ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ) ವತಿಯಿಂದ ಗ್ರೂಪ್ ಸಿ ಹುದ್ದೆಗಳ ಭರ್ತಿಗೆ ರಾಜ್ಯಾದ್ಯಂತ ಭಾನುವಾರ ಪರೀಕ್ಷೆ ನಡೆಸಲಾಗಿದೆ. ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬಲ್ಮಠದ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳ ತಪಾಸಣೆಗೆ ಕಾಲೇಜು ವಿದ್ಯಾರ್ಥಿಗಳನ್ನೇ ಬಳಸಿರುವ ಸಂಗತಿ ಬೆಳಕಿಗೆ ಬಂದಿದೆ.
‘SECURITY’ ಎಂಬ ಗೌನ್ ಹಾಕಿಕೊಂಡಿದ್ದ ವಿದ್ಯಾರ್ಥಿಗಳು, ಪರೀಕ್ಷೆ ಬರೆಯಲು ಬರುತ್ತಿದ್ದ ಅಭ್ಯರ್ಥಿಗಳನ್ನು ತಪಾಸಣೆ ನಡೆಸುತ್ತಿರುವ ಫೋಟೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆ. ಆ ಮೂಲಕ ಕೆಪಿಎಸ್ಸಿ ಅಧಿಕಾರಿಗಳು, ರಾಜ್ಯ ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷೆಯಲ್ಲೂ ನಿರ್ಲಕ್ಷ್ಯ ವಹಿಸಿರುವುದು ಕಂಡುಬಂದಿದೆ.

ಮಂಗಳೂರಿನ ಬಲ್ಮಠದಲ್ಲಿರುವ ಸರಕಾರಿ ಹೆಣ್ಣು ಮಕ್ಕಳ ಕಾಲೇಜು ಸೇರಿದಂತೆ ಮಂಗಳೂರಿನಲ್ಲಿ ಮೂರು ಕಡೆ ಪರೀಕ್ಷಾ ಕೇಂದ್ರಗಳಿದ್ದವು. ಈ ಪೈಕಿ ಬಲ್ಮಠದ ಪರೀಕ್ಷಾ ಕೇಂದ್ರದಲ್ಲಿ ಪಿಯುಸಿ, ಪದವಿ ವಿದ್ಯಾರ್ಥಿಗಳೇ ಪರೀಕ್ಷೆಗೆ ಬಂದಿದ್ದ ಅಭ್ಯರ್ಥಿಗಳನ್ನು ತಪಾಸಣೆ ನಡೆಸುತ್ತಿರುವ ದೃಶ್ಯ ಕಂಡು ಬಂದಿದೆ.
ಈ ಬಗ್ಗೆ ಮಾಹಿತಿ ತಿಳಿದ ಕೆಲವು ಮಾಧ್ಯಮ ಪ್ರತಿನಿಧಿಗಳು ಸ್ಥಳಕ್ಕೆ ತೆರಳಿದಾಗ ಕೂಡ, ಹದಿಹರೆಯದ ವಿದ್ಯಾರ್ಥಿ- ವಿದ್ಯಾರ್ಥಿನಿಯರೇ ಶಿವಮೊಗ್ಗ ಹಾಸನ ಸೇರಿ ಬೇರೆ ಬೇರೆ ಕಡೆಯಿಂದ ಆಗಮಿಸಿದ್ದ ಅಭ್ಯರ್ಥಿಗಳನ್ನು ತಪಾಸಣೆಯಲ್ಲಿ ತೊಡಗಿದ್ದರು. ಸ್ಥಳದಲ್ಲಿ ಮಹಿಳಾ ಪೊಲೀಸರನ್ನಷ್ಟೇ ಭದ್ರತೆಗೆ ನಿಯೋಜಿಸಲಾಗಿತ್ತು. ಪೊಲೀಸರು ಸ್ಥಳದಲ್ಲಿದ್ದಿದ್ದು ಬಿಟ್ಟರೆ, ತಪಾಸಣೆಗೂ ಅವರಿಗೂ ಸಂಬಂಧ ಇಲ್ಲದವರಂತೆ ಇದ್ದರು.
