ಹಿಂದೂ ಧರ್ಮದ ಶ್ರೇಣೀಕೃತ ವ್ಯವಸ್ಥೆಯೇ ಜಾತೀಯತೆಗೆ ಮೂಲವಾಗಿದ್ದು, ಇದೇ ವ್ಯವಸ್ಥೆ ಅಸ್ಪೃಶ್ಯತೆಗೆ ಕಾರಣವಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದದ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಅಭಿಪ್ರಾಯಪಟ್ಟರು.
ಅವರು ಹೆಬ್ರಿಯ ದೋರಿಯಾಲ್ನಲ್ಲಿ ಮಹಾಡ್ ಚಳುವಳಿಯ ನೆನಪಿನಲ್ಲಿ ಆಯೋಜಿಸಲಾದ “ಮಹಾಡ್ ಕೆರೆ ಚಳುವಳಿ ಕಥಾ ಕಥನಾ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮಹಾಡ್ ಚಳುವಳಿಯಲ್ಲಿ ಚೌದಾರ್ ಕೆರೆಯ ನೀರನ್ನು ಸ್ಪರ್ಶಿಸಿ ಕುಡಿದ ಘಟನೆ ದಲಿತರ ಪ್ರಥಮ ಸ್ವಾತಂತ್ರ್ಯ ಹೋರಾಟವಾಗಿದ್ದು, ಅಸ್ಪೃಶ್ಯತೆ ವಿರುದ್ಧದ ಬೃಹತ್ ಪ್ರತಿಭಟನೆ ಎಂದು ಹೇಳಿದರು.

ಮನುಷ್ಯರನ್ನು ಹುಟ್ಟಿನಿಂದಲೇ ಅಸ್ಪೃಶ್ಯರೆಂದು ಗುರುತಿಸುವ ಧಾರ್ಮಿಕ ಮನೋಭಾವವನ್ನು ಅರಿತುಕೊಳ್ಳಬೇಕಾದ ಅಗತ್ಯವಿದೆ. ಧರ್ಮದ ಹೆಸರಿನಲ್ಲಿ ಮತಗಳಿಗಾಗಿ ದಲಿತರನ್ನು ಬಳಸಿಕೊಳ್ಳುವ ಶಕ್ತಿಗಳ ಬಗ್ಗೆ ಜಾಗೃತರಾಗಿರಬೇಕು ಎಂದು ಅವರು ಎಚ್ಚರಿಸಿದರು. ಇತ್ತೀಚೆಗೆ ಹುಬ್ಬಳ್ಳಿ ಸಮೀಪ ನಡೆದ ಗರ್ಭಿಣಿ ಮಹಿಳೆಯ ಹತ್ಯೆ ಘಟನೆ ಜಾತೀಯ ಮನೋಭಾವದ ಕ್ರೂರತೆಯ ಉದಾಹರಣೆಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರ್ ಮಾತನಾಡಿ, 1927ರ ಮಾರ್ಚ್ 20ರಂದು ಮಹಾರಾಷ್ಟ್ರದ ಮಹಾಡ್ನಲ್ಲಿ ನಡೆದ ಚೌದಾರ್ ಕೆರೆ ಚಳುವಳಿ ಐತಿಹಾಸಿಕವಾಗಿದ್ದು, ಅಸ್ಪೃಶ್ಯತೆ ವಿರುದ್ಧದ ಸ್ವಾಭಿಮಾನ ಹೋರಾಟದ ಸಂಕೇತವಾಗಿದೆ ಎಂದು ಹೇಳಿದರು. ಈ ಚಳುವಳಿಯನ್ನು ನೆನೆದು ಆಚರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ವಿಶೇಷವಾಗಿ ಸಮುದಾಯದ ವಸತಿ ಪ್ರದೇಶಗಳಲ್ಲಿ ಆಚರಿಸುವುದು ಅರ್ಥಪೂರ್ಣ ಎಂದರು.
ಕಾರ್ಯಕ್ರಮದಲ್ಲಿ ಶ್ಯಾಮಸುಂದರ ತೆಕ್ಕಟ್ಟೆ, ರಾಜು ಬೆಟ್ಟಿನಮನೆ, ದೇವು ಹೆಬ್ರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಂತೋಷ ಮಾಸ್ಟರ್ ಸ್ವಾಗತಿಸಿ, ಅಣ್ಣಪ್ಪ ಮಾಸ್ಟರ್ ವಂದಿಸಿದರು.





