುರಿತು ನೀಡಿರುವ ಸಂದೇಶವನ್ನು ಉಲ್ಲೇಖಿಸಿದ ಅವರು, “ವೈವಿಧ್ಯತೆಗೆ ಗೌರವ ನೀಡುವ ರಾಷ್ಟ್ರದಲ್ಲಿ ಯಾವುದೇ ಕಾರಣಕ್ಕೂ ಭಗವದ್ಗೀತೆಯನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಬಾರದು” ಎಂದು ಬೇಡಿಕೆ ಇಟ್ಟಿದ್ದಾರೆ. ಈ ಕುರಿತಾಗಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪತ್ರಿಕಾ ಪ್ರಕಟಣೆ ಮೂಲಕ ಸಮತಾ ಸೈನಿಕ ದಳ ಮನವಿ ಮಾಡಿದೆ.





