ಮೈಸೂರು ಜಿಲ್ಲೆ, ಹುಣಸೂರು ತಾಲ್ಲೂಕು, ಹನಗೋಡು ಹೋಬಳಿ ಭರತವಾಡಿ ಗ್ರಾಮದ ದಲಿತ ಪೌರ ಕಾರ್ಮಿಕ ಮಹಿಳೆ ಜಾನಕಮ್ಮ ಎಂಬುವರ ಜಮೀನಿಗೆ ಹೋಗಲು ಸವರ್ಣಿಯರು ದಾರಿ ನೀಡದೆ, ಬೆಳೆ ಬೆಳೆಯಲಾರದೆ ಭೂಮಿಯನ್ನು ಪಾಳು ಬಿಟ್ಟಿರುವ ಘಟನೆ ನಡೆದಿದೆ.
ದಿನಾಂಕ-02-06-2025 ರ ಸೋಮವಾರ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮುನಿಯಪ್ಪ, ದಸಂಸ ಮುಖಂಡರು ದಲಿತ ಮಹಿಳೆ ಜಾನಕಮ್ಮ ಅವರ ಜಮೀನಿಗೆ ಭೇಟಿ ಸ್ಥಳ ಪರಿಶೀಲನೆ ನಡೆಸಿದರು.
ದಸಂಸ ಮುಖಂಡ ನಿಂಗರಾಜ್ ಮಲ್ಲಾಡಿ ಮಾತನಾಡಿ ದಲಿತ ಪೌರ ಕಾರ್ಮಿಕ ಮಹಿಳೆ ಜಾನಕಮ್ಮಳಿಗೆ 4-00 ಎಕರೆ ಜಮೀನಿದ್ದು, ಕಳೆದ ಒಂದು ವರ್ಷದಿಂದ ಈ ಜಮೀನಿಗೆ ತಿರುಗಾಡಲು ಪಕ್ಕದ ಜಮೀನಿನ ಸವರ್ಣಿಯರು ರಸ್ತೆ ಕೊಡದೆ ಜಮೀನಿನಲ್ಲಿ ಬೆಳೆಯನ್ನು ಬೆಳೆಯದೆ ಪಾಳು ಬಿಟ್ಟಿರುತ್ತಾರೆ.
ಈ ಬಗ್ಗೆ ದಲಿತ ಮಹಿಳೆ ಜಾನಕಮ್ಮ ಪಕ್ಕದ ಜಮೀನಿನ ಸವರ್ಣಿಯರಾದ ಮಹದೇವ, ಮಂಜುನಾಥ್ ರವರನ್ನು ಪರಿಪರಿಯಾಗಿ ಬೇಡಿಕೊಂಡರೂ ಕರುಣೆ ತೋರದೆ ರಸ್ತೆಯನ್ನು ಬಿಡದೆ ತುಂಬಾ ತೊಂದರೆ ಕೊಡುತ್ತಿದ್ದಾರೆ. ನೀವು ಕೀಳು ಜಾತಿಯವರು, ನಮ್ಮ ಜಮೀನಿನ ಬಳಿ ತಿರುಗಾಡಿದರೆ ನಮ್ಮಗೆ ಅಪವಿತ್ರವಾಗುತ್ತದೆ ಎಂದು ಹೀಯಾಳಿಸಿದ್ದಾರೆ. ಮಾನಸಿಕ ಕಿರುಕುಳ ನೀಡುತ್ತಾ ನೀವು ನಿಮ್ಮ ಜಮೀನನ್ನು ಮಾರಾಟ ಮಾಡಿ ಹೊರಟು ಹೋಗಿ ಎಂದು ದೌರ್ಜನ್ಯ ಮಾಡುತ್ತಿದ್ದಾರೆ. ಈ ಬಗ್ಗೆ ತಹಸೀಲ್ದಾರ್ ರವರಿಗೆ ದೂರು ನೀಡಿದಾಗ ತಹಸೀಲ್ದಾರ್ ರವರು ದಾರಿ ಬಿಟ್ಟುಕೊಡುವಂತೆ ತಿಳಿ ಹೇಳಿ ಬಂದಿದ್ದರೂ ಸಹ ಮೇಲ್ಕಂಡ ಸವರ್ಣಿಯರು ರಸ್ತೆ ಬಿಟ್ಟು ಕೊಡದೆ ಉಡಾಫೆ ಮಾಡಿರುತ್ತಾರೆ.
ಈ ವಿಚಾರವು ದಸಂಸದ ಗಮನಕ್ಕೆ ಬಂದಿದ್ದು ಕಳೆದ ದಿನ ಪೊಲೀಸ್ ಅಧಿಕಾರಿಗಳೊಂದಿಗೆ ಸ್ಥಳ ತನಿಖೆ ಮಾಡಲಾಗಿ ದಲಿತ ಪೌರ ಕಾರ್ಮಿಕ ಜಾನಕಮ್ಮಳಿಗೆ ಸವರ್ಣಿಯ ಮಹದೇವ ಮತ್ತು ಮಂಜುನಾಥ್ ರವರು ತಿರುಗಾಡುವ ರಸ್ತೆಗೆ ತಂತಿ ಬೇಲಿ ಹಾಕಿ ದಾರಿ ಬಿಡದೆ ತೊಂದರೆ ಕೊಡುತ್ತಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ತಾಲ್ಲೂಕು ಆಡಳಿತ ಈ ಪ್ರಕರಣವನ್ನು ತುಂಬಾ ಗಂಭೀರವಾಗಿ ಪರಿಗಣಿಸಿ ಜಾನಕಮ್ಮಳ ಜಮೀನಿಗೆ ತಿರುಗಾಡಲು ರಸ್ತೆಯನ್ನು ಬಿಡದೆ ತೊಂದರೆ ಕೊಡುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಂಡು ಜಮೀನಿಗೆ ತಿರುಗಾಡಲು ರಸ್ತೆ ಬಿಡಿಸಿಕೊಡಬೇಕು. ತಪ್ಪಿದರೆ ದಸಂಸವು ಈ ಅಮಾನವೀಯ ಘಟನೆಯನ್ನು ತೀವ್ರವಾಗಿ ಖಂಡಿಸಿ ಬೀದಿಗಿಳಿದು ಪ್ರತಿಭಟಿಸಲಾಗುವುದು ಎಂದರು.
ಪೋಲಿಸ್ ಇನ್ಸ್ಪೆಕ್ಟರ್ ಮುನಿಯಪ್ಪ ಮಾತನಾಡಿ ಜಾನಕಮ್ಮಳ ಜಮೀನಿಗೆ ತಿರುಗಾಡಲು ರಸ್ತೆ ಸಮಸ್ಯೆಯಾಗಿದ್ದು ಈ ಬಗ್ಗೆ ಹುಣಸೂರು ತಹಸೀಲ್ದಾರ್ ರವರ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು ಎಂದರು
ಈ ಸುದ್ದಿ ಓದಿದ್ದೀರಾ? ಮೈಸೂರು | ದಮ್ಮ ಪಯಣ ಕಾರ್ಯಕ್ರಮದಲ್ಲಿ ದಸಂಸ ಹಿರಿಯ ಹೋರಾಟಗಾರರಿಗೆ ಗೌರವ ಸಮರ್ಪಣೆ
ಭೇಟಿ ಸಂದರ್ಭದಲ್ಲಿ ದಸಂಸದ ಬಲ್ಲೇನಹಳ್ಳಿ ಕೆಂಪರಾಜು, ಮಂಜು ಸೇರಿದಂತೆ ಇನ್ನಿತರರು ಇದ್ದರು.





