ತಮ್ಮ ಭ್ರಷ್ಟಾಚಾರ, ಸೃಜನಪಕ್ಷಪಾತ, ದುರಾಡಳಿತದ ಮೂಲಕ ರಾಜ್ಯದ ಜನರಿಗೆ ನಿರಂತರವಾಗಿ ದ್ರೋಹ ಮಾಡುತ್ತಿರುವ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳನ್ನು ತಿರಸ್ಕರಿಸಿ ಮತ್ತು ರಾಜ್ಯದ ಏಕೈಕ ಪ್ರಾಮಾಣಿಕ ಮತ್ತು ಪ್ರಾದೇಶಿಕ ಪಕ್ಷವಾದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವನ್ನು ಬೆಂಬಲಿಸಿ ಎಂದು ಕೆಆರ್ಎಸ್ ಪಕ್ಷ ಜಾಗೃತಿ ಜಾಥಾ ನಡೆಸುತ್ತಿದೆ ಎಂದು ಕೆಆರ್ಎಸ್ ಪಕ್ಷದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಹೇಳಿದರು.
ʼಕರ್ನಾಟಕಕ್ಕಾಗಿ ನಾವುʼ ಎಂಬ ಬೈಕ್ ಜಾಥಾ ಉಡುಪಿ ಜಿಲ್ಲೆಗೆ ತಲುಪಿದ ವೇಳೆ ಮಾತನಾಡಿ, “ರಾಜ್ಯದಲ್ಲಿ ಸ್ವಚ್ಛ, ಪ್ರಾಮಾಣಿಕ, ಜನಪರ, ಪ್ರಾದೇಶಿಕ ರಾಜಕಾರಣದ ಕುರಿತು ಜನಜಾಗೃತಿ ಮೂಡಿಸಲು ಕೆಆರ್ಎಸ್ ಪಕ್ಷವು ರಾಜ್ಯವ್ಯಾಪಿ ಬೈಕ್ ಜಾಥಾ ಹಮ್ಮಿಕೊಂಡಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಿಂದ ಆರಂಭವಾಗಿರುವ ಈ ಜಾಥಾ ಇಂದು ಉಡುಪಿಗೆ ತಲುಪಿದೆ” ಎಂದು ಹೇಳಿದರು.
“ಈ ಹಿಂದೆ ಕೆಆರ್ಎಸ್ ಪಕ್ಷವು 2021ರ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ರಾಜ್ಯದ ಎಲ್ಲ 31 ಜಿಲ್ಲೆಗಳಲ್ಲಿ ‘ಭ್ರಷ್ಟರೇ, ಪವಿತ್ರ ರಾಜಕಾರಣವನ್ನು ಬಿಟ್ಟು ತೊಲಗಿ; ನಾಡಪ್ರೇಮಿಗಳೇ, ಪ್ರಾಮಾಣಿಕ ರಾಜಕಾರಣಕ್ಕೆ ಮುಂದಾಗಿʼ ಎನ್ನುವ ಹೆಸರಿನಲ್ಲಿ ಹಮ್ಮಿಕೊಂಡಿದ 32 ದಿನಗಳ ಕಾಲದ, 3500 ಕಿಲೋಮೀಟರ್ಗಳ ಬೈಕ್ ಜಾಥಾವು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವನ್ನು ರಾಜ್ಯದ ಜನರಿಗೆ ಪರಿಚಯಿಸಿದ್ದು ಮಾತ್ರವಲ್ಲದೆ, ಆ ಸಮಯದಲ್ಲಿ ರಾಜ್ಯದ ಸುಮಾರು 63 ತಾಲೂಕು ಕಚೇರಿಗಳಲ್ಲಿ ಮಾಡಿದ್ದ “ಲಂಚಮುಕ್ತ ಕರ್ನಾಟಕ” ಅಭಿಯಾನದ ಮೂಲಕ ಜನರಿಗೂ ಹತ್ತಿರವಾಗಿತ್ತು. ಆ ಜಾಥಾದ ಕಾರಣದಿಂದ ಸಾವಿರಾರು ಜನ ಪಕ್ಷದ ಸದಸ್ಯತ್ವ ಪಡೆದರು. ನೂರಾರು ಜನ ನಾಯಕತ್ವದ ಜವಾಬ್ದಾರಿ ತೆಗೆದುಕೊಂಡರು. ನೂರಾರು ಸಾರ್ವಜನಿಕರು ದೇಣಿಗೆ ನೀಡಿದರು. ಪಕ್ಷಕ್ಕೆ ಬಲ ತುಂಬಿದರು” ಎಂದರು.
