ಅಂತಾರಾಷ್ಟ್ರೀಯ ರಾಜಕೀಯ ಅಸ್ಥಿರತೆ, ಯುದ್ಧ ಪರಿಸ್ಥಿತಿ, ಮಾರುಕಟ್ಟೆಯ ಏರಿಳಿತಗಳು ದೇಶದ ಆರ್ಥಿಕತೆಯನ್ನು ನೇರವಾಗಿ ತಟ್ಟುತ್ತಿರುವ ಈ ಹೊತ್ತಿನಲ್ಲಿ, ಇಂಧನವೆಂಬುದು ರಾಷ್ಟ್ರದ ಆರ್ಥಿಕ ನಾಡಿಯಾಗಿದೆ. ಶೇ.83ರಷ್ಟು ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುವ ಭಾರತಕ್ಕೆ ಇಂಧನ ಭದ್ರತೆ ಅತ್ಯಂತ ಮಹತ್ವದ ವಿಚಾರ. ಕಚ್ಚಾತೈಲವನ್ನು ದೀರ್ಘಾವಧಿಗೆ ಸಂಗ್ರಹಿಸಿಟ್ಟುಕೊಳ್ಳುವ ವ್ಯವಸ್ಥೆ ರಾಷ್ಟ್ರದ ಅಗತ್ಯವೂ ಹೌದು. ಇದೇ ಕಾರಣಕ್ಕೆ ಕೇಂದ್ರ ಸರ್ಕಾರವು ಐಎಸ್ಪಿಆರ್ಎಲ್ (ISPRL) ಮೂಲಕ ಭೂಗತ ತೈಲ ಸಂಗ್ರಹಾಗಾರಗಳ ನಿರ್ಮಾಣಕ್ಕೆ ಒತ್ತು ನೀಡುತ್ತಿದೆ. ಆದರೆ, ಬೃಹತ್ ಪ್ರಮಾಣದ ಕಚ್ಚಾತೈಲ ಸಂಗ್ರಹಗಾರಗಳ ನಿರ್ಮಾಣಕ್ಕೆ ನೀಡುತ್ತಿರುವಷ್ಟು ಮುತುವರ್ಜಿಯನ್ನು ಅಲ್ಲಿನ ಸ್ಥಳೀಯ ನಾಗರಿಕರ ಬದುಕಿಗೂ ಕಾಳಜಿ ತೋರಬೇಕಲ್ಲವೇ?

ಮಂಗಳೂರು, ಉಡುಪಿ ಸಮೀಪದ ಪಾದೂರು ಹಾಗೂ ವಿಶಾಖಪಟ್ಟಣಂನಲ್ಲಿ ಈಗಾಗಲೇ ಬೃಹತ್ ಭೂಗತ ಕಚ್ಚಾತೈಲ ಸಂಗ್ರಹಾಗಾರಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಪಾದೂರು ಘಟಕವೇ ಅತಿದೊಡ್ಡದು. ಇಲ್ಲಿ ಮಾತ್ರವೇ 2.5 ದಶಲಕ್ಷ ಮೆಟ್ರಿಕ್ ಟನ್ ತೈಲವನ್ನು ಸಂಗ್ರಹಿಸಬಹುದಾಗಿದೆ. ಈ ಮೂರು ಘಟಕಗಳಲ್ಲಿಯೇ 53.30 ಲಕ್ಷ ಮೆಟ್ರಿಕ್ ಟನ್ ಕಚ್ಚಾತೈಲವನ್ನು ತುರ್ತು ಸಂದರ್ಭಗಳಿಗೆ ಮೀಸಲಾಗಿ ಸಂಗ್ರಹಿಸಿಟ್ಟುಕೊಳ್ಳಲಾಗಿದೆ. ಇದು ದೇಶದ ಇಂಧನ ಭದ್ರತೆಯ ದೃಷ್ಟಿಯಿಂದ ಮಹತ್ವದ ಹೆಜ್ಜೆಯೇ ಸರಿ.
ಕೋವಿಡ್–19 ಅವಧಿಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿದಾಗ, ಭಾರತ ಕಡಿಮೆ ದರದಲ್ಲಿ ತೈಲ ಖರೀದಿ ಮಾಡಿ ಈ ಸಂಗ್ರಹಾಗಾರಗಳನ್ನು ಭರ್ತಿ ಮಾಡಿದ್ದೇ ದೇಶಕ್ಕೆ ಸುಮಾರು 5 ಸಾವಿರ ಕೋಟಿ ರೂಪಾಯಿಗಳ ವಿದೇಶಿ ವಿನಿಮಯ ಉಳಿತಾಯ ತಂದುಕೊಟ್ಟಿತು. ಇದು ಕೇವಲ ಆರ್ಥಿಕ ಲಾಭವಲ್ಲ ದೂರದೃಷ್ಟಿಯ ನೀತಿ ನಿರ್ಧಾರದ ಫಲವೂ ಹೌದು.

