ಉತ್ತರ ಕನ್ನಡ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಇವರ ನಿರ್ದೇಶನದ ಮೇರೆಗೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನಾಂಕ 13.12.2025 ರಂದು ಆಯೋಜಿಸಲಾಗಿದ್ದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ದಾಖಲೆ ಪ್ರಮಾಣದ ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿವೆ.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರವಾರ ಹಾಗೂ ಉತ್ತರ ಕನ್ನಡದ ಎಲ್ಲಾ ತಾಲೂಕು ಕಾನೂನು ಸೇವಾ ಸಮಿತಿಗಳ ಆಶ್ರಯದಲ್ಲಿ ಈ ಅದಾಲತ್ ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆಯಾದ್ಯಂತ ಸ್ಥಾಪಿಸಲಾದ ಒಟ್ಟೂ 26 ಪೀಠಗಳಲ್ಲಿ, 40,187 ವ್ಯಾಜ್ಯ ಪೂರ್ವ ಪ್ರಕರಣಗಳು ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 6,992 ಪ್ರಕರಣಗಳು ಸೇರಿದಂತೆ ಒಟ್ಟು 47,179 ಪ್ರಕರಣಗಳು ಲೋಕ ಅದಾಲತ್ ನಲ್ಲಿ ಇತ್ಯರ್ಥಗೊಂಡಿವೆ.
ರಾಜಿಯಾಗಿ ಇತ್ಯರ್ಥಗೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ, ಸಾಲ ಮರುಪಾವತಿ, ಪರಿಹಾರ, ದಂಡ ಮತ್ತು ಇತರೆ ಹಣಕಾಸಿನ ವಹಿವಾಟುಗಳ ರೂಪದಲ್ಲಿ ಒಟ್ಟು ರೂ. 82,62,41,255/- (82 ಕೋಟಿ 62 ಲಕ್ಷದ 41 ಸಾವಿರದ 255 ರೂಪಾಯಿ) ಹಣ ಸಂಗ್ರಹ ಮತ್ತು ಪಾವತಿಯಾಗಿದೆ.

ನ್ಯಾಯಾಲಯದ ಮೆಟ್ಟಿಲೇರಿದ್ದ ದಾಂಪತ್ಯ ಕಲಹದ ಪ್ರಕರಣಗಳಲ್ಲಿ ಸಕಾರಾತ್ಮಕ ರಾಜಿ ಸಂಧಾನ ನಡೆದಿದೆ. ಹಳಿಯಾಳದ 3 ಹಾಗೂ ಕಾರವಾರದ 1 ಕೌಟುಂಬಿಕ ಪ್ರಕರಣಗಳು ರಾಜಿ ಮಾಡಿಕೊಳ್ಳುವ ಮೂಲಕ ದಂಪತಿಗಳು ತಮ್ಮ ಮನಸ್ತಾಪಗಳನ್ನು ಮರೆತು ಒಟ್ಟಿಗೆ ಜೀವನ ನಡೆಸಲು ಒಪ್ಪಿಕೊಂಡಿರುವುದು ಈ ಅದಾಲತ್ನ ಹೆಗ್ಗಳಿಕೆಯಾಗಿದೆ. ಇದರ ಜೊತೆಗೆ, ಜೀವನಾಂಶಕ್ಕಾಗಿ ಸಲ್ಲಿಕೆಯಾಗಿದ್ದ ಸುಮಾರು 8 ಪ್ರಕರಣಗಳು ಸಹ ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿವೆ.
ಈ ಸುದ್ದಿ ಓದಿದ್ದೀರಾ ? ಶಿರಸಿ | ನಾಲ್ಕೇ ದಿನಗಳಲ್ಲಿ ಮನೆಗಳ್ಳತನ ಪ್ರಕರಣ ಭೇದಿಸಿದ ಪೊಲೀಸರು; ₹ 9.95 ಲಕ್ಷ ಮೌಲ್ಯದ ಸೊತ್ತು ವಶ
ಇತರೆ ಪ್ರಮುಖ ರಾಜಿ ಪ್ರಕರಣಗಳ ವಿವರ: ಈ ಬಾರಿಯ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಹೆಚ್ಚಿನ ಸಂಖ್ಯೆಯ ಆರ್ಥಿಕ ಮತ್ತು ಆಸ್ತಿ ವಿವಾದಗಳು ಇತ್ಯರ್ಥಗೊಂಡಿದ್ದು ವಿಶೇಷವಾಗಿದೆ ಚೆಕ್ ಬೌನ್ಸ್ ಪ್ರಕರಣಗಳು (N.I. ಕಾಯ್ದೆ) 572, ಮೋಟಾರು ಅಪಘಾತ ಪರಿಹಾರ ಪ್ರಕರಣಗಳು 72, ಕುಟುಂಬ ಆಸ್ತಿ ವಿಭಜನೆ ಪ್ರಕರಣಗಳು 24,
ರಾಷ್ಟ್ರೀಯ ಲೋಕ ಅದಾಲತ್ ಯಶಸ್ಸಿಗೆ ಸಹಕರಿಸಿದ ಜಿಲ್ಲೆಯ ಎಲ್ಲಾ ನ್ಯಾಯಾಧೀಶರು, ವಕೀಲರು, ಸರಕಾರಿ ಅಭಿಯೋಜಕರು, ಪೊಲೀಸ್ ಇಲಾಖೆ, ಜಿಲ್ಲಾ ಗ್ರಾಹಕರ ವೇದಿಕೆ, ಕಾರ್ಮಿಕ ಇಲಾಖೆ, ನಗರಸಭೆ ಆಯುಕ್ತರು, ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿಗಳು, ನ್ಯಾಯಾಲಯದ ಸಿಬ್ಬಂದಿ ವರ್ಗ ಹಾಗೂ ಕಕ್ಷಿದಾರರಿಗೆ ಪ್ರಭಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಮಾಯಣ್ಣ ಬಿ.ಎಲ್. ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದಿವ್ಯಶ್ರೀ ಸಿ.ಎಮ್. ಅವರು ಅಭಿನಂದನೆ ಸಲ್ಲಿಸಿದ್ದಾರೆ.





