ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ಭೀಮಘರ್ಜನೆ ಸಂಘಟನೆ ವತಿಯಿಂದ ಸಿ.ಜೆ.ಐ. ಗವಾಯಿ ಅವರ ಮೇಲೆ ಶೂ ಎಸೆದ ಆರೋಪಿ ರಾಕೇಶ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ, ಅವನನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ಪ್ರತಿಭಟನಾಕಾರರು ಆರೋಪಿಯ ಪ್ರತಿಕೃತಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಭೀಮಘರ್ಜನೆ ಜಿಲ್ಲಾ ಅಧ್ಯಕ್ಷ ಅರ್ಜುನ್ ಮಿಂಟಿ ಅವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, “ದೇಶದಲ್ಲಿ ದಿನದಿಂದ ದಿನಕ್ಕೆ ದಲಿತ ಸಮುದಾಯದ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ. ಇಂತಹ ಘಟನೆಗಳು ಸಂವಿಧಾನದ ಮೇಲಿನ ನೇರ ದಾಳಿಯಂತಿವೆ. ಜಾತಿವಾದಿ ಮನೋಭಾವ ಹೊಂದಿರುವವರಿಂದಲೇ ಇಂತಹ ಕೃತ್ಯಗಳು ಸಂಭವಿಸುತ್ತಿವೆ. ದಲಿತರು ಉನ್ನತ ಹುದ್ದೆಗಳಲ್ಲಿ ಇರೋದನ್ನು ಸಹಿಸಲು ಸಾಧ್ಯವಿಲ್ಲ ಎಂಬ ಮನೋಭಾವದಿಂದಲೇ ಇಂತಹ ಘಟನೆಗಳು ನಡೆಯುತ್ತಿವೆ,” ಎಂದು ಖಂಡಿಸಿದರು. ಮುಂದುವರಿದು, “ರಾಕೇಶನಂತಹ ಮನುವಾದಿಗಳು ಸಂವಿಧಾನದ ವಿರೋಧಿಗಳು. ಇವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕು. ದಲಿತರು ಸಂವಿಧಾನ ಉಳಿವಿಗಾಗಿ ಯಾವ ಮಟ್ಟಿಗೂ ಹೋರಾಡಲು ಸಿದ್ದರಾಗಿದ್ದಾರೆ. ಇಂತಹ ದೌರ್ಜನ್ಯಗಳು ಮುಂದುವರಿದರೆ ಮತ್ತೊಮ್ಮೆ ಭೀಮಕೋರೆಗಾಂವ್ ಯುದ್ಧದಂತಹ ಹೋರಾಟಗಳು ಸಂಭವಿಸಬಹುದು,” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ʼದೀಕ್ಷಾ ಬ್ರ್ಯಾಂಡ್ʼ ಮೂಲಕ ಸ್ವಾವಲಂಬನೆ ಬದುಕು; PMFME ಯೋಜನೆಯಿಂದ ಯಶಸ್ಸು ಕಂಡ ಮಹಿಳಾ ಉದ್ಯಮಿ
ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷ ಪುನೀತ್ ಮರಾಠೇ, ಉಪಾಧ್ಯಕ್ಷ ರಾಜೇಶ್ ಕೆ., ಮನೋಜ್, ಕಿರಣ್, ವಿಶ್ವ ಪಾವಸ್ಕರ್, ಸುನಿಲ್, ಪ್ರಶಾಂತ್, ಶಿವಕುಮಾರ್, ಬಸಲ್ಲಿ ರಾಜು, ಚಂದ್ರಶೇಖರ್, ಅವಿನಾಶ್, ಉಮೇಶ್ ಹಾಗೂ ಅನೇಕ ಕಾರ್ಯಕರ್ತರು ಹಾಜರಿದ್ದರು.





