ಪವಿತ್ರ ರಮಝಾನ್ ತಿಂಗಳ ಒಂದು ತಿಂಗಳ ಉಪವಾಸದ ಬಳಿಕ ಕರಾವಳಿ ಭಾಗದಲ್ಲಿ ಈದುಲ್ ಫಿತರ್ ಹಬ್ಬದ ಸಂಭ್ರಮ ಆರಂಭವಾಗಿದೆ. ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಗಳ ಸಿದ್ಧತೆಗಳು ಜೋರಾಗಿದ್ದು, ಮನೆಮನೆಗಳಲ್ಲಿ ಹಬ್ಬದ ತಯಾರಿ ಜೋರಾಗಿ ನಡೆಯುತ್ತಿದೆ. ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಹೆಚ್ಚಾಗಿ, ಹೊಸ ಬಟ್ಟೆಗಳು, ಸಿಹಿತಿಂಡಿಗಳು ಹಾಗೂ ಹಬ್ಬದ ಅವಶ್ಯಕ ಸಾಮಗ್ರಿಗಳ ಖರೀದಿಯಲ್ಲಿ ಜನ ತೊಡಗಿದ್ದಾರೆ.

ಈದುಲ್ ಫಿತರ್ ಇಸ್ಲಾಂ ಧರ್ಮದ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಒಂದಾಗಿದ್ದು, ಪವಿತ್ರ ರಮಝಾನ್ ತಿಂಗಳ ಅಂತ್ಯವನ್ನು ಸೂಚಿಸುತ್ತದೆ. ರಮಝಾನ್ ತಿಂಗಳು ಇಸ್ಲಾಂ ಧರ್ಮದಲ್ಲಿ ಆತ್ಮಶುದ್ಧಿ, ತಪಸ್ಸು ಮತ್ತು ದೈವಭಕ್ತಿಗೆ ಮೀಸಲಾದ ಅವಧಿಯಾಗಿದ್ದು, ಮುಸ್ಲಿಮರು ಬೆಳಗಿನ ಜಾವದಿಂದ ಸೂರ್ಯಾಸ್ತದವರೆಗೆ ಉಪವಾಸವಿದ್ದು, ಆಹಾರ, ನೀರು ಹಾಗೂ ಇತರ ಭೌತಿಕ ಆಸೆಗಳನ್ನು ತ್ಯಜಿಸಿ ಸಂಯಮದಿಂದ ಬದುಕುತ್ತಾರೆ.

ಈ ಉಪವಾಸವು ಕೇವಲ ಹಸಿವು-ಬಾಯಾರಿಕೆಯನ್ನು ತಡೆದುಕೊಳ್ಳುವುದಲ್ಲ; ಇದು ಮನಸ್ಸಿನ ಶುದ್ಧತೆ, ಕೆಟ್ಟ ಚಟಗಳನ್ನು ತ್ಯಜಿಸುವುದು, ಸಹಾನುಭೂತಿ ಮತ್ತು ಧರ್ಮನಿಷ್ಠೆಯನ್ನು ಬೆಳೆಸುವ ಒಂದು ಆಧ್ಯಾತ್ಮಿಕ ತರಬೇತಿ. ಬಡವರ ನೋವನ್ನು ಅನುಭವಿಸುವ ಮೂಲಕ ಸಮಾಜದ ದುರ್ಬಲ ವರ್ಗಗಳತ್ತ ಕರುಣೆ ಮತ್ತು ಸಹಾಯ ಮನೋಭಾವ ಹೆಚ್ಚಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ರಮಝಾನ್ ತಿಂಗಳಲ್ಲಿ ‘ಝಕಾತ್’ ಮತ್ತು ‘ಫಿತ್ರ್’ ಎಂಬ ದಾನಧರ್ಮಗಳಿಗೆ ವಿಶೇಷ ಮಹತ್ವವಿದ್ದು, ಆರ್ಥಿಕವಾಗಿ ಹಿಂದುಳಿದವರು ಕೂಡ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಸಹಾಯ ಮಾಡುವುದು ಪ್ರತಿಯೊಬ್ಬ ಮುಸ್ಲಿಮರ ಕರ್ತವ್ಯವಾಗಿದೆ. ಈ ಮೂಲಕ ಸಮಾಜದಲ್ಲಿ ಸಮಾನತೆ ಮತ್ತು ಸಹಬಾಳ್ವೆ ಬಲವಾಗುತ್ತದೆ.

