ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆಲೂರು ಗ್ರಾಮದ ಸರ್ವೇ ನಂ.153 ರಲ್ಲಿರುವ ಸರಕಾರಿ ಡಿ.ಸಿ. ಮನ್ನಾ ಭೂಮಿಯನ್ನು ಭೂಹೀನ ಕೊರಗ ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ತಕ್ಷಣ ಮಂಜೂರಾತಿ ಮಾಡಬೇಕೆಂದು ಆಗ್ರಹಿಸಿ ಕೊರಗ ಸಮುದಾಯದ ನಿಯೋಗವು ಮಂಗಳವಾರ ಜಿಲ್ಲಾ ಆಡಳಿತಕ್ಕೆ ವಿಸ್ತೃತ ಮನವಿ ಸಲ್ಲಿಸಿತು.

ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ ಇಲಾಖೆಯ ಯೋಜನಾ ಸಮನ್ವಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ ನಿಯೋಗ, ಕಳೆದ ಸುಮಾರು ಹತ್ತು ವರ್ಷಗಳಿಂದ ಈ ಭೂಮಿ ಮಂಜೂರಾತಿ ಪ್ರಕ್ರಿಯೆ ಅನಗತ್ಯವಾಗಿ ವಿಳಂಬವಾಗುತ್ತಿರುವುದನ್ನು ಖಂಡಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಈ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಉಡುಪಿ ಜಿಲ್ಲಾ ಸಂಚಾಲಕ ಶ್ರೀಧರ ನಾಡ, ಕರಾವಳಿ ಭಾಗದ ಅತ್ಯಂತ ಹಿಂದುಳಿದ ಆದಿವಾಸಿ ಸಮುದಾಯಗಳಲ್ಲಿ ಒಂದಾದ ಕೊರಗ ಸಮುದಾಯದ ಅನೇಕ ಕುಟುಂಬಗಳು ಇಂದಿಗೂ ಕೃಷಿ ಭೂಮಿಯಿಲ್ಲದೆ ಅತೀ ದುರ್ಬಲ ಪರಿಸ್ಥಿತಿಯಲ್ಲಿ ಬದುಕು ಸಾಗಿಸುತ್ತಿವೆ ಎಂದು ಹೇಳಿದರು.
ಭಾರತ ಸರ್ಕಾರವು ಈ ಸಮುದಾಯವನ್ನು “Particularly Vulnerable Tribal Group (PVTG)” ಎಂದು ಗುರುತಿಸಿರುವ ಹಿನ್ನೆಲೆಯಲ್ಲಿ, ಇವರಿಗೆ ಭೂಮಿ ಮಂಜೂರಾತಿ ಪ್ರಕ್ರಿಯೆಗೆ ವಿಶೇಷ ಆದ್ಯತೆ ನೀಡುವುದು ಸರ್ಕಾರದ ಸಂವಿಧಾನಬದ್ಧ ಕರ್ತವ್ಯವಾಗಿದೆ ಎಂದು ಅವರು ಒತ್ತಿಹೇಳಿದರು.

ಆಲೂರು ಗ್ರಾಮದ ಸರ್ವೇ ನಂ.153 ರ ಒಟ್ಟು ವಿಸ್ತೀರ್ಣ 7.65 ಎಕರೆ. ಇದರಲ್ಲಿ ಸುಮಾರು 7.53 ಎಕರೆ ಸರಕಾರಿ ಡಿ.ಸಿ. ಮನ್ನಾ (ಕಂದಾಯ) ಭೂಮಿಯಾಗಿದ್ದು, ಕೇವಲ 0.12 ಎಕರೆ ಮಾತ್ರ ಅರಣ್ಯ ಇಲಾಖೆಗೆ ಅಧಿಸೂಚಿತವಾಗಿದೆ ಎಂದು ಕಂದಾಯ ದಾಖಲೆಗಳು ಸ್ಪಷ್ಟಪಡಿಸಿವೆ ಎಂದು ಹೇಳಿದರು.
ಸಂಯುಕ್ತ ಸರ್ವೇ ಮತ್ತು ಅಧಿಕೃತ ನಕ್ಷೆ ಪ್ರಕಾರವೂ ಇದೇ ಸಂಗತಿ ದೃಢಪಟ್ಟಿದ್ದು, ಅರಣ್ಯ ಇಲಾಖೆಗೆ ಸೇರಿದ ಭಾಗವು ಕಂದಾಯ ಗಡಿಯ ಹೊರಗೆ ಪ್ರತ್ಯೇಕವಾಗಿ ಗುರುತಿಸಲಾಗಿದೆ. ಸರ್ವೇ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಸಹ ನಕ್ಷೆಗೆ ಸಹಿ ಮಾಡಿರುವುದು ಮಹತ್ವದ ವಿಚಾರವಾಗಿದೆ ಎಂದು ಹೇಳಿದರು.