“ಇದೇ ರೀತಿಯ ಹತ್ತಾರು ಯಶಸ್ವಿ ಜಾಥಾ ಮತ್ತು ಅಭಿಯಾನಗಳ ಕಾರಣಕ್ಕಾಗಿಯೇ ಕಳೆದ ವರ್ಷ ನಡೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಚುನಾವಣಾ ಅಕ್ರಮಗಳನ್ನು ಎಸಗದೆ, ಹಣ-ಹೆಂಡ ಹಂಚದೆ, ಜಾತಿ-ಕೋಮುಗಳ ಅನೈತಿಕ ರಾಜಕಾರಣ ಮಾಡದೆ ಕೆಆರ್ಎಸ್ ಪಕ್ಷವು 195 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಸಾಧ್ಯವಾಗಿದ್ದು, ಸರ್ಕಾರಿ ಅಧಿಕಾರಿಗಳ ಲಂಚಗುಳಿತನ, ಭ್ರಷ್ಟಾಚಾರ, ಪೊಲೀಸರ ದುರ್ವರ್ತನೆ ಮತ್ತು ದೌರ್ಜನ್ಯ, ನ್ಯಾಯಬೆಲೆ ಅಂಗಡಿಗಳಲ್ಲಿ ಬಡವರಿಗೆ ಆಗುವ ವಂಚನೆ ಸೇರಿದಂತೆ ಯಾವುದೇ ಸರ್ಕಾರಿ ಅಧಿಕಾರಿಗಳ ಮತ್ತು ರಾಜಕಾರಣಿಗಳ ಕರ್ತವ್ಯಲೋಪದ ವಿಚಾರ ಬಂದಾಗ ರಾಜ್ಯದ ಜನರಿಗೆ ಇಂದು ನೆನಪಾಗುವುದೇ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪ್ರಾಮಾಣಿಕ ಮತ್ತು ಧೈರ್ಯಶಾಲಿ ಸೈನಿಕರು. ರಾಜ್ಯದಲ್ಲಿ ಪ್ರಾಮಾಣಿಕ, ಜನಪರ, ಮೌಲ್ಯಾಧಾರಿತ ರಾಜಕಾರಣ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ಬಯಸುವ ಕನ್ನಡಿಗರ ಏಕೈಕ ಆಶಾಕಿರಣವಾಗಿ ಇಂದು ಕೆಆರ್ಎಸ್ ಪಕ್ಷವು ಹೊರಹೊಮ್ಮಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಎಂಪಿಎಂ ಕಾರ್ಖಾನೆ ಪುನಶ್ಚೇತನಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು: ಸಚಿವ ಮಧು ಬಂಗಾರಪ್ಪ
ರಾಜ್ಯದ 31 ಜಿಲ್ಲೆಗಳಲ್ಲಿ ಕರ್ನಾಟಕಕ್ಕಾಗಿ ನಾವು ಬೈಕ್ ಜಾಥಾ ಸಂಚರಿಸಲಿದೆ. 29 ಜಿಲ್ಲಾ ಕೇಂದ್ರಗಳು ಮತ್ತು 50ಕ್ಕಿಂತ ಹೆಚ್ಚು, ತಾಲೂಕು ಕೇಂದ್ರಗಳು ಸೇರಿದಂತೆ ಸುಮಾರು 82 ಪಟ್ಟಣ/ನಗರಗಳಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಮಾರ್ಚ್ 2ರ ಶನಿವಾರ, ನೆಲಮಂಗಲದಲ್ಲಿ ಬೃಹತ್ ಸಮಾರೋಪ ಸಮಾವೇಶ ನಡೆಯಲಿದೆ” ಎಂದು ಹೇಳಿದರು.