ರಾಜ್ಯದಲ್ಲಿ ಪಿಎಸ್ಐ ಹಗರಣ ಇನ್ನೂ ಚರ್ಚೆಯಲ್ಲಿರುವಾಗಲೇ ಈ ಬೆಳವಣಿಗೆ ನಡೆದಿದೆ. ಇದಲ್ಲದೆ, ಸ್ಥಳದಲ್ಲಿ ಅಭ್ಯರ್ಥಿಗಳನ್ನು ಪರೀಕ್ಷಿಸಲು ಯಾವುದೇ ಮೆಟಲ್ ಡಿಟೆಕ್ಟರ್ ಆಗಲೀ, ಇತರ ಯಾವುದೇ ತಪಾಸಣಾ ಉಪಕರಣಗಳನ್ನೂ ಬಳಕೆ ಮಾಡಿಲ್ಲ. ಪರೀಕ್ಷೆಯಲ್ಲಿ ನಕಲು ಆಗುವುದನ್ನು ತಡೆಯಲು ಇಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಬೇಕಾಗಿತ್ತು. ಅಲ್ಲದೆ, ಕೆಪಿಎಸ್ಸಿಯಿಂದ ನಿಯೋಜಿತ ಅಧಿಕಾರಿಗಳು ಅಥವಾ ಪೊಲೀಸರೇ ಅಭ್ಯರ್ಥಿಗಳ ತಪಾಸಣೆ ಕೈಗೊಳ್ಳಬೇಕಾಗಿತ್ತು. ಆದರೆ, ಇದ್ಯಾವುದನ್ನೂ ಮಾಡದೆ ಪರೀಕ್ಷಾ ಕೇಂದ್ರದ ಪ್ರವೇಶ ದ್ವಾರದಲ್ಲಿ ಏಳೆಂಟು ವಿದ್ಯಾರ್ಥಿಗಳೇ, ಅಭ್ಯರ್ಥಿಗಳನ್ನು ತಪಾಸಣೆ ನಡೆಸಿ ಒಳಬಿಡುತ್ತಿರುವುದು ಕಂಡು ಬಂದಿದೆ.
ಸರ್ಕಾರಿ ಪರೀಕ್ಷೆಯೊಂದಕ್ಕೆ ಕಾಲೇಜು ವಿದ್ಯಾರ್ಥಿಗಳನ್ನು ಬಳಸಿಕೊಂಡಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ರಾಜ್ಯ ಸರ್ಕಾರದ ಕೆಪಿಎಸ್ಸಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ನಕಲು ಮಾಡುವುದನ್ನು ತಡೆಯಲು ಕಟ್ಟುನಿಟ್ಟಿನ ಭದ್ರತೆ ಕೈಗೊಳ್ಳಲಾಗುತ್ತದೆ. ಕೆಪಿಎಸ್ಸಿ ನೀಡಿರುವ ಪ್ರಕಟಣೆಯಲ್ಲಿ ಭದ್ರತೆ ಉದ್ದೇಶಕ್ಕೆ ಮೊಬೈಲ್ ಜಾಮರ್, ಮೆಟಲ್ ಡಿಟೆಕ್ಟರ್, ಬಯೋ ಮೆಟ್ರಿಕ್ ಫೇಸ್ ಡಿಟೆಕ್ಷನ್ ಹಾಗೂ ಸಿಸಿ ಕ್ಯಾಮರಾಗಳನ್ನು ಬಳಕೆಗೆ ಸೂಚಿಸಲಾಗಿದೆ. ಆದರೆ, ಇದ್ಯಾವುದೇ ಇಲೆಕ್ಟ್ರಾನಿಕ್ ಉಪಕರಣಗಳನ್ನು ಇಲ್ಲಿ ಬಳಕೆ ಮಾಡಿಲ್ಲ. ಅದರ ಬದಲಿಗೆ, ಪಿಯುಸಿ, ಪದವಿ ಕಲಿಯುತ್ತಿರುವ ವಿದ್ಯಾರ್ಥಿಗಳನ್ನು ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತಪಾಸಣೆಗೆ ಬಳಸಿಕೊಳ್ಳಲಾಗಿದೆ.
ಈ ಬಗ್ಗೆ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಲ್ಲಿ ಕೆಲವರು ಪ್ರಶ್ನಿಸಿದಾಗ, ಪರೀಕ್ಷಾ ಕೇಂದ್ರಗಳಲ್ಲಿ ತಪಾಸಣೆ ನಡೆಸಲು ಪ್ರತ್ಯೇಕ ಏಜೆನ್ಸಿಗೆ ಜವಾಬ್ದಾರಿ ನೀಡಲಾಗಿದೆ. ನಮಗೂ ಅದಕ್ಕೂ ಸಂಬಂಧ ಇಲ್ಲ, ವಿದ್ಯಾರ್ಥಿಗಳನ್ನು ಬಳಕೆ ಮಾಡಿರುವ ಬಗ್ಗೆ ನಮಗೆ ಗೊತ್ತಿಲ್ಲ. ಇವರು ನಮ್ಮ ಕಾಲೇಜಿನ ವಿದ್ಯಾರ್ಥಿಗಳಲ್ಲ” ಎಂದು ತಿಳಿಸಿದ್ದಾರೆ.
ಆ ಬಳಿಕ ತಪಾಸಣೆ ನಿರತರಾಗಿದ್ದ ವಿದ್ಯಾರ್ಥಿಗಳ ಬಳಿ ಪ್ರಶ್ನಿಸಿದಾಗ, “ಬೆಂಗಳೂರಿನ ರಾಜೇಶ್ ಎಂಬವರು ನಮಗೆ ತಪಾಸಣೆಗೆ ಹೇಳಿದ್ದಾರೆ, ಬೇರೇನೂ ತಿಳಿದಿಲ್ಲ. ಏಜೆನ್ಸಿ ಬಗ್ಗೆ ಗೊತ್ತಿಲ್ಲ” ಎಂದಿದ್ದಾರೆ.
