ವಿದ್ಯುತ್ ಖಾಸಗೀಕರಣ, ಬಲವಂತದ ಭೂಸ್ವಾಧೀನ ಕ್ರಮ ಕೈಬಿಡುವುದು, ಬಿಜೆಪಿ ಸರ್ಕಾರ ತಂದಿದ್ದ ಕಾರ್ಮಿಕ ವಿರೋಧಿ ಕಾನೂನುಗಳನ್ನು ರದ್ದುಪಡಿಸುವುದು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕ ಸಮಿತಿಯು ನ.26ರ ಬುಧವಾರದಂದು ʼಬೃಹತ್ ಬೆಂಗಳೂರು ಚಲೋʼ ಆಯೋಜಿಸಿದೆ.
ಕೇಂದ್ರ ಸರ್ಕಾರದ ರೈತ-ಕಾರ್ಮಿಕ ವಿರೋಧಿ ನೀತಿಗಳಿಂದ ಬೇಸತ್ತ ಜನ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳನ್ನು ರದ್ದುಪಡಿಸುತ್ತೇವೆಂದು ನೀಡಿದ್ದ ಭವರವಸೆಯನ್ನೂ ನಂಬಿದ್ದಾರೆ. ಆದರೆ, ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳಾದರೂ ಆ ಮಾತುಗಳೆಲ್ಲ ಭರವಸೆಗಳಾಗಿಯೇ ಉಳಿದಿವೆ. ಬಿಜೆಪಿಯಂತೆ ಕಾಂಗ್ರೆಸ್ ಕೂಡ ಶ್ರಮಿಕರ ವಿರುದ್ಧವೇ ಕೆಲಸ ಮಾಡುತ್ತಿದ್ದು, ಬಂಡವಾಳಿಗರ ಪರವಾಗಿ ನಿಲ್ಲುವಂತೆ ತೋರುತ್ತಿದೆ ಎಂದು ಸಮಿತಿಯು ಆರೋಪಿಸಿದೆ.
ಬಲವಂತದ ಭೂಸ್ವಾಧೀನಗಳನ್ನು ಕೈಬಿಡುವುದು, ಉಳುಮೆ ಮಾಡುತ್ತಿರುವ, ಅರ್ಜಿ ಸಲ್ಲಿಸಿರುವ ಹಾಗೂ ಬೇರೆ ಭೂಮಿ ಇಲ್ಲದ ಬಗರ್ ಹುಕುಂ ರೈತರಿಗೆ ‘ಒನ್ ಟೈಂ ಸೆಟಲ್ಮೆಂಟ್’ ಆಧಾರದಲ್ಲಿ ಭೂಮಿ ಮಂಜೂರು ಮಾಡುವ ಗಟ್ಟಿ ತೀರ್ಮಾನ ಮಾಡುವುದು, ಅರಣ್ಯವಾಸಿಗಳನ್ನು ಅತಂತ್ರ ಸ್ಥಿತಿಯಿಂದ ಪಾರು ಮಾಡಲು ಮುಂದಾಗುವುದು, ಅರಣ್ಯ ಹಕ್ಕು ಕಾಯ್ದೆ 2006ರ ಪ್ರಕಾರ ಆದಿವಾಸಿಗಳಿಗೆ ಮಾತ್ರವಲ್ಲದೆ, ಎಲ್ಲಾ ಅರಣ್ಯವಾಸಿಗಳಿಗೂ ಭೂಮಿ ಹಕ್ಕು ನೀಡುವುದು, ಭೂಮಿ ಖಾತೆಗಳನ್ನು ಯಾವುದೇ ಕಾರಣಕ್ಕೂ ರದ್ದುಪಡಿಸಕೂಡದು, ವಸತಿ ನಿವೇಶನಗಳ ಹಂಚಿಕೆಗೆ ಸರ್ಕಾರ ಮೆಗಾ ಯೋಜನೆ ರೂಪಿಸುವುದು, ‘ಪ್ರತಿಯೊಬ್ಬರಿಗೂ ಸೂರು’ ಸರ್ಕಾರದ ಕಾರ್ಯನೀತಿ ಜಾರಿ ಮಾಡುವುದು, ರೈತರ ಬೆಳೆಗಳಿಗೆ ಬೆಂಬಲ ಬೆಲೆ ಪರಿಷ್ಕರಿಸುವುದು, ಕಬ್ಬಿನ ಬೆಲೆಯಲ್ಲಿ ಆಗುತ್ತಿರುವ ಅನ್ಯಾಯವನ್ನು ತಡೆಯಲು ರಾಜ್ಯ ಬೆಲೆ ನಿಗದಿ ನೀತಿಯನ್ನು ರೂಪಿಸುವುದು, ಸ್ವಾಮಿನಾಥನ್ ವರದಿ ಜಾರಿ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವುದು, ಮೈಕ್ರೋ ಫೈನಾನ್ಸ್ ಹಾವಳಿಯಿಂದ ಜನಸಾಮಾನ್ಯರನ್ನು ಮುಕ್ತರಾಗುವಂತೆ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳ ಕುರಿತು ಚರ್ಚಿಸಲಾಗುತ್ತದೆ ಎಂದು ಸಮಿತಿಯ ಮುಖಂಡರು ತಿಳಿಸಿದ್ದಾರೆ.





