ಮುಸ್ಲಿಂ ವೆಲ್ಫೇರ್ ಎಸೋಸಿಯೇಶನ್ (ರಿ.) ಮತ್ತು ಬ್ಲಡ್ ಸೆಂಟರ್ ಕೆ.ಎಂ.ಸಿ. ಮಣಿಪಾಲ ಸಹಯೋಗದಲ್ಲಿ ಇಂದು ಉಡುಪಿ ಜಾಮೀಯ ಮಸೀದಿಯಲ್ಲಿ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಆಬೀದ್ ಗದ್ಯಾಳ, ರಕ್ತದಾನವು ಮಾನವ ಜೀವ ಉಳಿಸುವ ಅತ್ಯಂತ ಶ್ರೇಷ್ಠ ದಾನ. ಇಂತಹ ಕಾರ್ಯಗಳು ಸಮಾಜದಲ್ಲಿ ಮಾನವೀಯತೆ, ಸಹಕಾರ ಮತ್ತು ಬಾಂಧವ್ಯವನ್ನು ವೃದ್ಧಿಸುತ್ತವೆ. ಒಂದು ರಕ್ತದ ಹನಿಯು ಅನೇಕ ಜೀವ ಉಳಿಸಬಲ್ಲದು. ಎಲ್ಲರೂ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಮುಸ್ಲೀಮ್ ವೆಲ್ಫೇರ್ ಅಸೋಸಿಯೇಷನ್ನಿಂದ ಇಂತಹ ಸಾಮಾಜಿಕ ಸೇವಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರುವುದು ಪ್ರಶಂಸನೀಯ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಇಂತಹ ಸಮಾಜಮುಖಿ ಕಾರ್ಯಗಳು ನಡೆಯಲಿ ಎಂದು ಹಾರೈಸಿದರು.

ಕೆಎಂಸಿ ಮಣಿಪಾಲದ ಪ್ರೊಫೆಸರ್ ಮತ್ತು ಬ್ಲಡ್ ಸೆಂಟರ್ ವಿಭಾಗದ ಮುಖ್ಯಸ್ಥರಾದ ಡಾ| ಶಮೀ ಶಾಸ್ತ್ರೀ ಮಾತನಾಡಿ, ರಕ್ತದಾನ ಕೇವಲ ಒಬ್ಬನ ಜೀವ ಉಳಿಸುವ ಕಾರ್ಯವಲ್ಲ, ಆತನ ಆರೋಗ್ಯಕ್ಕೂ ಪ್ರಯೋಜನಕಾರಿ. ನಿಯಮಿತ ರಕ್ತದಾನದಿಂದ ದೇಹದಲ್ಲಿ ಹೊಸ ರಕ್ತಕಣಗಳ ಉತ್ಪಾದನೆ ಹೆಚ್ಚುತ್ತದೆ, ರಕ್ತದ ಒತ್ತಡ ಸಮತೋಲನದಲ್ಲಿರುತ್ತದೆ, ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯಲು ಸಹಾಯಕವಾಗುತ್ತದೆ. ರಕ್ತದಾನದಿಂದ ಶರೀರದ ಚೈತನ್ಯ ಹೆಚ್ಚುತ್ತದೆ ಎಂದು ಹೇಳಿದರು.

ಉಡುಪಿ ಜಾಮಿಯಾ ಮಸೀದಿಯ ಅಧ್ಯಕ್ಷರಾದ ರಿಯಾಝ್ ಅಹಮದ್, ಸಾಮಾಜಿಕ ಕಾರ್ಯಕರ್ತರಾದ ಮುನೀರ್ ಕಲ್ನಾಡಿ ಮುಸ್ಲಿಂ ವೆಲ್ಫೇರ್ ಎಸೋಸಿಯೇಶನ್ ಅಧ್ಯಕ್ಷರಾದ ಮುನೀರ್ ಮುಹಮ್ಮದ್ ವೇದಿಕೆಯಲ್ಲಿ ಉಪಸ್ಥತರಿದ್ದರು. ಪ್ರಧಾನ ಕಾರ್ಯದರ್ಶಿ ವಿ. ಎಸ್. ಉಮರ್ ಪ್ರಾಸ್ತವಿಕವಾಗಿ ಮಾತನಾಡಿದರು. ರಿಯಾಜ್ ಕುಕ್ಕಿಕಟ್ಟೆ ಧನ್ಯವಾದವಿತ್ತರು, ಇಕ್ಬಾಲ್ ಮನ್ನ ಕಾರ್ಯಕ್ರಮ ನಿರೂಪಿಸಿದರು.