ರಮಝಾನ್ ಅಂತ್ಯದ ಚಂದ್ರದರ್ಶನದೊಂದಿಗೆ ಈದುಲ್ ಫಿತರ್ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ಮುಸ್ಲಿಮರು ಬೆಳಿಗ್ಗೆ ವಿಶೇಷ ‘ಈದ್ ನಮಾಜ್’ ಸಲ್ಲಿಸಿ, ಪರಸ್ಪರ ಈದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಮನೆಗಳಲ್ಲಿ ಸಿಹಿತಿಂಡಿಗಳು ತಯಾರಿಸಿ ಬಂಧು-ಬಳಗದವರೊಂದಿಗೆ ಹಂಚಿಕೊಳ್ಳುವುದು ಸಂಪ್ರದಾಯವಾಗಿದೆ.
ಹಬ್ಬದ ಪ್ರಮುಖ ಸಂದೇಶ ಶಾಂತಿ, ಸೌಹಾರ್ದತೆ, ಸಹಾನುಭೂತಿ ಮತ್ತು ದಾನಧರ್ಮವಾಗಿದ್ದು, ಮಾನವೀಯ ಮೌಲ್ಯಗಳನ್ನು ಉತ್ತೇಜಿಸುವುದು ಇದರ ಸಾರವಾಗಿದೆ.

ಉಡುಪಿ ಖಾಝಿ ಝೈನುಲ್ ಉಲಮಾ ಖಾಝಿ ಎಮ್. ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉಸ್ತಾದ್ ಅವರು, ಈದುಲ್ ಫಿತರ್ ಹಬ್ಬದ ಶುಭಾಶಯ ತಿಳಿಸಿದ್ದು ʼರಮಝಾನ್ ಮಾಸದಲ್ಲಿ ಪಾಲಿಸಿದ ಶಿಸ್ತು, ಸಂಯಮ ಮತ್ತು ಪ್ರಾರ್ಥನೆಗಳು ಜೀವನಪೂರ್ತಿ ಮುಂದುವರಿಯಬೇಕು. ಹಸಿದವರಿಗೆ ಉಣಬಡಿಸುವುದು ಮತ್ತು ಬಡವರ ಕಣ್ಣೀರು ಒರೆಸುವುದು ಈ ಹಬ್ಬದ ಮುಖ್ಯ ಉದ್ದೇಶ. ‘ಫಿತ್ರ್ ಝಕಾತ್’ ಮೂಲಕ ಪ್ರತಿಯೊಬ್ಬರೂ ಹಬ್ಬದ ಸಂತೋಷದಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು. ನೆರೆಹೊರೆಯವರು ಹಾಗೂ ಅನ್ಯಧರ್ಮೀಯರೊಂದಿಗೆ ಪ್ರೀತಿ ಮತ್ತು ವಿಶ್ವಾಸದಿಂದ ನಡೆದುಕೊಳ್ಳುವ ಮೂಲಕ ಸೌಹಾರ್ದತೆಯನ್ನು ಕಾಪಾಡಬೇಕುʼ ಎಂದರು.

