ಉತ್ತರ ಕನ್ನಡ ಜಿಲ್ಲೆಯ ಕಬ್ಬು ಬೆಳೆಗಾರರ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಒದಗಿಸಿ ಅವರಿಗೆ ಎಲ್ಲಾ ರೀತಿಯ ಸಹಾಯ ಮತ್ತು ಬೆಂಬಲ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಭರವಸೆ ನೀಡಿದರು.
ಹಳಿಯಾಳ ತಹಶೀಲ್ದಾರ್ ಕಚೇರಿ ಸಭಾಭವನದಲ್ಲಿ ನಡೆದ 2025–26 ನೇ ಸಾಲಿನ ಕಬ್ಬು ನುರಿಯುವ ಹಂಗಾಮು ಪ್ರಾರಂಭ ಹಾಗೂ ಕಬ್ಬು ಸಂಬಂಧಿತ ವಿಷಯಗಳ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, “ಜಿಲ್ಲೆಯ ಕಬ್ಬು ಬೆಳೆಗಾರರ ಬಹುಕಾಲದ ಬೇಡಿಕೆಯಾದ ಕಾರ್ಖಾನೆಯ ಮುಂಭಾಗದಲ್ಲಿ ಕಬ್ಬು ತೂಕ ಅಳತೆ ಯಂತ್ರ ಅಳವಡಿಸಲು ಕಾರ್ಖಾನೆಯ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು” ಎಂದರು.
ಈ ಬಾರಿಯ ಕಬ್ಬು ನುರಿಯುವ ಹಂಗಾಮು ಆರಂಭಕ್ಕೂ ಮುನ್ನ ಕಾರ್ಖಾನೆ ಮುಂಭಾಗದಲ್ಲೇ ತೂಕಮಾಪಕ ಯಂತ್ರ ಅಳವಡಿಸಲಾಗುವುದು ಎಂದು ಕಾರ್ಖಾನೆ ಅಧಿಕಾರಿಗಳು ಸಭೆಯಲ್ಲಿ ಭರವಸೆ ನೀಡಿದರು.
ಕಬ್ಬು ಕಟಾವಣೆಯಾದ 2023–24 ನೇ ಸಾಲಿನಲ್ಲಿ ರೈತರಿಂದ ಹೆಚ್ಚುವರಿ ವಸೂಲಿ ಮಾಡಲಾದ H & T ದರವನ್ನು ₹256 ರೂಪಾಯಿಗಳು ಮೊತ್ತವನ್ನು ರೈತರಿಗೆ ಮರುಪಾವತಿಸಲು ಕಬ್ಬು ಆಯುಕ್ತರು ಆದೇಶಿಸಿದರೂ, ಕಾರ್ಖಾನೆಯವರು ಇದುವರೆಗೆ ಪಾವತಿಸಿಲ್ಲ ಎಂದು ರೈತ ಮುಖಂಡರು ಸಭೆಯಲ್ಲಿ ದೂರಿದರು. ಈ ಕುರಿತು ಜಿಲ್ಲಾಧಿಕಾರಿಯವರು ಮಾಹಿತಿ ನೀಡುತ್ತಾ, ಒಟ್ಟು ₹26 ಕೋಟಿ ಮೊತ್ತವನ್ನು ರೈತರಿಗೆ ನೀಡುವಂತೆ ಕಬ್ಬು ಆಯುಕ್ತರು ಕಾರ್ಖಾನೆಗೆ ಆದೇಶಿಸಿದ್ದರು.
ಈ ಸುದ್ದಿ ಓದಿದ್ದೀರಾ? ʼದೀಕ್ಷಾ ಬ್ರ್ಯಾಂಡ್ʼ ಮೂಲಕ ಸ್ವಾವಲಂಬನೆ ಬದುಕು; PMFME ಯೋಜನೆಯಿಂದ ಯಶಸ್ಸು ಕಂಡ ಮಹಿಳಾ ಉದ್ಯಮಿ
ಆದರೆ ಕಾರ್ಖಾನೆಯವರು ಅದಕ್ಕೆ ವಿರುದ್ಧವಾಗಿ ಹೈಕೋರ್ಟ್ ಮೊರೆ ಹೋಗಿದ್ದು, ಅಲ್ಲಿ ಎರಡು ವಾರಗಳ ತಡೆಯಾಜ್ಞೆ ದೊರೆತಿದೆ. ವಿಷಯವನ್ನು ಧಾರವಾಡದ ನ್ಯಾಯಾಲಯಕ್ಕೆ ತರಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಕಾರ್ಖಾನೆಯವರು ರೈತರಿಗೆ ಬಾಕಿ ಮೊತ್ತ ಪಾವತಿಸಬೇಕೆಂದು ಕಬ್ಬು ಆಯುಕ್ತರಿಗೆ ಪತ್ರ ಬರೆಯಲಾಗಿದೆ ಎಂದರು. ಕಳೆದ ವರ್ಷದಂತೆ ಈ ವರ್ಷವೂ ಕಬ್ಬು ಕಟಾವಿನ ಆದ್ಯತಾ ಪಟ್ಟಿ ಪ್ರಕಟಿಸಿ ಅದನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಕಾರ್ಖಾನೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಯವರು ನಿರ್ದೇಶಿಸಿದರು. ಉಲ್ಲಂಘನೆ ಕಂಡುಬಂದಲ್ಲಿ ರೈತರು ಪೊಲೀಸರಿಗೆ ಅಥವಾ ತಹಶೀಲ್ದಾರರಿಗೆ ಮಾಹಿತಿ ನೀಡಬಹುದು, ಮತ್ತು ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಜಿಲ್ಲೆಯ ರೈತರ ಹಿತರಕ್ಷಣೆಗೆ ಜಿಲ್ಲಾಡಳಿತ ಸದಾ ಬದ್ಧವಾಗಿದ್ದು, ರೈತರು ಸಹ ಅಗತ್ಯ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಕೋರಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಉಪ ವಿಭಾಗಾಧಿಕಾರಿ ಶ್ರವಣ್ ಕುಮಾರ್, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಧಾರವಾಡ ಉಪ ವಿಭಾಗಾಧಿಕಾರಿ ಶಲೇಮ್ ಹುಸೇನ್, ಡಿವೈಎಸ್ಪಿ ಶಿವಾನಂದ ಮದುರಕಂಡಿ, ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಸಕ್ಕರೆ ಕಾರ್ಖಾನೆಯ ಅಧಿಕಾರಿಗಳು, ರೈತ ಮುಖಂಡರು ಹಾಗೂ ಕಬ್ಬು ಬೆಳೆಗಾರರು ಉಪಸ್ಥಿತರಿದ್ದರು.





