ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ನಿರಂತರ ಬೆಲೆ ಏರಿಕೆಯನ್ನು ಖಂಡಿಸಿ ಸಿಪಿಎಂ ಪಕ್ಷದ ವತಿಯಿಂದ ಕುಂದಾಪುರದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಅವರು, ಯುಎಸ್ ಮತ್ತು ಇಸ್ರೇಲ್ ದೇಶಗಳು ಜಗತ್ತಿನ ಕೆಲ ರಾಷ್ಟ್ರಗಳ ಮೇಲೆ ನಡೆಸುತ್ತಿರುವ ಯುದ್ಧಗಳು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿವೆ ಎಂದು ಆರೋಪಿಸಿದರು. ಯುದ್ಧದ ಪರಿಣಾಮವಾಗಿ ಗ್ಯಾಸ್ ಮಾತ್ರವಲ್ಲದೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

ಸಾಮ್ರಾಜ್ಯಶಾಹಿ ಅಮೇರಿಕಾ ಯುದ್ಧ ಸಾಮಗ್ರಿಗಳ ವ್ಯಾಪಾರವನ್ನೇ ಆಧಾರವಾಗಿಟ್ಟುಕೊಂಡಿದ್ದು, ಯುದ್ಧ ನಡೆಯದಿದ್ದರೆ ಆ ದೇಶದ ಆರ್ಥಿಕ ವ್ಯವಸ್ಥೆ ದುರ್ಬಲವಾಗುತ್ತದೆ ಎಂದು ಅವರು ಹೇಳಿದರು. ಭಾರತದ ಬಜೆಟ್ನಿಗಿಂತಲೂ ಹೆಚ್ಚಿನ ಮೊತ್ತವನ್ನು ಅಮೇರಿಕಾ ತನ್ನ ರಕ್ಷಣಾ ವೆಚ್ಚಕ್ಕೆ ಖರ್ಚು ಮಾಡುತ್ತಿದೆ ಎಂದು ಆರೋಪಿಸಿದ ಅವರು, ಸಾಮ್ರಾಜ್ಯಶಾಹಿಗಳು ಯುದ್ಧವನ್ನು ವ್ಯಾಪಾರವಾಗಿ ಮಾಡಿಕೊಂಡಿದ್ದು, ಇದರ ಪರಿಣಾಮ ಜನತೆಗೆ ತೀವ್ರ ಹೊರೆ ಆಗುತ್ತಿದೆ ಎಂದರು.
ಅಮೇರಿಕಾ ಭಾರತ ಹಾಗೂ ಪಾಕಿಸ್ತಾನಕ್ಕೆ ಯುದ್ಧ ಸಾಮಗ್ರಿಗಳನ್ನು ಸರಬರಾಜು ಮಾಡುವ ಮೂಲಕ ಲಾಭ ಗಳಿಸುತ್ತಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಎಚ್. ನರಸಿಂಹ, ತಾಲೂಕು ಕಾರ್ಯದರ್ಶಿ ಚಂದ್ರಶೇಖರ ವಿ ಸೇರಿದಂತೆ ಹಲವರು ಮಾತನಾಡಿದರು. ಪಕ್ಷದ ಸದಸ್ಯ ರಾಜು ದೇವಾಡಿಗ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಸುರೇಂದ್ರ ಎಚ್., ಶೀಲಾವತಿ, ಬಲ್ಕೀಸ್ ಹಾಗೂ ತಾಲೂಕು ಸಮಿತಿ ಸದಸ್ಯರಾದ ಕೆ. ಶಂಕರ್, ಮಹಾಬಲ ವಡೇರಹೋಬಳಿ, ಸಂತೋಷ್ ಹೆಮ್ಮಾಡಿ, ಚಂದ್ರ ಪೂಜಾರಿ, ಡಿ. ಲಕ್ಷ್ಮಣ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಮಿಕ ಮುಖಂಡರಾದ ಪ್ರಕಾಶ್ ಕೋಣಿ, ರಮೇಶ್ ವಿ., ಚಂದ್ರ ವಿ., ರಹೆಮಾನ್ ಉಪಸ್ಥಿತರಿದ್ದರು.





