- ಉಸ್ತುವಾರಿ ಸಚಿವರಾಗಿ ಬಡವರಿಗೆ ಮತು ನಿಜವಾದ ಅರ್ಹರಿಗೆ ನ್ಯಾಯ ಕೊಡಿಸುವಲ್ಲಿ ಸಂಪೂರ್ಣ ವಿಫಲ
- ಸಚಿವ ಈಶ್ವರ ಖಂಡ್ರೆ ವಿರುದ್ಧ ರಾಜ್ಯಪಾಲ, ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಭಗವಂತ ಖೂಬಾ
ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನನ್ನ ಗಮನಕ್ಕೆ ತಂದು ಹೊರಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಬೇಕೆಂದು ಸಚಿವ ಈಶ್ವರ್ ಖಂಡ್ರೆ ಅವರು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಅಲ್ಲಿಂದ, ಎಲ್ಲ ಇಲಾಖೆಗಳಿಗೆ ಪತ್ರ ರವಾನೆ ಮಾಡಿಸಿದ್ದಾರೆ. ಅವರನ್ನು ರಾಜ್ಯ ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿ ರಾಜ್ಯಪಾಲ ಥಾವರಚಂದ್ ಗೇಹ್ಲೋಟ್ ಮತ್ತು ಸಿಎಂ ಸಿದ್ದರಾಮಯ್ಯ ಅವರಿಗೆ ಕೇಂದ್ರ ಸಚಿವ ಭಗವಂತ ಖೂಬಾ ಪತ್ರ ಬರೆದಿದ್ದಾರೆ.
ಪತ್ರಿಕಾ ಪ್ರಕಟಣೆಗೆ ಬಿಡುಗಡೆ ಮಾಡಿರುವ ಕೇಂದ್ರ ಸಚಿವ ಭಗವಂತ ಖೂಬಾ, “ಸರ್ಕಾರದಲ್ಲಿ ಯಾವುದೇ ನೇಮಕಾತಿಗಳು ಪಾರದರ್ಶಕ ಮತ್ತು ನ್ಯಾಯಯುತ ಹಾಗೂ ಅಯ್ಕೆ ನಿಯಮಾವಳಿ ಹಾಗೂ ಅವರ ಅರ್ಹತೆ ಮೇಲೆ ಆಯ್ಕೆ ಮಾಡುವುದು ಸರ್ಕಾರದ ನಿಯಮ. ಆದರೆ ಒಬ್ಬ ಉಸ್ತುವಾರಿ ಸಚಿವರಾಗಿ ಬಡವರಿಗೆ ಮತು ನಿಜವಾದ ಅರ್ಹರಿಗೆ ನ್ಯಾಯ ಕೊಡಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ, ತಮ್ಮದೇ ಒಂದು ಸ್ವತಂತ್ರ ನಿಯಮವನ್ನು ರೂಪಿಸಿ ತಾವು ಹೇಳಿದಂತೆ ನಡೆಯಬೇಕೆಂಬುದು ಇವರ ಪತ್ರದ ಸಾರಾಂಶವಾಗಿದೆ. ಇದು ಈಶ್ವರ ಖಂಡ್ರೆಯವರು ಅಧಿಕಾರಿಗಳ ಮೇಲೆ ನಡೆಸುತ್ತಿರುವ ದಬ್ಬಾಳಿಕೆಯಾಗಿದೆ” ಎಂದು ಸಚಿವ ಖೂಬಾ ಪತ್ರದಲ್ಲಿ ತಿಳಿಸಿದ್ದಾರೆ.
“ಸಚಿವರಾಗಿ ಪ್ರಮಾಣವಚನ ಸ್ವಿಕರಿಸುವ ಸಂದರ್ಭದಲ್ಲಿ ಸಂವಿಧಾನ ಬದ್ದವಾಗಿ ಅಧಿಕಾರಿವನ್ನು ಯಾವುದೇ ತಾರತಮ್ಯ ಮಾಡದೆ ತನ್ನ ಕರ್ತವ್ಯವನ್ನು ನಿರ್ವಹಿಸುತ್ತೇನೆಂದು ಪ್ರಮಾಣ ಸ್ವೀಕರಿಸಿ, ಇಂದು ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡು, ಸಂವಿಧಾನ ವಿರೋಧಿ ನಡೆ ಅನುಸರಿಸುವ ಮೂಲಕ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದಿರುವುದು ಇವರ ದುರಾಡಳಿತಕ್ಕೆ ಸಾಕ್ಷಿಯಾಗಿದೆ. ಇದು ಅರ್ಹ, ಬಡ ಮತ್ತು ದಿನ ದಲಿತರಿಗೆ ಅನ್ಯಾಯ ಮಾಡುವ ಉದ್ದೇಶ ಸ್ಪಷ್ಟವಾಗಿದೆ. ನೌಕರರ ನೇಮಕಾತಿಯನ್ನು ನನ್ನ ಗಮನಕ್ಕೆ ತಂದು ಕ್ರಮ ಕೈಗೊಳ್ಳಿ ಎನ್ನಲು ಇವರೇನು ಕೃಷಿ ತಜ್ಞರಾ, ವೈದ್ಯರಾ, ಸಾಮಾಜಿಕ ಕಾರ್ಯಕರ್ತರಾ, ರಾಷ್ಟ್ರಪ್ರಶಸ್ತಿ ಪುರಸ್ಕೃತರಾ, ವಿಷಯ ಪರಿಣಿತರಾ ಅಥವಾ ಆಯ್ಕೆ ಸಮಿತಿ ಅಧ್ಯಕ್ಷರಾ? ಇವರಿಗೆ ತಮ್ಮದೆ ರಾಜ್ಯ ಸರ್ಕಾರದ ಆಯ್ಕೆ ನಿಯಮಗಳ ಮೇಲೆ ನಂಬಿಕೆಯಿಲ್ಲವೇ?, ಅಥವಾ ಅಧಿಕಾರಿಗಳನ್ನು ಮುಂದು ಮಾಡಿ, ಭ್ರಷ್ಟಾಚಾರದ ಮೂಲಕ ತಾವು ಹೇಳಿದವರನ್ನೆ ನೇಮಕ ಮಾಡಿ ಎನ್ನುವ ಭಯದ ವಾತಾವರಣ ನಿರ್ಮಾಣ ಮಾಡಿ ಅಧಿಕಾರಿಗಳ ಮೂಲಕ ಹಣ ಸಂಗ್ರಹಿಸಲು ಸಂಚು ರೂಪಿಸುತ್ತಿರುವುದು ಕಂಡು ಬರುತ್ತಿದೆ” ಎಂದು ಖಂಡ್ರೆ ವಿರುದ್ಧ ಹರಿಹಾಯ್ದಿದ್ದಾರೆ.
“ಸಂವಿಧಾನದ ಮೇಲೆ ನಂಬಿಕೆಯಿಟ್ಟು, ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು ಹಾಗೂ ಎಲ್ಲಾ ಸಮಾಜದವರಿಗೆ, ಸಾಮಾಜಿಕ ನ್ಯಾಯಕೊಡುವ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಆದರೆ ತಮ್ಮ ಸಂಪುಟದ ಸಚಿವ ಈಶ್ವರ ಖಂಡ್ರೆಯವರು, ತಮ್ಮ ಸಿದ್ದಾಂತ, ನಂಬಿಕೆ ಮತ್ತು ಸರ್ಕಾರದ ನಿಯಮಾವಳಿಗಳ ಮೇಲೆ ನಂಬಿಕೆ ಇಡದೆ ತಮ್ಮದೆ ಸ್ವತಂತ್ರ ನಿಯಮವನ್ನು ರಚಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಿ, ತಾನಾಶಾಹಿ ಸಂಸ್ಕೃತಿಯನ್ನು ಬೀದರ ಜಿಲ್ಲೆಯಲ್ಲಿ ನಡೆಸುತ್ತಿದ್ದಾರೆ. ಇದರಿಂದ ಜಿಲ್ಲೆಯ ಜನತೆ ಸಹ ಬೇಜಾರಾಗಿ ಆಕ್ರೋಶ ಸ್ಪೋಟಗೊಂಡಿದೆ. ಇದೇನಾ ನಿಮ್ಮ ಆಡಳಿತ? ಎಲ್ಲಾ ವರ್ಗದವರಿಗೆ ನೀಡುವ ಸಾಮಾಜಿಕ ನ್ಯಾಯ ಇದೇನಾ?” ಎಂದು ಮುಖ್ಯಮಂತ್ರಿಗಳಿಗೆ ಕೇಂದ್ರ ಸಚಿವ ಖೂಬಾ ಪ್ರಶ್ನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ ? ಬೀದರ್ | ಆರೋಗ್ಯ ಕ್ಷೇಮ ಕೇಂದ್ರದಲ್ಲಿ ಭ್ರಷ್ಟಾಚಾರ; ತನಿಖೆಗೆ ಆಗ್ರಹ
“ಈಶ್ವರ ಖಂಡ್ರೆಯವರಿಗೆ ದೇಶದ ಸಂವಿಧಾನ ಹಾಗು ಆಡಳಿತ ಯಂತ್ರದ ಮೇಲೆ ನಂಬಿಕೆಯಿಲ್ಲಾ, ವಿಶೇಷವಾಗಿ ಸರ್ಕಾರಿ
ನೌಕರರನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಇಂತಹ ಪತ್ರ ಬರೆದು ದುಸ್ಸಾಹಸಕ್ಕೆ ಕೈ ಹಾಕಿರುವುದರಿಂದ ತಕ್ಷಣವೇ ಅವರನ್ನು ತಮ್ಮ ಸಂವಿಧಾನ ಬದ್ದ ಹಕ್ಕನ್ನು ಚಲಾಯಿಸಿ, ರಾಜ್ಯ ಸಚಿವ ಸಂಪುಟದಿಂದ ಕೈ ಬಿಡಲು ಕ್ರಮವಹಿಸಬೇಕೆಂದು” ಸಚಿವ ಖೂಬಾ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.