ಇನ್ನಷ್ಟು ಭದ್ರತೆಗಾಗಿ, 90 ದಿನಗಳ ಬಳಕೆಗೆ ತಕ್ಕಷ್ಟು ತೈಲ ಸಂಗ್ರಹಿಸುವ ಗುರಿಯೊಂದಿಗೆ ಸರ್ಕಾರ ಹೊಸ ಸಂಗ್ರಹಾಗಾರಗಳನ್ನು ನಿರ್ಮಿಸಲು ಮುಂದಾಗಿದೆ. ಒಡಿಶಾದ ಚಂಡಿಖೋಲ್ ಮತ್ತು ಉಡುಪಿ ಜಿಲ್ಲೆಯ ಪಾದೂರಿನಲ್ಲಿ ವಿಸ್ತರಣಾ ಘಟಕಗಳು ನಿರ್ಮಾಣ ಹಂತದಲ್ಲಿವೆ. ಈ ಎರಡೂ ಯೋಜನೆಗಳು ಪೂರ್ಣಗೊಂಡ ಬಳಿಕ ದೇಶದ ಒಟ್ಟು ಕಚ್ಚಾತೈಲ ಸಂಗ್ರಹ ಸಾಮರ್ಥ್ಯ 1.18 ಕೋಟಿ ಮೆಟ್ರಿಕ್ ಟನ್ಗಳಿಗೆ ಏರಲಿದೆ.
ದೇಶದ ವಾಣಿಜ್ಯ ಅಭಿವೃದ್ಧಿ ಹಾಗೂ ತೈಲ ಭದ್ರತೆಯ ದೃಷ್ಟಿಯಿಂದ ಇದು ಮಹತ್ವದ ಹೆಜ್ಜೆ ಹೌದು! ಆದರೆ, ಅಭಿವೃದ್ಧಿ ಹೆಸರಿನಲ್ಲಿ ಸ್ಥಳೀಯ ಜನಜೀವನದ ಮೇಲೆ ಬೀರಬಹುದಾದ ಪರಿಣಾಮಗಳನ್ನು ಕಡೆಗಣಿಸಲು ಸಾಧ್ಯವಿಲ್ಲ.
ಈ ಹಿನ್ನೆಲೆಯಲ್ಲಿ, ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾದೂರಿನಲ್ಲಿ ನಡೆಯುತ್ತಿರುವ ಎರಡನೇ ಹಂತದ ಕಾಮಗಾರಿ ಕುರಿತು ಜಿಲ್ಲಾಧಿಕಾರಿ ಸ್ವರೂಪ ಟಿ ಕೆ ನೀಡಿರುವ ಸೂಚನೆಗಳು ಮಹತ್ವ ಪಡೆದುಕೊಳ್ಳುತ್ತವೆ. ಭೂಸ್ವಾಧೀನಕ್ಕೆ ಪರಿಹಾರ ಸಿಗದೆ ಉಳಿದಿರುವ ಭೂಮಾಲೀಕರ ಸಮಸ್ಯೆ, ಬಂಡೆ ಸ್ಫೋಟದಿಂದ ಮನೆಗಳಿಗೆ ಹಾಗೂ ನೀರಿನ ಮೂಲಗಳಿಗೆ ಆಗಬಹುದಾದ ಹಾನಿ, ಪಾರಂಪರಿಕ ತಾಣಗಳ ರಕ್ಷಣೆ ಇವೆಲ್ಲವೂ ಕೇವಲ ಕಾಗದದ ಮಾತಾಗದೆ, ತುರ್ತಾಗಿ ಕಾರ್ಯರೂಪಕ್ಕೆ ಬರಬೇಕಾದ ಮುಖ್ಯ ಅಂಶಗಳಾಗಿವೆ.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸೂಚಿಸಿದಂತೆ, “ಬಂಡೆ ಸ್ಫೋಟದಿಂದ ಬಾವಿ ನೀರು ಕಲುಷಿತವಾಗುವ ಸಾಧ್ಯತೆಯನ್ನು ಗಂಭೀರವಾಗಿ ಪರಿಗಣಿಸಲೇಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ, ಹೊರನಾಡು ಕಾರ್ಮಿಕರಿಗೆ ಪ್ರತ್ಯೇಕ ವಸತಿ ವ್ಯವಸ್ಥೆ ಇವುಗಳು ಅಭಿವೃದ್ಧಿ ಮತ್ತು ಮಾನವೀಯತೆಯ ನಡುವೆ ಸಮತೋಲನ ಸಾಧಿಸಲು ಅಗತ್ಯ. ಮೊದಲ ಹಂತದ ಕಾಮಗಾರಿಯಲ್ಲಿ ಸ್ಥಳೀಯರಿಗೆ ಉದ್ಯೋಗವಕಾಶ ನೀಡಲಿಲ್ಲ ಎಂಬ ಆರೋಪ ಸಹ ಕೇಳಿ ಬರುತ್ತಲಿದೆ. ಮೊದಲ ಹಂತದ ಕಾಮಗಾರಿಯಲ್ಲಿ ಸ್ಥಳೀಯರು ಅನುಭವಿಸಿದ ಸಮಸ್ಯೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕೆಂಬ ಜನಪ್ರತಿನಿಧಿಗಳ ಆತಂಕವೂ ಸಹಜವೇ. ಇಂಧನ ಭದ್ರತೆ ರಾಷ್ಟ್ರದ ಅಗತ್ಯವಾದರೂ, ಅದರ ಹೊರೆ ಸ್ಥಳೀಯ ಜನರ ಮೇಲೆ ಮಾತ್ರ ಬೀಳಬಾರದು”