ಸದರಿ ಭೂಮಿಯಲ್ಲಿ ಗೇರು ನಡುತೋಪು ಇರುವುದನ್ನು ಆಧಾರವನ್ನಾಗಿ ಮಾಡಿಕೊಂಡು ಕರ್ನಾಟಕ ಗೇರು ಅಭಿವೃದ್ಧಿ ನಿಗಮವು ಮಂಜೂರಾತಿಗೆ ಆಕ್ಷೇಪಣೆ ವ್ಯಕ್ತಪಡಿಸಿದೆ. ಆದರೆ ಈ ಆಕ್ಷೇಪಣೆಗೆ ದೃಢವಾದ ಕಾನೂನುಬದ್ಧ ನೆಲೆ ಇಲ್ಲ ಎಂದು ಹೇಳಿದರು.
1979ರ ಸರ್ಕಾರದ ಆದೇಶದ ಪ್ರಕಾರ ಗೇರು ತೋಟಗಳ ನಿರ್ವಹಣೆಯನ್ನು ನಿಗಮಕ್ಕೆ ನೀಡಲಾಗಿದ್ದರೂ, ಭೂಮಿಯ ಶಾಶ್ವತ ಮಾಲೀಕತ್ವ ಸರ್ಕಾರದ್ದೇ ಉಳಿಯುತ್ತದೆ. ಗೇರು ತೋಟದ ಮೇಲಿನ ಹಕ್ಕು ಮಾತ್ರ ನಿಗಮಕ್ಕಿದ್ದು, ಭೂಮಿಯ ಸ್ವಾಮ್ಯ ಹಸ್ತಾಂತರವಾಗಿಲ್ಲ ಎಂದು ದಾಖಲೆಗಳು ಸೂಚಿಸುತ್ತವೆ ಎಂದು ಅವರು ಹೇಳಿದರು.

ಹೆಚ್ಚುವರಿಯಾಗಿ, ಗೇರು ನಿಗಮಕ್ಕೆ ಹಸ್ತಾಂತರಿಸಿದ ಭೂಮಿಯ ಪಟ್ಟಿಯಲ್ಲಿ ಸರ್ವೇ ನಂ.153 ಉಲ್ಲೇಖವಾಗಿಲ್ಲ. ಕೇವಲ ಪ್ರದೇಶಗಳ ಹೆಸರು ಮತ್ತು ವಿಸ್ತೀರ್ಣ ಮಾತ್ರ ಉಲ್ಲೇಖಿಸಲಾಗಿದೆ. ಹೀಗಾಗಿ ಈ ಭೂಮಿಯನ್ನು ನಿಗಮದ ಶಾಶ್ವತ ಆಸ್ತಿಯೆಂದು ಪರಿಗಣಿಸುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.
ಸಮಿತಿಯ ನ್ಯಾಯಸಮ್ಮತ ಬೇಡಿಕೆಗಳನ್ನು ತುರ್ತಾಗಿ ಈಡೇರಿಸದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಫಲಾನುಭವಿಗಳ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಆಡಳಿತಾತ್ಮಕ ಪ್ರಕ್ರಿಯೆಗಳು ಪೂರ್ಣ: ಇನ್ನೂ ಮಂಜೂರಾತಿ ಏಕೆ ಇಲ್ಲ?
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸ್ಥಳ ಪರಿಶೀಲನೆ, ಜಂಟಿ ಸರ್ವೇ, ಮಹಜರು (ಪಂಚನಾಮೆ), ಹೇಳಿಕೆ ದಾಖಲಾತಿ ಸೇರಿದಂತೆ ಎಲ್ಲಾ ಪ್ರಮುಖ ಆಡಳಿತಾತ್ಮಕ ಹಂತಗಳು ಪೂರ್ಣಗೊಂಡಿವೆ.
2016ರಲ್ಲಿ ಜಿಲ್ಲಾಧಿಕಾರಿಗಳು ತಹಶೀಲ್ದಾರ್ಗೆ ಭೂಮಿ ಮಂಜೂರಾತಿ ಪ್ರಕ್ರಿಯೆ ಕೈಗೊಳ್ಳುವಂತೆ ನಿರ್ದೇಶನ ನೀಡಿರುವುದೂ ದಾಖಲೆಗಳಲ್ಲಿ ಇದೆ. ಇದರಿಂದ ಆಡಳಿತಾತ್ಮಕ ಮಟ್ಟದಲ್ಲಿ ಈ ಭೂಮಿಯನ್ನು ಕೊರಗ ಕುಟುಂಬಗಳಿಗೆ ನೀಡುವ ಅಗತ್ಯತೆ ಈಗಾಗಲೇ ಒಪ್ಪಿಕೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಿದೆ.
ಆದರೂ ಅಂತಿಮ ಮಂಜೂರಾತಿ ಹಂತದಲ್ಲಿ ಅನಗತ್ಯ ವಿಳಂಬವಾಗುತ್ತಿರುವುದು ಆಡಳಿತದ ನಿರ್ಲಕ್ಷ್ಯ ಮತ್ತು ಸಾಮಾಜಿಕ ನ್ಯಾಯದ ವಿಳಂಬವನ್ನು ತೋರಿಸುತ್ತದೆ ಎಂದು ಸಮಿತಿ ಆರೋಪಿಸಿದೆ.