ಈದಿನ.ಕಾಮ್ ಜೊತೆ ಮಾತನಾಡಿದ ಉಡುಪಿ ಜಿಲ್ಲಾ ಮುಸ್ಮಿಂ ಒಕ್ಕೂಟದ ಅಧ್ಯಕ್ಷ ಮಹಮ್ಮದ್ ಮೌಲಾ, “ಈದುಲ್ ಫಿತರ್ ಹಬ್ಬವು ಸಂತೋಷ, ಸೌಹಾರ್ದತೆ ಮತ್ತು ಮಾನವೀಯತೆಯ ಸಂಕೇತವಾಗಿದೆ. ಪರಸ್ಪರ ಪ್ರೀತಿ, ಕರುಣೆ ಮತ್ತು ಸಹಾನುಭೂತಿ ಮೌಲ್ಯಗಳನ್ನು ಬಲಪಡಿಸುವ ಈ ಹಬ್ಬದ ಸಂದರ್ಭದಲ್ಲಿ ಎಲ್ಲರೂ ಶಾಂತಿ ಮತ್ತು ಏಕತೆಯಿಂದ ಬದುಕಬೇಕು” ಎಂದು ತಿಳಿಸಿದ್ದಾರೆ. “ವಿಶ್ವದಾದ್ಯಂತ ಶಾಂತಿ ನೆಲೆಸಲಿ, ಸಮಾಜದಲ್ಲಿ ಸಹಬಾಳ್ವೆ ಮತ್ತು ಪರಸ್ಪರ ಗೌರವ ಹೆಚ್ಚಲಿ” ಎಂದು ಶುಭ ಹಾರೈಸಿದರು.

ಉಡುಪಿ ಜಿಲ್ಲಾ ಸುನ್ನೀ ಕೋ-ಆರ್ಡಿನೇಶನ್ ಅಧ್ಯಕ್ಷ ಕೆ.ಎ. ಅಬ್ದುರ್ರಹ್ಮಾನ್ ರಝ್ವಿ ಅಲ್ ಫುರ್ಖಾನಿ ಅವರು, “ಈದುಲ್ ಫಿತರ್ ಕೇವಲ ಹಬ್ಬವಲ್ಲ; ಇದು ಸೃಷ್ಟಿಕರ್ತನ ಮೇಲಿನ ಭಕ್ತಿ ಮತ್ತು ಸೃಷ್ಟಿಗಳ ಮೇಲಿನ ಪ್ರೀತಿಯ ಸಂಗಮವಾಗಿದೆ. ಉಪವಾಸದ ಮೂಲಕ ಬಡವರ ನೋವನ್ನು ಅರ್ಥಮಾಡಿಕೊಂಡು, ಝಕಾತ್ ಮತ್ತು ಫಿತರ್ ಮೂಲಕ ಸಮಾಜದಲ್ಲಿ ಆರ್ಥಿಕ ಸಮಾನತೆ ತರಲು ನಾವು ಪ್ರಯತ್ನಿಸಬೇಕು. ಜಾತಿ-ಮತ ಬೇಧ ಮರೆತು ಸೌಹಾರ್ದತೆಯನ್ನು ಬೆಳೆಸೋಣ, ಪ್ರೀತಿ ಹಂಚೋಣ” ಎಂದು ಕರೆ ನೀಡಿದ್ದಾರೆ.

ಒಟ್ಟಾರೆ, ಕರಾವಳಿ ಭಾಗದಲ್ಲಿ ಮಾತ್ರವಲ್ಲದೆ ನಾಡಿನಾದ್ಯಂತ ಈದುಲ್ ಫಿತರ್ ಹಬ್ಬವು ಧಾರ್ಮಿಕ ಆಚರಣೆಯ ಜೊತೆಗೆ ಸೌಹಾರ್ದತೆ, ಮಾನವೀಯತೆ ಮತ್ತು ಸಹಬಾಳ್ವೆಯ ಸಂದೇಶವನ್ನು ಸಾರುತ್ತಿದ್ದು, ಎಲ್ಲ ಸಮುದಾಯಗಳ ನಡುವೆ ಏಕತೆಯ ವಾತಾವರಣ ನಿರ್ಮಾಣವಾಗುತ್ತಿದೆ.

ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.