ಈದಿನ.ಕಾಮ್ ಜೊತೆ ಮಾತನಾಡಿದ ಪರಿಸರ ತಜ್ಞ ಪ್ರೇಮಾನಂದ ಕಲ್ಮಾಡಿ, “ಇದು ದೇಶದ ರಕ್ಷಣೆಗೆ ಸಂಬಂಧಿಸಿದ ಮಹತ್ವದ ಘಟಕವಾಗಿರುವುದರಿಂದ ಇದನ್ನು ವಿರೋಧಿಸುವ ಪ್ರಶ್ನೆಯೇ ಇಲ್ಲ. ಆದರೆ ಈ ಯೋಜನೆಯಿಂದಾಗಿ ಕೆಲವರ ಗದ್ದೆಗಳು ಹಾಗೂ ಭೂಮಿಗಳು ಹಾನಿಗೊಳಗಾಗುರುವ ಸಾಧ್ಯತೆ ಇರುವುದರಿಂದ, ಬಾಧಿತ ಸ್ಥಳೀಯರಿಗೆ ಸೂಕ್ತ ಹಾಗೂ ನ್ಯಾಯಸಮ್ಮತ ಪರಿಹಾರ ನೀಡಬೇಕು” ಎಂದು ಅಭಿಪ್ರಾಯಪಟ್ಟರು.
ಈ ಸಂಬಂಧ ಜಿಲ್ಲಾಡಳಿತದ ನೇತೃತ್ವದಲ್ಲಿ ಹಾಗೂ ಶಾಸಕರ ಉಸ್ತುವಾರಿಯಲ್ಲಿ ಹಕ್ಕು–ಬಾಧ್ಯತಾ ಸಮಿತಿಯನ್ನು ರಚಿಸಬೇಕಾಗಿದೆ ಎಂದು ಹೇಳಿದರು. ದೇಶದ ಹಿತಕ್ಕಾಗಿ ಯೋಜನೆ ಜಾರಿಯಾಗುವಾಗ, ಸ್ಥಳೀಯರಿಗೆ ಸರಿಯಾದ ರೀತಿಯಲ್ಲಿ ಪರಿಹಾರ ಸಿಗುವುದು ಅತ್ಯಂತ ಅಗತ್ಯ. ಹೆಚ್ಚಿನ ಸಂದರ್ಭಗಳಲ್ಲಿ ಸರ್ಕಾರ ವಿವಿಧ ಯೋಜನೆಗಳು ಹಾಗೂ ಭರವಸೆಗಳನ್ನು ನೀಡಿದರೂ, ಪರಿಹಾರಕ್ಕಾಗಿ ಸ್ಥಳಿಯರನ್ನು ಅಲೆದಾಡಿಸುವ ಪರಿಸ್ಥಿತಿ ಎದುರಾಗುತ್ತಿರುವುದು ಮುಂದುವರೆಯುತ್ತಲೇ ಇದೆ. ಆದ್ದರಿಂದ ಸರ್ಕಾರ ಘೋಷಿಸಿರುವ ಪರಿಹಾರದ ಮೊತ್ತವನ್ನು ಮೊದಲ ಹಂತದಲ್ಲೇ ವಿತರಿಸಿ, ಸ್ಥಳೀಯರಿಗೆ ತಕ್ಷಣ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಕಚ್ಚಾತೈಲ ಸಂಗ್ರಹಾಗಾರಗಳು ಭಾರತದ ಆರ್ಥಿಕ ಹಾಗೂ ತಂತ್ರಜ್ಞಾನಿಕ ಶಕ್ತಿಯ ಸಂಕೇತ. ಆದರೆ ಅವುಗಳ ಯಶಸ್ಸು ಅಳೆಯಬೇಕಾಗಿರುವುದು ಕೇವಲ ಸಂಗ್ರಹ ಸಾಮರ್ಥ್ಯದಿಂದಲ್ಲ, ಸ್ಥಳೀಯ ಜನರ ವಿಶ್ವಾಸ, ಪರಿಸರ ಸಂರಕ್ಷಣೆ ಮತ್ತು ನ್ಯಾಯಸಮ್ಮತ ಪರಿಹಾರದ ಮೂಲಕವೇ. ಅಭಿವೃದ್ಧಿ ಜನವಿರೋಧಿಯಾಗದೆ, ಜನಸಹಭಾಗಿತ್ವದೊಂದಿಗೆ ಸಾಗಿದಾಗ ಮಾತ್ರ ಅದು ನಿಜವಾದ ರಾಷ್ಟ್ರ ನಿರ್ಮಾಣವಾಗುತ್ತದೆ.

ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.




