ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಶಶಿಧರ್ ಎಸ್.ಕೋಸಂಬೆ ಅವರು ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಪೊಲೀಸ್ ಠಾಣೆಗೆ ಭಾನುವಾರ ದಿಡೀರ್ ಭೇಟಿ ನೀಡಿದರು.
ಶಾಲಾ ಕಾಲೇಜುಗಳಲ್ಲಿ ತೆರೆದ ಮನೆ ಕಾರ್ಯಕ್ರಮವನ್ನು ಪ್ರತಿ ಗುರುವಾರ ಕೈಗೊಂಡು, ಮಕ್ಕಳಿಗೆ ಮಕ್ಕಳ ಹಕ್ಕುಗಳ ಸಂಭಂಧಿತ ಕುರಿತು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳನ್ನು ಜೆಜೆಬಿ ಬೋರ್ಡ್ ಮುಂದೆ ಸಾದರ ಪಡಿಸಲು ಫಾರಂ ನಂ: 1 ಹಾಗೂ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಮಕ್ಕಳನ್ನು ಸಮಾಲೋಚನೆಗೆ ಕರೆದೊಯ್ದಾಗ ಫಾರಂ:17 ಕಡ್ಡಾಯವಾಗಿ ಭರ್ತಿ ಮಾಡಬೇಕು ಎಂದು ಸೂಚಿಸಿದರು.
ಬಳಿಕ ಮಕ್ಕಳ ವಿಶೇಷ ಪೊಲೀಸ್ ಘಟಕದ ಕಾರ್ಯ ವೈಖರಿಯನ್ನು ಗಮನಿಸಿದ ಅವರು, ತೆರದ ಮನೆ ಕಾರ್ಯಕ್ರಮದ ರಿಜಿಸ್ಟ್ರಾರ್ ಹಾಗೂ ಮಕ್ಕಳ ಪ್ರಕರಣಗಳ ಕುರಿತ ದಾಖಲು ವಹಿಯನ್ನು ಪರಿಶೀಲಿಸಿದರು.
ಮಕ್ಕಳ ಅಪಹರಣ ಪ್ರಕರಣ, ಪೋಕ್ಸೋ ಪ್ರಕರಣ, ಬಾಲ್ಯ ವಿವಾಹ ಪ್ರಕರಣ ಸೇರಿದಂತೆ ಮಕ್ಕಳ ಹಕ್ಕುಗಳ ಉಲ್ಲಂಘನೆ
ವಿಷಯಕ್ಕೆ ಸಂಬಂಧಿತ ಪ್ರಕರಣಗಳನ್ನು ಸಕಾಲದಲ್ಲಿ
ವರದಿ ಮಾಡಿಕೊಳ್ಳಲು ಸೂಚಿಸಿದರು.

ಮಕ್ಕಳ ನ್ಯಾಯ ( ಮಕ್ಕಳ ರಕ್ಷಣೆ ಮತ್ತು ಪೋಷಣೆ) ಕಾಯ್ದೆ-2015, ಕಲಂ 107 ಹಾಗೂ ಮಕ್ಕಳ ನ್ಯಾಯ ( ಮಕ್ಕಳ ರಕ್ಷಣೆ ಮತ್ತು ಪೋಷಣೆ) ಮಾದರಿ ನಿಯಮ -2016 ರ 8(6) ಹಾಗೂ 86(11) ಅನ್ವಯ ಪದನಿಮಿತ್ತ ಅಧಿಕಾರಿಗಳ ಹೆಸರು, ವಿಳಾಸ, ದೂರವಾಣಿ ಸಂಖ್ಯೆಗಳನ್ನು ಒಳಗೊಂಡಂತೆ ಮಾಹಿತಿ ಫಲಕವನ್ನು ಹಾಗೂ ಮಕ್ಕಳ ಸಹಾಯ ವಾಣಿ ಸಂಖ್ಯೆ 1098 ಶಾಶ್ವತ ಫಲಕದಲ್ಲಿ ತ್ವರಿತವಾಗಿ ಅಳವಡಿಸಬೇಕು ಎಂದು
ಆಯೋಗದ ಅಧ್ಯಕ್ಷರು ತಿಳಿಸಿದರು.
ಈ ವೇಳೆ ಧರ್ಮಸ್ಥಳ ಪೊಲೀಸ್ ಠಾಣೆಯ ಪಿ ಎಸ್ ಐ ಸಮರ್ಥ ಗಾಣಿಗೇರ್ ಹಾಗೂ ಸಿಬ್ಬಂದಿ ಇದ್ದರು.