ಮಹಮ್ಮದ್ ಫೀರ್ ಸಮಿತಿ ಶಿಫಾರಸುಗಳ ಪ್ರಸ್ತಾಪ
ಸುಮಾರು ಮೂರು ದಶಕಗಳ ಹಿಂದೆ ರಾಜ್ಯ ಸರ್ಕಾರ ನೇಮಿಸಿದ ಮಹಮ್ಮದ್ ಫೀರ್ ಸಮಿತಿ ಕೊರಗ ಸಮುದಾಯದ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಅಧ್ಯಯನ ಮಾಡಿ ಹಲವು ಪ್ರಮುಖ ಶಿಫಾರಸುಗಳನ್ನು ನೀಡಿತ್ತು.
ಅದರಲ್ಲಿಯೇ ಪ್ರಮುಖವಾಗಿ ಪ್ರತಿಯೊಂದು ಕೊರಗ ಕುಟುಂಬಕ್ಕೂ ಕನಿಷ್ಠ 2.5 ಎಕರೆ ಕೃಷಿ ಭೂಮಿ ನೀಡಬೇಕು ಎಂಬ ಶಿಫಾರಸು ಮಾಡಲಾಗಿದೆ. ಇದರ ಉದ್ದೇಶ ಸಮುದಾಯವನ್ನು ಭೂಹೀನತೆ ಮತ್ತು ಬಡತನದಿಂದ ಹೊರತೆಗೆದು ಸ್ವಾವಲಂಬಿ ಜೀವನೋಪಾಯ ಒದಗಿಸುವುದಾಗಿತ್ತು.

ಆದರೆ ಈ ಶಿಫಾರಸುಗಳು ಸಂಪೂರ್ಣವಾಗಿ ಜಾರಿಯಾಗದೆ ಇರುವುದರಿಂದ ಕೊರಗ ಸಮುದಾಯದ ಮೂಲ ಸಮಸ್ಯೆಗಳು ಇನ್ನೂ ಮುಂದುವರಿದಿವೆ ಎಂದು ಸಮಿತಿ ವಿಷಾದ ವ್ಯಕ್ತಪಡಿಸಿದೆ.
10 ವರ್ಷಗಳ ಹೋರಾಟದ ಹಿನ್ನೆಲೆ
ಆಲೂರು ಮತ್ತು ಹರ್ಕೂರು ಗ್ರಾಮಗಳಲ್ಲಿ ವಾಸಿಸುತ್ತಿರುವ ಕೊರಗ ಕುಟುಂಬಗಳಿಗೆ ಭೂಮಿ ಮಂಜೂರಾತಿ ಮಾಡಬೇಕೆಂದು ಕಳೆದ ಸುಮಾರು ಒಂದು ದಶಕದಿಂದ ನಿರಂತರ ಹೋರಾಟ ನಡೆಯುತ್ತಿದೆ.
ಈ ಅವಧಿಯಲ್ಲಿ ಅನೇಕ ಬಾರಿ ಮನವಿ ಸಲ್ಲಿಕೆ, ಧರಣಿ, ಹಕ್ಕೊತ್ತಾಯ ಚಳವಳಿ, ಸ್ಥಳ ಪರಿಶೀಲನೆ, ಸರ್ವೇ ಕಾರ್ಯಗಳು ನಡೆದಿವೆ. ಮಹಜರು ಪ್ರಕ್ರಿಯೆಯೂ ಪೂರ್ಣಗೊಂಡಿದೆ. ಈ ಎಲ್ಲಾ ಪ್ರಕ್ರಿಯೆಗಳ ಬಳಿಕ 13 ಕೊರಗ ಕುಟುಂಬಗಳಿಗೆ ಭೂಮಿ ನೀಡುವ ಪ್ರಕ್ರಿಯೆ ಬಹುತೇಕ ಅಂತಿಮ ಹಂತ ತಲುಪಿದೆ.