ಇತ್ತೀಚೆಗೆ ಉತ್ತರ ಕರ್ನಾಟಕ ಭಾಗದಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ನಕಲು ಮಾಡಲು ಬ್ಲೂಟೂತ್ ಬಳಸಿರುವುದು ಪತ್ತೆಯಾಗಿತ್ತು. ಭಾರೀ ಅಕ್ರಮ ನಡೆದಿರುವ ಬಗ್ಗೆ ಪ್ರಕರಣ ದಾಖಲಾಗಿದ್ದಲ್ಲದೆ, ಹತ್ತಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿತ್ತು.
ಈ ಹಿಂದೆ ಪಿಎಸ್ಐ ಪರೀಕ್ಷಾ ಅಕ್ರಮದಲ್ಲಿ ರೂವಾರಿಯಾಗಿದ್ದ ಆರ್.ಡಿ. ಪಾಟೀಲನೇ ಇದರ ರೂವಾರಿಯೆಂದು ತಿಳಿದು ಆತನನ್ನೂ ಬಂಧಿಸಲಾಗಿತ್ತು. ಇಂಥ ಅಕ್ರಮದ ನಿದರ್ಶನ ಇರುವಾಗ ಮಂಗಳೂರಿನಲ್ಲಿ ಪರೀಕ್ಷಾ ಕೇಂದ್ರದಲ್ಲಿ ಇಷ್ಟೊಂದು ನಿರ್ಲಕ್ಷ್ಯ ವಹಿಸಿರುವುದು ಭಾರೀ ಅನುಮಾನಕ್ಕೆ ಕಾರಣವಾಗಿದೆ.
‘ಇದು ಯಾವ ರೀತಿಯ ತಪಾಸಣೆ’ ಎಂದು ಪ್ರಶ್ನಿಸಿದ ನೆಟ್ಟಿಗರು
ಸದ್ಯ ಮಂಗಳೂರಿನ ಬಲ್ಮಠದ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ತಪಾಸಣೆ ನಡೆಸುತ್ತಿರುವ ಫೋಟೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆ. ಈ ಬಗ್ಗೆ ಪ್ರಶ್ನಿಸಿರುವ ನೆಟ್ಟಿಗರು, ಕೆಪಿಎಸ್ಸಿ ಪರೀಕ್ಷೆಗಾಗಿ ಮಕ್ಕಳನ್ನು ತಪಾಸನೆಯ ಉದ್ದೇಶಗಳಿಗಾಗಿ ಬಳಸುವುದೇ? ಎಂದು ಪ್ರಶ್ನಿಸಿದ್ದಾರೆ.
Using childrens for security purposes for KPSC exam is irresponsible behaviour from #KPSC
Is the @siddaramaiah govt unable to provide enough police staff? If not then shame on you ಸಿದ್ದರಾಮಯ್ಯ. @secretarykpsc didn’t expect this messup from you. pic.twitter.com/JZYkGHzckE
— 👑Che_ಕೃಷ್ಣ🇮🇳💛❤️ (@ChekrishnaCk) December 17, 2023
ಈ ಬಗ್ಗೆ ಫೋಟೋ ಹಂಚಿಕೊಂಡಿರುವ @ChekrishnaCk ಎಂಬ ‘ಎಕ್ಸ್’ ಬಳಕೆದಾರರೊಬ್ಬರು,” ಕೆಪಿಎಸ್ಸಿ ಪರೀಕ್ಷೆಗಾಗಿ ಮಕ್ಕಳನ್ನು ಬಳಸಿರುವುದು ಬೇಜವಾಬ್ದಾರಿಯ ವರ್ತನೆ. ರಾಜ್ಯ ಸರ್ಕಾರಕ್ಕೆ ಸಾಕಷ್ಟು ಪೊಲೀಸ್ ಸಿಬ್ಬಂದಿಯನ್ನು ಒದಗಿಸಲು ಸಾಧ್ಯವಾಗುತ್ತಿಲ್ಲವೇ? ಕೆಪಿಎಸ್ಸಿಯಿಂದ ಈ ರೀತಿಯ ಬೆಳವಣಿಗೆ ನಿರೀಕ್ಷಿಸಿರಲಿಲ್ಲ” ಎಂದು ಆಕ್ರೋಶ ಹೊರಹಾಕಿದ್ದಾರೆ.
ಈ ಬೆಳವಣಿಗೆಯ ಬಗ್ಗೆ ಈ ದಿನ.ಕಾಮ್ ಕೆಪಿಎಸ್ಸಿಯ ಕಾರ್ಯದರ್ಶಿ ಲತಾ ಕುಮಾರಿ ಅವರನ್ನು ಸಂಪರ್ಕಿಸಲು ಯತ್ನಿಸಲಾಯಿತಾದರೂ, ಪ್ರತಿಕ್ರಿಯೆಗೆ ಲಭ್ಯರಾಗಿಲ್ಲ.





