ಉತ್ತರ ಕನ್ನಡ: ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯು ಅನಿರೀಕ್ಷಿತ ಹೈಡ್ರಾಮಾಗೆ ಸಾಕ್ಷಿಯಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹಾಗೂ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಅವರ ನಡುವೆ ಔಷಧ ಮತ್ತು ವೈದ್ಯರ ಕೊರತೆಯ ವಿಷಯವಾಗಿ ತೀವ್ರ ಮಾತಿನ ಚಕಮಕಿ ನಡೆದು, ಶಾಸಕರು ಸಭೆಯಿಂದ ಅರ್ಧಕ್ಕೇ ಹೊರನಡೆದ ಘಟನೆ ಸಂಭವಿಸಿದೆ.
ಸಭೆಯ ಆರಂಭದಲ್ಲಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಎದುರಾಗಿರುವ ಔಷಧಗಳ ಅಭಾವದ ಬಗ್ಗೆ ಶಾಸಕ ಸತೀಶ್ ಸೈಲ್ ಪ್ರಸ್ತಾಪಿಸಿದರು. “ಕೆಲವು ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಅಗತ್ಯವಿರುವ ಮೂಲಭೂತ ಔಷಧಿಗಳೂ ಸಿಗುತ್ತಿಲ್ಲ” ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದಾಗ,
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಂಕಾಳ ವೈದ್ಯ ಅವರು “ಆಸ್ಪತ್ರೆಗಳಲ್ಲಿ ಮೊದಲು ವೈದ್ಯರೇ ಇಲ್ಲ ಅಂದ ಮೇಲೆ ಇನ್ನು ಔಷಧ ಇದ್ದು ಏನು ಪ್ರಯೋಜನ?” ಎಂದು ಲೇವಡಿ ಮಾಡುವ ಧಾಟಿಯಲ್ಲಿ ಉತ್ತರಿಸಿದರು.

ಸಚಿವರ ಈ ಮಾತಿನಿಂದ ಕೆರಳಿದ ಶಾಸಕರು, “ವೈದ್ಯರನ್ನು ನೇಮಕ ಮಾಡುವುದು ಯಾರ ಕೆಲಸ? ಅದು ನನ್ನ ಕೆಲಸವೇ ಅಥವಾ ಸರ್ಕಾರದ ಜವಾಬ್ದಾರಿಯೇ?” ಎಂದು ಮರುಪ್ರಶ್ನೆ ಹಾಕಿದರು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಯಿತು.
ಸಚಿವರು “ನೀವು ಸುಮ್ಮನೆ ಕುಳಿತುಕೊಳ್ಳಿ, ನಿಮ್ಮ ಕೈಯಲ್ಲಿ ಆಗದಿದ್ದರೆ ನಾನು ಮಾಡ್ತೀನಿ, ಅತಿಯಾಗಿ ಮಾತನಾಡಬೇಡಿ” ಎಂದು ಏರುಧ್ವನಿಯಲ್ಲಿ ಹೇಳಿದ್ದು ಶಾಸಕರನ್ನು ಮತ್ತಷ್ಟು ಕೆರಳಿಸಿತು.
ಸಚಿವರ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸತೀಶ್ ಸೈಲ್, “ನಾನೇನು ಅಂಗೂಠಾ ಚಾಪ್ (ಹೆಬ್ಬೆಟ್ಟು ಗುರುತಿನವನು) ಅಲ್ಲ. ಜನರ ಸಮಸ್ಯೆಗಳನ್ನು ಕೇಳಲು ನಾವು ಇಲ್ಲಿಗೆ ಬಂದಿದ್ದೇವೆ.
ಈ ಸುದ್ದಿ ಓದಿದ್ದೀರಾ ? ದಾಂಡೇಲಿಯಲ್ಲಿ ಕರಗುತ್ತಿರುವ ಕಲರವ; ಪ್ರವಾಸಿಗರ ಅಬ್ಬರಕ್ಕೆ ಬೆದರಿದ ʼಹಾರ್ನ್ಬಿಲ್ʼ ಪಕ್ಷಿ ಪ್ರಭೇದ!
ತಾಲ್ಲೂಕು ಮಟ್ಟದ ಸಮಸ್ಯೆಗಳನ್ನು ಜಿಲ್ಲಾ ಮಟ್ಟದ ಸಭೆಯಲ್ಲಿ ಚರ್ಚಿಸಬೇಡಿ ಎನ್ನುವುದಾದರೆ ನಾವು ಸಭೆಗೆ ಬರುವ ಅಗತ್ಯವೇನಿದೆ? ನಮಗೆ ಬರಲು ಇಷ್ಟವಿಲ್ಲದಿದ್ದರೆ ನೇರವಾಗಿ ಹೇಳಿ, ನಾವು ಬರುವುದಿಲ್ಲ” ಎಂದು ಗುಡುಗಿದರು. ಸಚಿವರಿಂದ ಯಾವುದೇ ಸಮಾಧಾನಕರ ಪ್ರತಿಕ್ರಿಯೆ ಬಾರದಿದ್ದಾಗ, ಶಾಸಕ ಸತೀಶ್ ಸೈಲ್ ಸಭೆಯಿಂದ ಹೊರನಡೆದರು.
ಆಡಳಿತ ಪಕ್ಷದ ಇಬ್ಬರು ಪ್ರಮುಖ ನಾಯಕರ ನಡುವಿನ ಈ ಬಹಿರಂಗ ಸಂಘರ್ಷ ಸಭೆಯಲ್ಲಿದ್ದ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ, ಶಾಸಕ ಭೀಮಣ್ಣ ನಾಯ್ಕ್ ಸೇರಿದಂತೆ ಹಿರಿಯ ಅಧಿಕಾರಿಗಳನ್ನು ದಿಗ್ಭ್ರಮೆಗೊಳಿಸಿತು. ಸಾರ್ವಜನಿಕ ಸಮಸ್ಯೆಗಳ ಚರ್ಚೆಯ ವೇದಿಕೆಯಾಗಬೇಕಿದ್ದ ಕೆಡಿಪಿ ಸಭೆಯು ಜನಪ್ರತಿನಿಧಿಗಳ ಪ್ರತಿಷ್ಠೆಯ ಕಣವಾಗಿ ಬದಲಾಗಿದ್ದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.





