ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಿಡಿಯಡಕ, ಐಕ್ಯುಎಸಿ, ಎನ್ಎಸ್ಎಸ್, ಕನ್ನಡ ವಿಭಾಗ ಹಾಗೂ ಮಾಸ್ ಮೀಡಿಯಾ ಫೌಂಡೇಶನ್ ಇವರ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗಾಗಿ “ಪ್ರಸ್ತುತ ವಿದ್ಯಮಾನಗಳಲ್ಲಿ ಡಿಜಿಟಲ್ ಮಾಧ್ಯಮದ ಪಾತ್ರ” ವಿಷಯದ ಕುರಿತ ಮಾಧ್ಯಮ ಕಾರ್ಯಗಾರ ಇಂದು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜಯಪ್ರಕಾಶ್ ಶೆಟ್ಟಿ ಹೆಚ್, ಇಂದಿನ ಯುಗದಲ್ಲಿ ಡಿಜಿಟಲ್ ಮಾಧ್ಯಮಗಳು ಮಾಹಿತಿ ಪ್ರಸರಣದಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿಯುತವಾಗಿ ಹಾಗೂ ನೈತಿಕತೆಯಿಂದ ಮಾಧ್ಯಮಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು.
ಇಂದಿನ ದಿನಗಳಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಫೇಕ್ ಸುದ್ದಿಗಳ ಸಮಸ್ಯೆ ಹೆಚ್ಚಾಗುತ್ತಿರುವುದನ್ನು ಉಲ್ಲೇಖಿಸಿ, ಜನರಿಗೆ ಸತ್ಯವಾದ ಮಾಹಿತಿ ಅಗತ್ಯವಿದ್ದರೂ ಕೆಲವು ಮಾಧ್ಯಮಗಳು ಅದನ್ನು ಸರಿಯಾಗಿ ನೀಡುವುದಿಲ್ಲ ಎಂಬ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಸುಳ್ಳು ಸುದ್ದಿಗಳನ್ನು ಸೃಷ್ಟಿಸದೇ, ಸತ್ಯವನ್ನು ಪರಿಶೀಲಿಸಿ ಸುದ್ದಿ ನೀಡುವ ಮಾಧ್ಯಮಗಳು ಸಮಾಜಕ್ಕೆ ಅತ್ಯಂತ ಅಗತ್ಯ. ಆದರೆ ಟಿಆರ್ಪಿ ಗಾಗಿ ನಾಟಕೀಯತೆ ಹೆಚ್ಚುತ್ತಿರುವ ಕಾಲದಲ್ಲಿ ಜನಪರ ಮಾಧ್ಯಮಗಳು ಉಳಿಯುವುದು ಕಷ್ಟಕರವಾಗುತ್ತಿದೆ. ಆದರೂ ಈ ದಿನ.ಕಾಮ್ ನಂತಹ ಮಾಧ್ಯಮಗಳು ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಈ ದಿನ.ಕಾಮ್ ಕೇವಲ ಸುದ್ದಿಗಳನ್ನು ಮಾತ್ರ ಪ್ರಕಟಿಸುವುದಲ್ಲದೆ, ಯಾರೂ ಪ್ರಕಟಿಸದ ವಿಶಿಷ್ಟ ಲೇಖನಗಳು ಮತ್ತು ವಿಶೇಷ ಸಂಚಿಕೆಗಳನ್ನು ಕೂಡ ಹೊರತರುತ್ತಿದೆ. “ನಮ್ಮ ಕರ್ನಾಟಕ”, “ಅರಿವೇ ಅಂಬೇಡ್ಕರ್” ಮೊದಲಾದ ವಿಶೇಷ ಸಂಚಿಕೆಗಳ ಮೂಲಕ ಮಾಧ್ಯಮದ ಆಶಯವನ್ನು ಜನರ ಮುಂದೆ ತಂದುಕೊಡುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಯಾವ ಮಾಧ್ಯಮ ಯಾವ ಜನಪರ ದೃಷ್ಟಿಕೋನವನ್ನು ಹೊಂದಿದೆ ಎಂಬುದು ಅದರ ಬರವಣಿಗೆ ಮತ್ತು ಮಾತಿನ ಮೂಲಕ ಗೋಚರಿಸುತ್ತದೆ. ಆ ಹಿನ್ನೆಲೆಯಲ್ಲೇ ಈ ದಿನ.ಕಾಮ್ ಜನಪರ ಧೋರಣೆಯೊಂದಿಗೆ ಕೆಲಸ ಮಾಡುತ್ತಿದೆ ಎಂದು ನಾನು ನಂಬಿದ್ದೇನೆ ಎಂದು ಹೇಳಿದರು
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದ ಈ ದಿನ.ಕಾಮ್ ಕೇಂದ್ರ ಸಂಯೋಜಕರಾದ ಸಂತೋಷ್ ಹೆಚ್.ಎಂ, ಡಿಜಿಟಲ್ ಮಾಧ್ಯಮಗಳ ವೇಗ, ವ್ಯಾಪ್ತಿ ಮತ್ತು ಪ್ರಭಾವದ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು. ಇಂದಿನ ಸಮಾಜದಲ್ಲಿ ಸುದ್ದಿಯ ವಿಶ್ವಾಸಾರ್ಹತೆ, ಮಾಹಿತಿ ಪರಿಶೀಲನೆ ಹಾಗೂ ಸಾಮಾಜಿಕ ಜಾಲತಾಣಗಳ ಜವಾಬ್ದಾರಿಯುತ ಬಳಕೆಯ ಕುರಿತು ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ಕನ್ನಡ ವಿಭಾಗ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸೌಮ್ಯಲತಾ, ಐಕ್ಯುಎಸಿ ಸಂಚಾಲಕರಾದ ಡಾ. ಲಿತಿನ್ ಬಿ.ಎಂ, ಎನ್ಎಸ್ಎಸ್ ಯೋಜನಾಧಿಕಾರಿ ನಂದೀಶ್ ಕುಮಾರ್ ಕೆ.ಸಿ, ಈ ದಿನ.ಕಾಮ್ ಉಡುಪಿ ಜಿಲ್ಲಾ ವರದಿಗಾರ ಶಾರೂಕ್ ತೀರ್ಥಹಳ್ಳಿ ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿ ಮಹಾದೇವ ಸ್ವಾಗತಿಸಿದರು. ದೇವಿಕಾ ಪದ್ಮಶಾಲಿ ಕಾರ್ಯಕ್ರಮ ನಿರೂಪಿಸಿದರು. ರಶ್ಮಿ ಧನ್ಯವಾದವಿತ್ತರು.





