ಉತ್ತರ ಕನ್ನಡ ಜಿಲ್ಲೆಯಲ್ಲಿ ನೂತನವಾಗಿ 14 ಮದ್ಯದಂಗಡಿಗಳನ್ನು ತೆರೆಯಲು ಅಬಕಾರಿ ಇಲಾಖೆ ಸಜ್ಜಾಗಿದ್ದು, ಇದಕ್ಕಾಗಿ ಜನವರಿ 16 ರಂದು ಇ-ಹರಾಜು ಪ್ರಕ್ರಿಯೆ ನಡೆಯಲಿದೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಹೊಸ ಮದ್ಯದ ಮಾರಾಟ ಮಳಿಗೆಗಳ (ಸಿಎಲ್-2) ಪರವಾನಗಿ ಹಂಚಿಕೆಗಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ.
ತಾಲೂಕುವಾರು ಹಂಚಿಕೆ ವಿವರ: ಈ ಹರಾಜು ಪ್ರಕ್ರಿಯೆಯಲ್ಲಿ ಜಿಲ್ಲೆಯ 8 ಪ್ರಮುಖ ತಾಲೂಕುಗಳಿಗೆ ಮದ್ಯದಂಗಡಿಗಳನ್ನು ಹಂಚಿಕೆ ಮಾಡಲಾಗಿದೆ.ಕಾರವಾರ, ಶಿರಸಿ, ಕುಮಟಾ, ಯಲ್ಲಾಪುರ ಮತ್ತು ಅಂಕೋಲಾ, ದಾಂಡೇಲಿ: ಈ ಪ್ರತಿ ತಾಲೂಕಿಗೆ ತಲಾ 2 ಅಂಗಡಿಗಳು.
ಭಟ್ಕಳ ಮತ್ತು ಹೊನ್ನಾವರ: ತಲಾ 1 ಅಂಗಡಿಗಳನ್ನು ತೆರೆಯಲು ಪರವಾನಿಗೆ ನೀಡಲು ಸಿದ್ಧತೆ ನಡೆದಿದೆ. ಒಟ್ಟು 14 ಪರವಾನಗಿಗಳಲ್ಲಿ 10 ಸಾಮಾನ್ಯ ವರ್ಗಕ್ಕೆ, 3 ಪರಿಶಿಷ್ಟ ಜಾತಿಗೆ ಹಾಗೂ 1 ಪರವಾನಗಿಯನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲಿಡಲಾಗಿದೆ.
ಹರಾಜಿನ ಮೂಲ ಬೆಲೆಯನ್ನು ಒಟ್ಟು 11.50 ಕೋಟಿ ರೂ. ಎಂದು ನಿಗದಿಪಡಿಸಲಾಗಿದ್ದು, ಇದರಿಂದ ಸರ್ಕಾರಕ್ಕೆ ಸುಮಾರು 50 ಕೋಟಿ ರೂ.ಗೂ ಅಧಿಕ ಆದಾಯ ಬರುವ ನಿರೀಕ್ಷೆಯಿದೆ. ನಗರಸಭೆ ವ್ಯಾಪ್ತಿಗೆ 90 ಲಕ್ಷ ರೂ., ಪುರಸಭೆ ವ್ಯಾಪ್ತಿಗೆ 80 ಲಕ್ಷ ರೂ. ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ 70 ಲಕ್ಷ ರೂ. ಮೂಲ ಬೆಲೆ ನಿಗದಿಪಡಿಸಲಾಗಿದೆ.
ಇದೇ ಸಂದರ್ಭದಲ್ಲಿ ಜಿಲ್ಲೆಯ ಮದ್ಯದಂಗಡಿ ಮಾಲೀಕರು ಅಧಿಕ ದರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಗೋವಾ ಗಡಿಭಾಗದಲ್ಲಿ ಮದ್ಯದ ದರ ಕಡಿಮೆ ಇರುವುದರಿಂದ ಜಿಲ್ಲೆಗೆ ಅಕ್ರಮವಾಗಿ ಮದ್ಯ ಸರಬರಾಜಾಗುತ್ತಿದೆ. ಇದು ಸ್ಥಳೀಯ ವ್ಯಾಪಾರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.
ಈ ಸುದ್ದಿ ಓದಿದ್ದೀರಾ? ಕಾರವಾರ | ಪ್ರೀತಿ ನಿರಾಕರಣೆಗೆ ಕಿರುಕುಳ ಆರೋಪ; ಯುವತಿ ಆತ್ಮಹತ್ಯೆ, ಜೆಡಿಎಸ್ ಜಿಲ್ಲಾ ನಾಯಕಿಯ ಪುತ್ರನ ಹೆಸರು ದೂರಿನಲ್ಲಿ
ಆದ್ದರಿಂದ ಹರಾಜು ಪ್ರಕ್ರಿಯೆಗೂ ಮುನ್ನ ಗೋವಾ ಮದ್ಯದ ಅಕ್ರಮ ತಡೆಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಅಥವಾ ಹರಾಜಿನ ಮೂಲ ಬೆಲೆಯನ್ನು ಕಡಿಮೆ ಮಾಡಬೇಕು ಎಂದು ಮಾಲೀಕರು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಪರವಾನಗಿಗಳು 2029-30ರ ವರೆಗೆ ಐದು ವರ್ಷಗಳ ಅವಧಿಗೆ ಸೀಮಿತವಾಗಿರಲಿವೆ ಎಂದು ಅಬಕಾರಿ ಉಪ ಆಯುಕ್ತ ಅಮಾನಲ್ಲಾ ಖಾನ್ ತಿಳಿಸಿದ್ದಾರೆ. ಜ.16ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಎಂಎಸ್ಟಿಸಿ ಲಿಮಿಟೆಡ್ನ ಪೋರ್ಟಲ್ ಮೂಲಕ ಇ-ಹರಾಜು ನಡೆಯಲಿದ್ದು, ಈಗಾಗಲೇ ನೋಂದಾಯಿಸಿಕೊಂಡವರು ಮಾತ್ರ ಇದರಲ್ಲಿ ಭಾಗವಹಿಸಲು ಅವಕಾಶವಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.