ಕರ್ನಾಟಕ ಸರ್ಕಾರದ ನೀತಿಗಳ ಪ್ರಕಾರ ಭೂಹೀನ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಭೂಮಿ ನೀಡುವುದು ಪ್ರಥಮ ಆದ್ಯತೆ. ವಿಶೇಷವಾಗಿ PVTG ವರ್ಗಕ್ಕೆ ಸೇರಿದ ಕೊರಗ ಸಮುದಾಯದಂತಹ ಅತ್ಯಂತ ದುರ್ಬಲ ಸಮುದಾಯಗಳಿಗೆ ಭೂಮಿ ಹಂಚಿಕೆ ಮಾಡುವುದು ಸಂವಿಧಾನಬದ್ಧ ಜವಾಬ್ದಾರಿ.
ಸಾರ್ವಜನಿಕ ಹಿತಾಸಕ್ತಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಸರ್ಕಾರಕ್ಕೆ ಯಾವುದೇ ಸಮಯದಲ್ಲಿ ಹಸ್ತಾಂತರಿತ ಭೂಮಿಯನ್ನು ಪುನಃ ಸ್ವಾಧೀನಕ್ಕೆ ಪಡೆಯುವ ಅಧಿಕಾರವಿದೆ. ಹೀಗಾಗಿ ಗೇರು ನಿಗಮದ ಆಕ್ಷೇಪಣೆ ಅಂತಿಮ ಅಡ್ಡಿಯಾಗುವುದಿಲ್ಲ ಎಂದು ಸಮಿತಿ ಸ್ಪಷ್ಟಪಡಿಸಿದೆ.

ಸಮಿತಿಯ ಮನವಿಯಲ್ಲಿ ಕೆಳಗಿನ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದೆ:
- ಸರ್ವೇ ನಂ.153 ರ ಸರಕಾರಿ ಭೂಮಿಯನ್ನು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಬಳಕೆಯಿಂದ ಬಿಡುಗಡೆಗೊಳಿಸುವುದು
- 7.53 ಎಕರೆ ಡಿಸಿ ಮನ್ನಾ ಭೂಮಿಯನ್ನು ತಕ್ಷಣ 13 ಕೊರಗ ಕುಟುಂಬಗಳಿಗೆ ಮಂಜೂರಾತಿ ಮಾಡುವುದು
- ಅಗತ್ಯವಿದ್ದಲ್ಲಿ ಸಂಬಂಧಿತ ಇಲಾಖೆಗಳ ಸಂಯುಕ್ತ ಪರಿಶೀಲನೆ ನಡೆಸಿ ತ್ವರಿತ ನಿರ್ಧಾರ ಕೈಗೊಳ್ಳುವುದು
- ಮಹಮ್ಮದ್ ಫೀರ್ ಸಮಿತಿ ಶಿಫಾರಸುಗಳನ್ನು ಜಾರಿಗೊಳಿಸುವುದು
ಈ ನಿಯೋಗದಲ್ಲಿ ಜಿಲ್ಲಾ ಸಂಚಾಲಕ ಶ್ರೀಧರ ನಾಡ ಅವರ ನೇತೃತ್ವದಲ್ಲಿ ಗಣೇಶ ಆಲೂರು, ತುಳಸಿ, ಸಂಜೀವ ಬಳ್ಕೂರು, ಮಾಲತಿ ಆಲೂರು, ಸುರೇಶ್ ಆಲೂರು, ಮಂಜುನಾಥ, ರೇಷ್ಮಾ ನಾಡ, ಚಂದ್ರವತಿ, ಶೇಖರ, ಶಮಂತ್, ಬಾಬಿ ಆಲೂರು ಸೇರಿದಂತೆ 13 ಫಲಾನುಭವಿ ಕುಟುಂಬಗಳ ಸದಸ್ಯರು ಹಾಗೂ ಕಾರ್ಮಿಕ ಮುಖಂಡರು ಉಪಸ್ಥಿತರಿದ್ದರು.

ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.




